ಕೊರೊನಾ ಭಯ: ಅಧಿವೇಶನ ಮುಂದೂಡಲು ಶಾಸಕರ ಆಗ್ರಹ
ಬೆಂಗಳೂರು, ಮಾ. 23: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲು ವಿಧಾನ ಮಂಡಲ ಬಜೆಟ್ ಅಧಿವೇಶನ ಮುಂದೂಡುವಂತೆ ವಿಪಕ್ಷಗಳ ನಾಯಕರು ಮನವಿ ಮಾಡಿಕೊಂಡಿದ್ದಾರೆ. ಕಲಾಪ ಸಲಹಾ ಸಮತಿ ಸಭೆ (ಬಿಎಸಿ)ಯಲ್ಲಿ ಚರ್ಚಿಸಿದ ಬಳಿಕ ಅಂತಿಮ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.
Recommended Video
ಜೊತೆಗೆ ಕೊರೊನಾ ಭೀತಿಯಿಂದ ಕೆಲ ಶಾಸಕರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಕೇವಲ 80 ಶಾಸಕರು ಮಾತ್ರ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದರು. ಕಲಾಪ ನಡೆಯುವ ಸಂದರ್ಭದಲ್ಲಿ ಕನಿಷ್ಠ 3 ಸಾವಿರ ಜನರು ವಿಧಾನಸೌಧಕ್ಕೆ ಬರುತ್ತಾರೆ. ಜನಪ್ರತಿನಿಧಿಗಳು, ಸಚಿವಾಲಯದ ಸಿಬ್ಬಂದಿ, ಶಾಸಕರು, ಸಚಿವರು, ಮಾಧ್ಯಮ ಪ್ರತಿನಿಧಿಗಳು, ಮಾರ್ಷಲ್ಗಳು, ಪೊಲೀಸ್ ಸೇರಿದಂತೆ ಭದ್ರತಾ ಸಿಬ್ಬಂದಿ ಅಧಿವೇಶನದ ನಡೆಯುವ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಇರುತ್ತಾರೆ.
ಕೃಷಿ ವಿವಿಗಳಲ್ಲಿನ ವಿದೇಶಿ ವಿದ್ಯಾರ್ಥಿಗಳಿಗೆ ಸುರಕ್ಷಿತ ವ್ಯವಸ್ಥೆ: ಬಿ.ಸಿ. ಪಾಟೀಲ್
ಇದರಿಂದ ಸಮಸ್ಯೆಯಾಗುವ ಸಾಧ್ಯತೆಗಳಿದ್ದು, ಅಧಿವೇಶನವನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಎರಡೂ ಸದನಗಳಲ್ಲಿ ಬಜೆಟ್ಗೆ ಅಂಗೀಕಾರ ಪಡೆಯದೇ ವಿಧಾನ ಮಂಡಲ ಅಧಿವೇಶನ ಮುಂದೂಡುವುದು ಸಾಧ್ಯವಿಲ್ಲ.
ಬಜೆಟ್ ಅಂಗೀಕಾರವಾಗಬೇಕಿದೆ: ಆರ್. ಅಶೋಕ್
ಬಜೆಟ್ ಮೊಟಕುಗೊಳಿಸುವ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, ನಾನು ಸ್ಪೀಕರ್ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ನಮಗೆ ಬಜೆಟ್ ಅಂಗೀಕಾರವಾಗಬೇಕಿದೆ. ಫೈನಾನ್ಸ್ ಬಿಲ್ ಪಾಸ್ ಆಗದೇ ಇದ್ರೆ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಾನು ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಕಲಾಪ ಸಲಹಾ ಸಮಿತಿಯಲ್ಲಿ ಮಾತನಾಡುತ್ತೇನೆ: ಸಿದ್ದರಾಮಯ್ಯ
ಅಧಿವೇಶನ ಮುಂದೂಡಿಕೆ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಾತಾಡುತ್ತೇನೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 9 ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಿರುವುದು ಸರಿ ಇದೆ. ಆದರೆ ಬಸ್, ಟ್ರೈನ್, ವಿಮಾನಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಒಂದು ವಾರದ ತನಕ ಬಂದ್ ಮಾಡಬೇಕು ಎಂದು ಹೇಳಿದ್ದಾರೆ.
ಅಧಿವೇಶನ ವೇಳೆ ಮೂರು ಸಾವಿರ ಜನ ಸೇರ್ತಾರೆ
ಅಧಿವೇಶನ ಮುಂದೂಡುವುದು ಸೂಕ್ತವ ಎಂದು ಜೆಡಿಎಸ್ ಶಾಸಕ, ಮಾಜಿ ಸಚಿವ ಬಂಡೆಪ್ಪ ಕಾಂಶೆಂಪೂರ್ ಹೇಳಿದ್ದಾರೆ. ಅಧಿವೇಶನ ವೇಳೆ ಮೂರು ಸಾವಿರ ಜನ ಸೇರುತ್ತಾರೆ. ನಾವು ನಮ್ಮ ನಮ್ಮ ಕ್ಷೇತ್ರಕ್ಕೆ ಹೋಗಿ ಜನರಿಗೆ ಧೈರ್ಯ ತುಂಬಬೇಕಾಗಿದೆ. ನಾವು ಬಜೆಟ್ ಮೇಲೆ ಚರ್ಚೆ ಮಾಡಿದ ತಕ್ಷಣ ಯಾವುದೇ ಬದಲಾವಣೆ ಆಗಲ್ಲ. ಸುಮ್ಮನೆ ಕಾಟಾಚಾರಕ್ಕೆ ಚರ್ಚೆ ಮಾಡೋದು ಬೇಡ.
ಪ್ರಮುಖ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಳ್ಳಲಿ. ಅದನ್ನ ಬಿಟ್ಟು ಕಾಲ ಹರಣ ಮಾಡೋದು ಬೇಡ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಅವರೂ ಸದನ ಮುಂದುಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಅಧಿವೇಶನ ಮುಂದೂಡಿ ಎಂದು ಒತ್ತಾಯ ಮಾಡಿದ್ದೇನೆ. ಇಲ್ಲಿ ಹೆಚ್ಚು ಜನ ಸೇರುತ್ತೇವೆ, ಹೀಗಾಗಿ ಸದನ ನಡೆಸುವುದು ಸರಿಯಲ್ಲ. ಅಧಿಕಾರಿಗಳು ಈಗ ವಿಧಾನಸೌಧದಲ್ಲಿ ಇರುವುದಕ್ಕಿಂತ ತಮ್ಮ ಕಚೇರಿ ಕೆಲಸಗಳಲ್ಲಿ ತೊಡಗಿಸಿಇಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಕೊರೊನಾ ಭೀತಿಯಿಂದ ಗೈರಾದ ಸದಸ್ಯರು?
ಕೊರೊನಾ ಭೀತಿಯಿಂದ ಹಲವು ಶಾಸಕರು ವಿಧಾನಸಭೆ ಕಲಾಪಕ್ಕೆ ಗೈರುಹಾಜರಾಗಿದ್ದಾರೆ ಎನ್ನಲಾಗಿದೆ. ವಿಧಾನಸಭೆಯ ಹಾಲಿ ಒಟ್ಟು 223 ಶಾಸಕರ ಪೈಕಿ ಕೇವಲ ಸುಮಾರು 80 ಶಾಸಕರು ಮಾತ್ರ ಕಲಾಪದಲ್ಲಿ ಹಾಜರಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 35 ಶಾಸಕರು, 12 ಸಚಿವರು ಹಾಗು ಬಿಜೆಪಿಯ 28 ಶಾಸಕರು ಮಾತ್ರ ವಿಧಾನಸಭೆ ಕಲಾಪದಲ್ಲಿ ಕಂಡುಬಂದರು.