"ದೊರೆಸ್ವಾಮಿ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು'
ಬೆಂಗಳೂರು. ಮಾ. 03: ಕಳೆದ ಎರಡು ದಿನಗಳಿಂದ ವಿಧಾನಸಭೆ ಕಲಾಪ ಬಲಿಯಾಗಿದ್ದರೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಮಾತ್ರ ಸುಮ್ಮನಾಗುತ್ತಿಲ್ಲ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹೊತ್ತಿಕೊಂಡಿರುವ ವಿವಾದಕ್ಕೆ ಇವತ್ತು ಮತ್ತೆ ತುಪ್ಪ ಸುರಿದಿದ್ದಾರೆ. ವಿಧಾನಸಭೆ ಕಲಾಪ ಆರಂಭಕ್ಕೂ ಮೊದಲು ವಿಧಾನಸೌಧದಲ್ಲಿ ಅವರು ಮಾತನಾಡಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರಿಗೆ ಅವಹೇಳನ ಮಾಡುತ್ತಾರೆ. ನಮಗೆ ಸ್ವಾತಂತ್ರ್ಯಹೋರಾಟಗಾರರ ಮೇಲೆ ನಂಬಿಕೆಯಿದೆ. ಸ್ವಾತಂತ್ರ್ಯ ಹೋರಾಟಗಾರು ಇದ್ದಿದ್ದರೆ ಹೀಗೆ ಮಾತನಾಡುತ್ತಿದ್ದರಾ? ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನೇ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. ದೊರೆಸ್ವಾಮಿ ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ಯಾರು ಯಾರು ಏನೇನು ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ವಯಸ್ಸಾಗಿದೆ ಅಂತ ಏನು ಬೇಕಾದರೂ ಮಾತನಾಡಬಹುದಾ? ನಮ್ಮಲ್ಲಿ ಹಠಮಾರಿ ಧೋರಣೆಯಿಲ್ಲ. ಪ್ರಧಾನಿ, ಅಂಬೇಡ್ಕರ್ ಬಗ್ಗೆ ಮಾತನಾಡಿದ್ರೆ ಸಹಿಸೋದಕ್ಕೆ ಆಗುತ್ತಾ ಎಂದು ರೇಣುಕಾಚಾರ್ಯ ಅವರು ಹೇಳಿಕೆ ಕೊಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಪಾಕಿಸ್ತಾನದ ಎಜೆಂಟ್ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಟ್ಟಿದ್ದರಿಂದ ವಿವಾದ ಉಂಟಾಗಿದೆ. ಶಾಸಕ ಯತ್ನಾಳ್ ಅವರು ಕ್ಷಮೆ ಕೇಳಬೇಕು, ತಮ್ಮ ಹೇಳಿಕೆ ಹಿಂದಕ್ಕೆ ಪಡೆಯಬೇಕೆಂದು ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿವೆ. ಈ ಮಧ್ಯೆ ರೇಣುಕಾಚಾರ್ಯ ಅವರು ಮತ್ತೆ ಮತ್ತೆ ದೊರೆಸ್ವಾಮಿ ಅವರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ.