ಸಿಎಂ ಯಡಿಯೂರಪ್ಪ ಆಪ್ತ ಶಾಸಕ ರೇಣುಕಾಚಾರ್ಯ ತಬ್ಬಿಬ್ಬಾಗಿ ಮಾತು ನಿಲ್ಲಿಸಿ ಹೋಗಿದ್ದು ಯಾಕೆ?
ಬೆಂಗಳೂರು, ಜು. 08: ಮಾಧ್ಯಮಗಳನ್ನು ನೋಡಿದ ತಕ್ಷಣ ಮಾತನಾಡಲು ಮುಂದಾಗುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರ ಗಲಿಬಿಲಿಗೊಂಡ ಪ್ರಸಂಗ ವಿಧಾನಸೌಧದಲ್ಲಿ ನಡೆಯಿತು. ಇಂದು (ಜು.08) ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ರೇಣುಕಾಚಾರ್ಯ ಭೇಟಿ ಮಾಡಿದ್ದರು. ನಂತರ ವಿಧಾನಸೌಧಕ್ಕೆ ಬಂದಿದ್ದ ಅವರು ಆ ಬಗ್ಗೆ ಸ್ಪಷ್ಟನೆ ಕೊಡಲು ಮುಂದಾದಾಗ ತಬ್ಬಿಬ್ಬಾಗಿ, ತಮ್ಮ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದ ಬೆಳವಣಿಗೆ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮುಂದುವರೆಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಲು ರೇಣುಕಾಚಾರ್ಯ ಅವರು ಬೆಳಗ್ಗೆ ಸಿಎಂ ಭೇಟಿ ಮಾಡಿದ್ದರು. ಅದರೊಂದಿಗೆ ಶಾಸಕರಾದ ಯತ್ನಾಳ್ ಹಾಗೂ ಎಚ್. ವಿಶ್ವನಾಥ್ ಅವರ ಮೇಲೆ ದೂರು ಕೊಡಲು ಯಡಿಯೂರಪ್ಪ ಅವರ ಆಪ್ತ ಬಳಗ ರೇಣುಕಾಚಾರ್ಯ ನೇತೃತ್ವದಲ್ಲಿ ದೆಹಲಿಗೆ ತೆರಳಲಿದೆ ಎಂಬ ಮಾಹಿತಿಯಿದೆ. ಆ ಮಾತು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ. ಈ ಎಲ್ಲ ಬೆಳವಣಿಗೆಗಳಿಗೆ ಸಮಜಾಯಿಸಿ ಕೊಡಲು ಶಾಸಕ ರೇಣುಕಾಚಾರ್ಯ ಮುಂದಾಗಿದ್ದರು. ಆಗ ನಡೆದಿದ್ದೇ ಬೇರೆ!
ಅನುದಾನ ಕೇಳಲು ಹೋಗಿದ್ದೆ ಅಷ್ಟೇ!
ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು, ವಿಧಾನಸೌಧಕ್ಕೆ ಬಂದಿದ್ದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ಕೊಡಲು ಮುಂದಾಗಿದ್ದರು, "ಸಿಎಂ ಯಡಿಯೂರಪ್ಪ ಅವರ ಬಳಿ ಹೋಗಿದ್ದು ಕೇವಲ ಅನುದಾನ ಕೇಳಲು ಅಷ್ಟೇ. ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಕೊರೊನಾ ಸೋಂಕು ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇನೆ" ಎಂದು ಸಿಎಂ ಭೇಟಿ ಕುರಿತು ರೇಣುಕಾಚಾರ್ಯ ಸ್ಪಷ್ಟನೆ ಕೊಟ್ಟರು.
ಇಂದು ಶಾಸಕರ ಸಭೆ ಮಾಡುತ್ತೇವೆ
ಮುಂದುವರೆದು, "ದೆಹಲಿಗೆ ಹೋಗುವ ಬಗ್ಗೆಯೂ ನಾವು ಮಾತನಾಡಿದ್ದೇವೆ. ಪಕ್ಷದಲ್ಲಿನ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ನಾವು ಶಾಸಕರು, ಇವತ್ತು ಸಭೆ ಮಾಡುತ್ತೇವೆ. ಸಭೆಯಲ್ಲಿ ಚರ್ಚಿಸಿ ದೆಹಲಿಗೆ ಹೋಗುವ ಬಗ್ಗೆ ನಿರ್ಧರಿಸುತ್ತೇವೆ. ಸಿಎಂ ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದವರು. ಬಿಜೆಪಿ ನಾಯಕತ್ವ ಅಥವಾ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ. ಹಾಗೆ ಮಾತನಾಡುವವರು ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ಸಿಎಂ ಯಡಿಯೂರಪ್ಪ ಅವರನ್ನು ಟೀಕಿಸುವುದು ಒಂದೇ, ಪಕ್ಷದ ವಿರುದ್ಧ ಮಾತನಾಡುವುದೂ ಒಂದೇ" ಎಂದು ಶಾಸಕ ಯತ್ನಾಳ್ ಅವರ ಮೇಲೆ ವಾಗ್ದಾಳಿ ನಡೆಸಿದರು.
ಪ್ರಶ್ನೆಗೆ ತಬ್ಬಿಬ್ಬಾದ ಶಾಸಕ ರೇಣುಕಾಚಾರ್ಯ!
"ಮೈಸೂರಿನಲ್ಲಿ ಯಾರೋ ಒಬ್ಬರು ಸಿಎಂ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರೂ ಪದೇ ಪದೇ ಮಾತನಾಡುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲು ರಾಜೀನಾಮೆ ಕೊಡಲಿ. ರಾಜಕಾರಣದ ಬಗ್ಗೆ ಅಸಹ್ಯ ವಾಗುತ್ತಿದೆ. ಹೀಗಾಗಿ ದೆಹಲಿಗೆ ಹೋಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇವೆ. ಇಬ್ಬರು ಶಾಸಕರ ವಿರುದ್ಧ ದೂರು ಕೊಡುತ್ತೇವೆ. ಆ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಡ ಹಾಕುತ್ತೇವೆ. ನಮ್ಮ ಹೈಕಮಾಂಡ್ ಬಹಳ ಬಲಿಷ್ಠವಾಗಿದೆ" ಎಂದರು. ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ರೇಣುಕಾಚಾರ್ಯ ತಬ್ಬಿಬ್ಬಾಗಿ ಮಾತನಾಡಲಾರದ ಪ್ರಸಂಗ ನಡೆಯಿತು.
ಪ್ರಶ್ನೆಗಳಿಂದ ಅವಕ್ಕಾದ ರೇಣುಕಾಚಾರ್ಯ!
ಶಾಸಕರ ಉಚ್ಛಾಟನೆ, ಶಾಸಕಾಂಗ ಪಕ್ಷ, ಹೈಕಮಾಂಡ್ ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಯಡಿಯೂರಪ್ಪ ಆಪ್ತ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡುತ್ತಲೇ ಇದ್ದರು. ಆಗ ಮಧ್ಯ ಪ್ರವೇಶಿಸಿದ ಮಾಧ್ಯಮ ಪ್ರತಿನಿಧಿಗಳು, "ಶಾಸಕರಿಗೆ ಎಚ್ಚರಿಕೆ ಕೊಡಲು ನೀವು ಯಾರು? ಯಾರು ಬಿಜೆಪಿ ಶಾಸಕರಿಗೆ ಎಚ್ಚರಿಕೆ ಕೊಟ್ಟರು? ಎಂದು ನಾವು ಸುದ್ದಿಕೊಡಬೇಕು. ನೀವು ಪಕ್ಷ ಹೈಕಮಾಂಡಾ? ಅಥವಾ ಪಕ್ಷದ ಅಧ್ಯಕ್ಷರಾ? ಇಲ್ಲವೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾ? ಅಥವಾ ನೀವು ಮುಖ್ಯಮಂತ್ರಿ ಆಗಿದ್ದೀರಾ? ಈ ಬಗ್ಗೆ ಮೊದಲು ಸ್ಪಷ್ಟನೆ ಕೊಡಿ" ಎಂದು ಪ್ರಶ್ನೆಗಳನ್ನು ಕೇಳಿದರು.
ಆಗ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಬ್ಬಿಬ್ಬಾದ ರೇಣುಕಾಚಾರ್ಯ ಅವರು, ಅಲ್ಲಿಂದ ತೆರಳಿದರು. "ಇರಿ ಸರ್. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸುದ್ದಿಯನ್ನು ಪ್ರಸಾರ ಮಾಡಲು ಅನುವು ಮಾಡಿಕೊಡಿ" ಎಂದು ಮಾಧ್ಯಮ ಪ್ರತಿನಿಧಿಗಳು ಮನವಿ ಮಾಡಿಕೊಂಡರೂ ಸಹ ಶಾಸಕ ರೇಣುಕಾಚಾರ್ಯ ಹಿಂದಿರುಗಿಯೂ ನೋಡಲಿಲ್ಲ! ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ಮಾತನಾಡಲು ಮುಂದಾಗಿದ್ದ ಶಾಸಕ ರೇಣುಕಾಚಾರ್ಯ ಅವರಿಗೆ ತೀವ್ರ ಇರಿಸು ಮುರುಸಾಗಿದ್ದು ಅವರ ಮುಖದಲ್ಲಿಎದ್ದು ಕಾಣುತ್ತಿತ್ತು.
Recommended Video