ರೆಬೆಲ್ ಶಾಸಕ ಶಂಕರ ನಮ್ಮವ ನಮ್ಮವ: ಕಾಂಗ್ರೆಸ್ ಘೋಷಣೆ
ಬೆಂಗಳೂರು, ಜುಲೈ 22: ವಿಧಾನಸಭೆ ಕಲಾಪದಲ್ಲಿ ಇಂದು ಆಪರೇಷನ್ ಕಮಲ, ಕಾನೂನು ಅಂಶ, ಅತೃಪ್ತ ಶಾಸಕರ ಬಗ್ಗೆ ಸಚಿತ್ರ ವರದಿಗಳನ್ನು ಮುಂದಿಡುತ್ತಾ, ರೆಬೆಲ್ ಶಾಸಕ ಆರ್ ಶಂಕರ್ ಅವರು ಇನ್ನೂ ಕಾಂಗ್ರೆಸ್ ನಲ್ಲಿದ್ದಾರೆ ಎಂದು ಘೋಷಿಸಿದರು. ಈ ಬಗ್ಗೆ ವಿವರಣೆ, ಸ್ಪಷ್ಟನೆ ಇಲ್ಲಿದೆ....
ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ
"ಸಂವಿಧಾನದಲ್ಲಿ ತ್ರಿಶಂಕು ಸ್ಥಿತಿಗೆ ಅವಕಾಶ ಇಲ್ಲ. ಆದರೆ, ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ರಾಜೀನಾಮೆ ಕೊಟ್ಟವರ ಬಗ್ಗೆ ತೀರ್ಮಾನವಾಗಿಲ್ಲ, ಅವರ ರಾಜೀನಾಮೆಯನ್ನು ಒಂದೋ ಅಂಗೀಕರಸಬೇಕು ಅಥವಾ ಇತ್ಯರ್ಥವಾಗದೆ ವಿಶ್ವಾಸಮತಕ್ಕೆ ಹಾಕಿದರೆ ಆ ಪ್ರಕ್ರಿಯೆ ಸಿಂಧುವಾಗುವುದಿಲ್ಲ. ನಿಮಗೆ ಅಧಿಕಾರವಿದೆ, ಹೀಗಾಗಿ ನೀವು ತೀರ್ಮಾನಿಸಬೇಕು" ಎಂದು ಕಾನೂನು ಸಚಿವ ಕೃಷ್ಣ ಬೈರೇಗೌಡ ಅವರು ಸಭಾಧ್ಯಕ್ಷ ಕೆ. ಆರ್ ರಮೇಶ್ ಕುಮಾರ್ ಅವರಲ್ಲಿ ಆಗ್ರಹಪೂರ್ವಕ ಮನವಿ ಮಾಡಿಕೊಂಡರು.
LIVE ಸದನದಲ್ಲಿ ಕಣ್ಣೀರಿಟ್ಟ ಅರವಿಂದ ಲಿಂಬಾವಳಿ
ಹೋಟೆಲ್ ಹಾಗೂ ರೆಸಾರ್ಟ್ ಸೇರಿರುವ ಅತೃಪ್ತ ಶಾಸಕರ ಪೈಕಿ 10 ಮಂದಿ ಕಾಂಗ್ರೆಸ್ ಶಾಸಕರು, 3 ಜೆಡಿಎಸ್ ಶಾಸಕರಿದ್ದಾರೆ. ಇವರ ಜೊತೆಗೆ, ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದ ಪಕ್ಷೇತರ ಶಾಸಕರಾದ ಆರ್ ಶಂಕರ್ ಹಾಗೂ ಎಚ್ ನಾಗೇಶ್ ಕೂಡಾ ಸೇರಿದ್ದಾರೆ. ಆದರೆ, ಶಂಕರ್ ನಮ್ಮವ ನಮ್ಮವ ಎಂದ ಕಾಂಗ್ರೆಸ್ ಪರವಾಗಿ ಸಚಿವ ಕೃಷ್ಣಬೈರೇಗೌಡ ಘೋಷಿಸಿದರು. ಆದರೆ, ಕೆಪಿಜೆಪಿಗೆ ಇವರೊಬ್ಬರ ಸ್ವತ್ತಲ್ಲದ ಕಾರಣ, ಪಕ್ಷ ವಿಲೀನ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.
ಆರ್ ಶಂಕರ್ ರಾಜೀನಾಮೆ ಬಗ್ಗೆ ಚರ್ಚೆ
"ಕೆಪಿಜೆಪಿಯಿಂದ ಆಯ್ಕೆಯಾದ ಶಾಸಕರೊಬ್ಬರು ನಿಮಗೆ ಪತ್ರ ಬರೆದು ಕಾಂಗ್ರೆಸ್ ಜತೆ ವಿಲೀನ ಆಗುವುದಾಗಿ ನಿಮಗೆ ಪತ್ರ ಬರೆಯುತ್ತಾರೆ. ಅದಾದ ಮೇಲೆ ಅವರು ಸುದ್ದಿ ಮಾಧ್ಯಮಕ್ಕೆ ಹೇಳಿಕೆ ಕೂಡ ನೀಡುತ್ತಾರೆ. ಅವರು ಇಂದು ಕಾಂಗ್ರೆಸ್ನ ಶಾಸಕರೂ ಆಗಿದ್ದಾರೆ. ಆದರೆ, ರಾಜ್ಯಪಾಲರಿಗೆ ಪತ್ರ ಬರೆದಿರುವ ಅವರು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆದು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳುತ್ತಾರೆ" ಎಂದು ಕೃಷ್ಣ ಬೈರೇಗೌಡ ಉಲ್ಲೇಖಿಸಿದ್ದಾರೆ.
ಆರ್. ಶಂಕರ್ ವಿರುದ್ಧ ಸ್ಪೀಕರ್ಗೆ ದೂರು ನೀಡಲಾಗಿದೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಆರ್. ಶಂಕರ್ ವಿರುದ್ಧ ಸ್ಪೀಕರ್ಗೆ ದೂರು ನೀಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಶಂಕರ್ ವಾಪಸ್ ಪಡೆದಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆರ್. ಶಂಕರ್ ಗೆಲುವು ಸಾಧಿಸಿದ್ದರು. ಮೈತ್ರಿ ಸರ್ಕಾರ ರಚನೆಗೆ ಅವರು ಬೆಂಬಲ ನೀಡಿದ್ದರು. ಪಕ್ಷದ ನಿಯಮವನ್ನು ಶಂಕರ್ ಉಲ್ಲಂಘಿಸಿ ಎಂದು ಆರ್ ಶಂಕರ್ ಮೇಲೆ ಆರೋಪ ಹೊರೆಸಿ ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಶ್ ಗೌಡ ಅವರು ಸ್ಪೀಕರ್ ರಮೇಶ್ ಕುಮಾರ್ಗೆ ವಿರುದ್ಧ ದೂರು ನೀಡಿದ್ದಾರೆ. ವಿಲೀನದ ಬಗ್ಗೆ ಶಂಕರ್ ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ" ಎಂದು ಮಹೇಶ್ ಗೌಡ ಹೇಳಿದ್ದಾರೆ.
ಉಪಮೇಯರ್, ಶಾಸಕ, ಸಚಿವರಾದ ಆರ್ ಶಂಕರ್
ಒಂದು ಕಾಲದಲ್ಲಿ ಬೆಂಗಳೂರಿನ ಉಪಮೇಯರ್ ಆಗಿದ್ದ ಆರ್ ಶಂಕರ್ ಕೂಡಾ ಬಹುಶಃ ಸಚಿವರಾಗುವ ಕನಸು ಕಂಡಿರಲಿಕ್ಕಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಅವರು ಕನಸು ಕಂಡಿದ್ದ ಸಿದ್ಧಾಂತ ಒಪ್ಪಿ, ಕರ್ನಾಟಕ ಪ್ರಜಾ ಜನತಾ ಪಕ್ಷ (ಕೆಪಿಜೆಪಿ) ಸ್ಥಾಪಕ ಮಹೇಶ್ ಗೌಡ ಅವರು ಕೈಜೋಡಿಸಿ ಸುದ್ದಿಯಾಗಿದ್ದರು. ನಂತರ ಇಬ್ಬರು ಬೇರ್ಪಟ್ಟು, ಉಪೇಂದ್ರ ಅವರು ಚುನಾವಣೆ ಕಣಕ್ಕಿಳಿಯದಿದ್ದರೆ, ಮಹೇಶ್ ಗೌಡ ಅವರ ಕೆಪಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಹೀಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ನಿಂತ ಕೋಟ್ಯಧಿಪತಿ ಆರ್ ಶಂಕರ್ ಅವರು ಭರ್ಜರಿ ಜಯ ದಾಖಲಿಸಿ, ಶಾಸಕರಾದರು. ನಂತರ ಎಚ್ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾದರು.
ಮೊದಲ ಎಂಟ್ರಿಯಲ್ಲೇ ಬಂಪರ್ ಹೊಡೆದ 'ಕೆಪಿಜೆಪಿ'
ಅರಣ್ಯ ಸಚಿವರಾಗಿದ್ದ ಆರ್.ಶಂಕರ್
ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಅವರನ್ನು 2018ರ ಡಿಸೆಂಬರ್ನಲ್ಲಿ ಸಂಪುಟ ವಿಸ್ತರಣೆ ಮಾಡುವ ಸಮಯದಲ್ಲಿ ಕೈ ಬಿಡಲಾಗಿತ್ತು. ಈಗ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಕೆಪಿಜೆಪಿಯನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಬೇಕು ಎಂಬ ಷರತ್ತಿನ ಅನ್ವಯವೇ ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಆರ್.ಶಂಕರ್ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡುವ ಪತ್ರವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಕ್ಷ ವಿಲೀನ ಮಾಡುವುದು ಮುಖ್ಯವಾಗಿತ್ತು
ಸಂಪುಟ ಸೇರಿದ ಅವರ ಕಾಂಗ್ರೆಸ್ ಹೇಳಿದಂತೆ ಕೇಳಲಿಲ್ಲ. ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಲಿಲ್ಲ. ಆದ್ದರಿಂದ, 2018ರ ಡಿಸೆಂಬರ್ನಲ್ಲಿ ಸಚಿವ ಸ್ಥಾನ ಕಳೆದುಕೊಂಡರು. ಬಳಿಕ ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದರು. ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದರು. ಈಗ ಕೆಪಿಜೆಪಿಯನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಿ ಮತ್ತೆ ಸಂಪುಟ ಸೇರಿದ್ದರು. ಆರ್.ಶಂಕರ್ ಹಲವು ಬಾರಿ ಪಕ್ಷ ನಿಷ್ಠೆ ಬದಲಿಸಿದ್ದಾರೆ. 2018ರಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಮುಂಬೈಗೆ ಹೋಗಿದ್ದರು. ಆದರೆ, ಪುನಃ ಸರ್ಕಾರಕ್ಕೆ ಬೆಂಬಲ ಕೊಟ್ಟು ಕುಮಾರಸ್ವಾಮಿ ಸಂಪುಟ ಸೇರಿದ್ದರು.