'ಖಾತೆ ಹಂಚಿಕೆ ಬಳಿಕ, ಬಿಜೆಪಿಯಲ್ಲಿ ಅಸಮಾಧಾನ, ಸಿಎಂಗೆ ಪತ್ರ'
ಬೆಂಗಳೂರು, ಫೆ. 10: ರಾಜ್ಯ ಬಿಜೆಪಿ ಸರ್ಕಾರ ಮುಂದಿನ 3 ವರ್ಷಗಳ ಅವಧಿಯನ್ನು ಸುಸೂತ್ರವಾಗಿ ಮುಗಿಸಬೇಕು ಎಂದರೆ ತಕ್ಷಣ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಸಂಪುಟ ವಿಸ್ತರಣೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಬಳಿಕ ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ರೂಪದಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿ
ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕ ಅಸಮಾನತೆ ಆಗಿದೆ. ಆದರಿಂದ ಬಜೆಟ್ನಲ್ಲಿ ಹಣ ಮೀಸಲು ಬಗ್ಗೆ ಪಕ್ಷದ ಶಾಸಕರೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಸಚಿವ ಸಂಪುಟ ಕೇವಲ ಬೆಂಗಳೂರು, ಬೆಳಗಾವಿಗೆ ಮಾತ್ರ ಸೀಮಿತ ಎಂಬಂತಾಗಿದೆ ಎನ್ನುವ ಮೂಲಕ ಕೇವಲ ಬೆಂಗಳೂರು ಹಾಗೂ ಬೆಳಗಾವಿ ಶಾಸಕರನ್ನು ಹೆಚ್ಚಾಗಿ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ ಕೊಟ್ಟು, ಕೇವಲ ಉಮೇಶ್ ಕತ್ತಿ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಯಾಕೇ ಹೇಳುತ್ತಿದ್ದಾರೊ ಗೊತ್ತಿಲ್ಲ. ಜೊತೆಗೆ ಬಿಜೆಪಿ ಬಂದವರನ್ನೆಲ್ಲ ಮಂತ್ರಿ ಮಾಡಿದ್ದಾರೆ. ಆದರೆ ಮಹೇಶ ಕುಮಠಳ್ಳಿ ಅವರಿಗೆ ಮಾತ್ರ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲ ಎಂಬುದೂ ಗೊತ್ತಾಗಬೇಕು. ಸಚಿವ ಸ್ಥಾನದ ಬಗ್ಗೆ ಬಿಜೆಪಿ ಶಾಸಕರ ಆಕಾಂಕ್ಷೆಗಳಿಗೆ ಸಿಎಂ ಯಡಿಯೂರಪ್ಪ ಸ್ಪಂದಿಸಬೇಕು. ಈ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.