ಕರ್ನಾಟಕ ಸರ್ಕಾರ ಕ್ಷಮೆ ಕೇಳಬೇಕು: ಶಾಸಕಿ ಅಂಜಲಿ ನಿಂಬಾಳ್ಕರ್
ಬೆಂಗಳೂರು, ಆ. 11: ನೆಲ-ಜಲದ ವಿಚಾರ ಬಂದಾಗ ನಮ್ಮ ರಾಜಕಾರಣಿಗಳು ಪಕ್ಷಬೇಧ ಮರೆದು ಒಗ್ಗಟ್ಟಾಗುವುದು ಕರ್ನಾಟಕದಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಅದು ಕಾವೇರಿ ಹೋರಾಟ ಇರಬಹುದು, ಬೆಳಗಾವಿ ಗಡಿ ವಿವಾದ ಇರಬಹುದು. ನಾಡಿನ ವಿಚಾರ ಬಂದಾಗ ರಾಜಕಾರಣೀಗಳು ತಮ್ಮ ಪಕ್ಷ ಬಿಟ್ಟು ಒಂದಾಗುತ್ತಾರೆ. ಆದರೆ ಅದು ಇತ್ತೀಚೆಗೆ ಬದಲಾಗುತ್ತಿದೆ. ನೆರೆಯ ರಾಜ್ಯದ ರಾಜಕಾರಣಿಗಳಿಗೆ ಬೆಂಬಲ ಕೊಡುವುದು ಶುರುವಾಗಿದೆ. ಈಗ ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಅಂಥದ್ದೇ ಘಟನೆ ನಡೆದಿದೆ.
ಕರ್ನಾಟಕ ರಾಜ್ಯ ಸರ್ಕಾರ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಟ್ವೀಟ್ ಮಾಡುವ ಮೂಲಕ ಮಹಾರಾಷ್ಟ್ರ ರಾಜ್ಯದ ರಾಜಕಾರಣಿಗಳಿಗೆ ರಾಜ್ಯದ ಶಾಸಕಿಯೊಬ್ಬರು ಪರೋಕ್ಷ ಬೆಂಬಲ ನೀಡಿದ್ದಾರೆ. ಆ ಮೂಲಕ ಮೊದಲೇ ಹೊತ್ತಿ ಉರಿಯುವ ಬೆಳಗಾವಿ ಗಡಿ ವಿವಾದಕ್ಕೆ ತುಪ್ಪ ಸುರಿದಂತಾಗಿದೆ. ಜೊತೆಗೆ ತಾವು ಮಾಡಿರುವ ಟ್ವೀಟ್ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ಕನ್ನಡಿಗರ ಆತ್ಮಾಭಿಮಾನವನ್ನೇ ಪ್ರಶ್ನೆ ಮಾಡಿದ್ದಾರೆ.
ಪುತ್ಥಳಿ ಸ್ಥಾಪನೆ ವಿವಾದ
ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿರುವುದು ಛತ್ರಪತಿ ಶಿವಾಜಿ ಪುತ್ಥಳಿ ಸ್ಥಾಪನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಸ್ಥಾಪನೆ ಮಾಡಲಾಗಿದ್ದ ಶಿವಾಜಿ ಮೂರ್ತಿಯನ್ನು ತೆರವುಗೊಳಿಸಲಾಗಿತ್ತು. ಆ ಬಗ್ಗೆ ಮಹಾರಾಷ್ಟ್ರದ ರಾಜಕಾರಣಿಗಳು, ಅಲ್ಲಿನ ಸಚಿವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು.
ಮೂರ್ತಿ ತೆರವಿನ ಬಗ್ಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಅದನ್ನು ನೋಡಿದ್ದ ಮಹಾರಾಷ್ಟ್ರದ ರಾಜಕಾರಣಿಗಳಿಗೆ ಗಡಿ ವಿವಾದವನ್ನು ಕೆಣಕಲು ವಿಷಯ ಸಿಕ್ಕಂತಾಗಿತ್ತು. ಹೀಗಾಗಿ ಪುತ್ಥಳಿ ತೆರವು ವಿಚಾರ ವಿವಾದವಾಗಿತ್ತು.
ಯಡಿಯೂರಪ್ಪ ಕ್ಷಮೆ ಕೇಳಲಿ
ಶಿವಾಜಿ ಪುತ್ಥಳಿ ತೆರವಿಗೆ ಸಂಬಂಧಿಸಿದಂತೆ ಪ್ರಕರಣದ ವಾಸ್ತವತೆ ಅರಿಯದೇ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತಕ್ಷಣ ಕರ್ನಾಟಕ ಸರ್ಕಾರ ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಜೊತೆಗೆ ಛತ್ರಪತಿ ಶಿವಾಜಿ ಅವರ ಪುತ್ಥಳಿಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಪುನರ್ ನಿರ್ಮಾಣ ಮಾಡಬೇಕು. ಪುತ್ಥಳಿ ತೆರವುಗೊಳಿಸಿದ ಅಧಿಕಾರಿಗಳು ಹಾಗೂ ಸ್ಥಳೀಯ ಜನರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಪುತ್ಥಳಿ ಸ್ಥಾಪನೆ ವಾಸ್ತವ
ಕಳೆದ ವಾರ ಆಗಷ್ಟ್ 5 ರಂದು ಮಧ್ಯರಾತ್ರಿ ಮಣಗುತ್ತಿ ಗ್ರಾಮದಲ್ಲಿ ಅನುಮತಿ ಇಲ್ಲದೇ ಕೆಲ ಯುವಕರು ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಿದ್ದರು. ಅದೇ ಯುವಕರೇ ಮರುದಿನ ಅಂದರೆ ಆಗಷ್ಟ್ 6 ರಂದು ಪುತ್ಥಳಿ ತೆರವುಗೊಳಿಸಿದ್ದರು.
ಆದರೆ, ಕೆಲ ಸಂಘಟನೆಗಳು ಒತ್ತಾಯ ಪೂರ್ವಕವಾಗಿ ಶಿವಾಜಿ ಮೂರ್ತಿ ತೆರವುಗೊಳಿಸಿವೆ ಎಂದು ನಂತರ ವದಂತಿ ಹಬ್ಬಿಸಲಾಗಿತ್ತು. ಪ್ರಕರಣ ಕುರಿತು ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಯಮಕನಮರಡಿ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ಥಳಿ ತೆರವುಗೊಳಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಿ ಎಂದು ಶಾಸಕಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ.
ಕನ್ನಡಿಗರ ಆಕ್ರೋಶ
ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಆಗ್ರಹವನ್ನು ಕರ್ನಾಟಕ ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ. ಟ್ವೀಟ್ಗೆ ಕರ್ನಾಟಕ ಕಾಂಗ್ರೆಸ್ ಲೈಕ್ ಮಾಡುವ ಮೂಲಕ ಅಂಜಲಿ ನಿಂಬಾಳ್ಕರ್ ಅವರ ಒತ್ತಾಯಕ್ಕೆ ದನಿಗೂಡಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.