ಬಂಗಾರಪೇಟೆಯಲ್ಲಿ ಕತ್ತೆಗಳ ಮೆರವಣಿಗೆ, ಧಾರವಾಡದಲ್ಲಿ ಕೋಣಗಳ ಹೋರಾಟ
ಬೆಂಗಳೂರು, ಸೆ. 27: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕರೆ ಕೊಟ್ಟಿರುವ ಭಾರತ ಬಂದ್ ವೇಳೆ ಕೋಲಾರ ಸೇರಿದಂತೆ ಹಲವು ಕಡೆ ವಿನೂತನ ಪ್ರತಿಭಟನೆಗಳು ನಡೆದಿವೆ. ಚಿತ್ರದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಕತ್ತೆಗಳ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕೋಲಾರ ನಗರದಲ್ಲಿ ಬಿಜೆಪಿ ಹಾಗೂ ಸಿಪಿಐಎಂ ಕಾರ್ಯಕರ್ತರ ನಡುವೆ ಮಾತಿನ ಚಮಕಿ ನಡೆದಿದೆ. ಇನ್ನೊಂದೆಡೆ ಪ್ರತಿಭಟನೆ ವೇಳೆ ಡಿಸಿಪಿ ಕಾಲಿನ ಮೇಲೆ ಕಾರು ಹತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತ ಸಮಗ್ರ ಚಿತ್ರಣ ಇಲ್ಲಿದೆ.
ಡಿಸಿಪಿ ಕಾಲು ಮೇಲೆ ಕಾರು ಹತ್ತಿ ಅವಘಡ:
ಗೊರಗುಂಟೆಪಾಳ್ಯದಲ್ಲಿ ಪ್ರತಿಭಟನಾ ನಿರತರನ್ನು ನಿಯಂತ್ರಿಸುತ್ತಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ಕಾಲಿನ ಮೇಲೆ ಖಾಸಗಿ ಕಾರು ಹತ್ತಿದ್ದು, ಕಾಲಿಗೆ ಸಣ್ಣ ಗಾಯವಾಗಿದೆ. ಟೌನ್ ಹಾಲ್ ಗೆ ತೆರಳಲು ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ನಿಯಂತ್ರಣ ಮಾಡಲಾಗುತ್ತಿತ್ತು. ಇದೇ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವೇಳೆ ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಅವರ ಕಾಲಿನ ಮೇಲೆ ಕಾರು ಹತ್ತಿದ್ದು ಸಣ್ಣ ಗಾಯವಾಗಿದೆ. ಕ್ಷಣಾರ್ಧದಲ್ಲಿ ಅವರು ಎಚ್ಚೆತ್ತು ಕಾರು ಹೊರ ತೆಗೆದಿದ್ದರಿಂದ ದೊಡ್ಡ ಅನುಹುತ ತಪ್ಪಿದೆ. ಇಲ್ಲದಿದ್ದಲ್ಲಿಕಾಲಿಗೆ ಗಂಭೀರ ಪೆಟ್ಟಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಪೊಲೀಸರು ತಿಳಿಸಿದ್ದಾರೆ. ಇನ್ನು ಡಿಸಿಪಿ ಕಾಲಿನ ಮೇಲೆ ಕಾರು ಹತ್ತಿಸಿದ ಚಾಲಕನನ್ನು ಅರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಭಾರತ ಬಂದ್ಗೆ ನೀರಸ ಪ್ರತಿಕ್ರಿಯೆ; ಬೀದಿಗಿಳಿದ ರೈತರು, ಕನ್ನಡಪರ ಸಂಘಟನೆಗಳು
ಚಿತ್ರದುರ್ಗದಲ್ಲಿ ಮೋದಿಗೆ ಈರುಳ್ಳಿ ಹಾರ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚಿತ್ರದುರ್ಗದಲ್ಲಿ ರೈತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈರುಳ್ಳಿ ಹಾರ ಹಾಕಿ ವಿನೂತನವಾಗಿ ಪ್ರತಿಭಟನೆ ಆರಂಭಿಸಿದರು. ಈ ಮೂಲಕ ರೈತ ವಿರೋಧಿ ಕಾನೂನು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಉಳಿದಂತೆ ರೈತ ಪರ ಸಂಘಟನೆಗಳು ಕರೆ ಕೊಟ್ಟಿರುವ ಹೋರಾಟ ಚಿತ್ರದುರ್ಗದ ಗಾಂಧಿಸರ್ಕಲ್ ಗೆ ಸೀಮಿತವಾಗಿತ್ತು. ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಕೊರಳಿಗೆ ಈರುಳ್ಳಿ ಹಾರ ಹಾಕಿ ತಮಟೆ ಬಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಸಿಪಿಐಎಂ ಹಾಗೂ ಬಿಜೆಪಿ ನಡುವೆ ಮಾತಿನ ಚಕಮಕಿ:
ಕೃಷಿ ಕಾಯ್ದೆಗಳನ್ನು ವಿರೊಧಿಸಿ ಕೋಲಾರ ನಗರದಲ್ಲಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಸ್ ಗಳನ್ನು ತಡೆದು ಪ್ರತಿಭಟನೆ ಮಾಡಲು ಮುಂದಾದ ಸಿಪಿಐಎಂ ಹಾಗೂ ರೈತರ ಪ್ರತಿಭಟನೆ ಖಂಡಿಸಿ ಕೋಲಾರ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಅದೇ ಸ್ಥಳಕ್ಕೆ ಬಂದು ಪ್ರತಿಭಟನೆ ಮಾಡಿದರು. ಈ ವೇಳೆ ಸಿಪಿಎಂ ಬಾವುಟ ಹಿಡಿದಿದ್ದ ರೈತನೊಬ್ಬ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಹೋರಾಟದ ಬಣದಲ್ಲಿ ಬಾವುಟ ಹಾರಿಸಿದರು. ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ಪೊಲೀಸರು ಎರಡು ಬಣ ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ಕತ್ತೆಗಳ ಮೆರವಣಿಗೆ ಮಾಡಿ ಹೋರಾಟ:
ಇನ್ನು ಭಾರತ್ ಬಂದ್ ಬೆಂಬಲಿಸಿ ಬಂಗಾರಪೇಟೆ ರೈತರು ಕತ್ತೆಗಳ ಮೆರವಣಿಗೆ ನಡೆಸಿ ವಿನೂತನ ಪ್ರತಿಭಟನೆ ಮಾಡಿದರು. ನಗರದ ಬಸ್ ನಿಲ್ದಾಣ ಸಮೀಪ ಜಮಾಯಿಸಿದ ನೂರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರ ಭವಿಷ್ಯಕ್ಕೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ವಾಪಸು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕತ್ತೆಗಳ ಮೆರವಣಿಗೆ ಮೂಲಕ ವಿನೂತನ ಬಂಗಾರಪೇಟೆ ರೈತರು ಗಮನ ಸೆಳೆದಿದ್ದಾರೆ. ಕತ್ತೆಯನ್ನು ಮೋದಿಗೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಎಮ್ಮೆಗಳ ಮೆರವಣಿಗೆ:
ಕೇಂದ್ರದ ಕೃಷಿ ಕಾಯಿದೆಗಳನ್ನು ಖಂಡಿಸಿ ಕರೆಕೊಟ್ಟಿರುವ ಭಾರತ ಬಂದ್ ಬೆಂಬಲಿಸಿ ಧಾರವಾಡದಲ್ಲಿ ರೈತರು ಎಮ್ಮೆಗಳ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿನೂತನ ಪ್ರತಿಭಟನೆ ಮಾಡುವ ಮೂಲಕ ಭಾರತ ಬಂದ್ ಗೆ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
Recommended Video