ಬಾಲ ಮಂದಿರಗಳಿಂದ ಕಾಣೆಯಾಗಿದ್ದ 119 ಮಕ್ಕಳು ಇನ್ನೂ ನಾಪತ್ತೆ..!
ಬೆಂಗಳೂರು,ಆ.2. ರಾಜ್ಯದ ಸರ್ಕಾರಿ ಬಾಲ ಮಂದಿರಗಳಿಂದ ಕಾಣೆಯಾಗಿದ್ದ 484 ಮಕ್ಕಳ ಪೈಕಿ ಇನ್ನೂ 119 ಮಂದಿ ಪತ್ತೆಯಾಗಿಲ್ಲ ಎಂದು ಸರ್ಕಾರವೇ ಹೈಕೋರ್ಟ್ಗೆ ಮಂಗಳವಾರ ತಿಳಿಸಿದೆ.
ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರಕೆ ನ್ಯಾಯಾಲಯ, ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಸೂಚನೆ ನೀಡಿದೆ.
ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಸಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಸರ್ಕಾರದ ಪರ ವಕೀಲರು ಮಕ್ಕಳ ನಾಪತ್ತೆ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳ ಅನುಪಾಲನಾ ವರದಿಯನ್ನು ಸಲ್ಲಿಸಿದರು.
ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರ ವರದಿ ಸಲ್ಲಿಸಿ ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಈ ವರದಿಯ ನಂತರ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು ನಾಲ್ಕು ವಾರಗಳಲ್ಲಿಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ವರದಿಯಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರು ವಿವಿಧ ಸಂಸ್ಥೆಗಳಿಂದ 484 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಪೈಕಿ 352 ಮಕ್ಕಳನ್ನು ಪತ್ತೆ ಮಾಡಲಾಗಿದ್ದು, 2016ರಿಂದ 2021 ಅಕ್ಟೋಬರ್ವೆರೆಗೆ 132 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪತ್ತೆಯಾಗಿರುವ 352 ಮಕ್ಕಳ ಪೈಕಿ 340 ಮಕ್ಕಳು ತಮ್ಮ ಪೋಷಕರೊಂದಿಗೆ ವಾಸವಾಗಿದ್ದಾರೆ. 10 ಮಕ್ಕಳು ಬಾಲ ಮಂದಿರಗಳಲ್ಲಿ ತಂಗಿದ್ದು, ಎಚ್ಐವಿ-ಟಿಬಿ ಕಾಯಿಲೆಯಿಂದ 2 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.
2015-16ರಿಂದ 2021ರ ಅಕ್ಟೋಬರ್ವೆರೆಗೆ ನಾಪತ್ತೆಯಾಗಿರುವ 132 ಮಕ್ಕಳಲ್ಲಿ13 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಇನ್ನೂ 19 ಮಕ್ಕಳನ್ನು ಪತ್ತೆ ಮಾಡಬೇಕಾಗಿದೆ. 2022ರ ಫೆಬ್ರವರಿಗೆ ಪತ್ತೆ ಮಾಡಲಾದ 13 ಮಕ್ಕಳಲ್ಲಿ11 ಮಕ್ಕಳು ಪೋಷಕರೊಂದಿಗೆ ವಾಸ ಮಾಡುತ್ತಿದ್ದಾರೆ. 2 ಮಕ್ಕಳು ಬಾಲ ಮಂದಿರಗಳಲ್ಲಿದ್ದಾರೆ. ನಾಪತ್ತೆಯಾಗಿರುವ 119 ಮಕ್ಕಳ ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಮಾನವ ಕಳ್ಳಸಾಗಾಣಿಕೆ ತಡೆ ಘಟಕ (ಎಎಚ್ಟಿಯು)ಗಳಿಗೆ ಮತ್ತು 53 ಪ್ರಕರಣಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಸರ್ಕಾರದ ಅಧೀನದಲ್ಲಿರುವ ಬಾಲ ಮಂದಿರಗಳಿಂದ ಕಳೆದ ಕೆಲ ವರ್ಷಗಳಲ್ಲಿ141 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಅದಕ್ಕೆ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳ ಸಮಗ್ರ ವರದಿ ಸಲ್ಲಿಸುವಂತೆ 2022ರ ಫೆ.22ರಂದು ಹೈಕೋರ್ಟ್ ಆದೇಶ ನೀಡಿತ್ತು.