ಗುಂಡ್ಲುಪೇಟೆಯ ಹಂಗಳ ಕೆರೆಯಲ್ಲಿ ನಡೆಯಿತು ಪವಾಡ!
ಹಂಗಳ ಗ್ರಾಮದ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯ ಹಿರಿಕೆರೆ ಸಮೀಪದ ದೊಡ್ಡಕೆರೆಯಂಗಳದಲ್ಲಿ ಎರಡು ದಿನಗಳಿಂದ ನೀರು ಉಕ್ಕಿ ಮೇಲಕ್ಕೆ ಬರುತ್ತಿದ್ದು, ಜನ ಖುಷಿಗೊಂಡಿದ್ದಾರೆ.
ಚಾಮರಾಜನಗರ, ಮೇ 11: ಗುಂಡ್ಲುಪೇಟೆ ತಾಲೂಕಿನ ಹಂಗಳದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿರುವ ಬೆನ್ನಲ್ಲೇ ಗ್ರಾಮದ ಕೆರೆಯಲ್ಲಿ ನೀರು ಉಕ್ಕಿ ಬರುತ್ತಿರುವುದು ಅಚ್ಚರಿ ಮೂಡಿಸಿದ್ದು, ಇದನ್ನು ನೋಡಲು ಜನ ಧಾವಿಸಿ ಬರುತ್ತಿದ್ದಾರೆ.
ಹಂಗಳ ಗ್ರಾಮದ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯ ಹಿರಿಕೆರೆ ಸಮೀಪದ ದೊಡ್ಡಕೆರೆಯಂಗಳದಲ್ಲಿ ಎರಡು ದಿನಗಳಿಂದ ನೀರು ಉಕ್ಕಿ ಮೇಲಕ್ಕೆ ಬರುತ್ತಿದ್ದು, ಜನ ಖುಷಿಗೊಂಡಿದ್ದಾರೆ. ಇಲ್ಲಿ ನೀರು ಉಕ್ಕಿ ಬರುತ್ತಿರುವುದಕ್ಕೆ ಕಾರಣ ತಿಳಿಸುತ್ತಿರುವ ಗ್ರಾಮಸ್ಥರು ಹೇಳುವುದೇನೆಂದರೆ, ಕೆರೆಯಲ್ಲಿದ್ದ ಹೂಳನ್ನು ಜೆಸಿಬಿ ಸಹಾಯದಿಂದ ತೆಗೆಸಲಾಗಿತ್ತು.
ಆದರೆ ಪೂರ್ಣ ಪ್ರಮಾಣದಲ್ಲಿ ತೆಗೆಯಲು ಸಾಧ್ಯವಾಗಿರಲಿಲ್ಲ. ಕಾರಣ ಈ ಕೆರೆಯಲ್ಲಿ ಹಳೆಯ ಬಾವಿಯಿದ್ದ ಗುರುತುಗಳು ಕಂಡು ಬಂದಿತ್ತು. ಜತೆಗೆ ಕಲ್ಲಿನ ವಿಗ್ರಹವೂ ದೊರೆತಿತ್ತು. ಇದನ್ನು ನೋಡಿದ ಬಳಿಕ ಹೂಳೆತ್ತುತ್ತಿದ್ದ ಜೆಸಿಬಿ ಚಾಲಕ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೊರಟು ಹೋಗಿದ್ದನು.
ಇದಾದ ಕೆಲವು ದಿನಗಳ ಬಳಿಕ ಸಮೀಪದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಉತ್ತಮ ಮಳೆಯಾಗಿದ್ದು, ನೀರು ಹರಿದು ಬಂದಿತ್ತು. ಇದೀಗ ಕೆರೆಯಲ್ಲಿ ನೀರು ಮೇಲಕ್ಕೆ ಉಕ್ಕಿ ಬರುತ್ತಿದ್ದು, ಸುಮಾರು ಎರಡು ಅಡಿಯಷ್ಟು ನೀರು ಮೇಲಕ್ಕೆ ತುಂಬಿ ಬಂದಿದೆ ಎನ್ನಲಾಗಿದೆ. ಬರಡಾಗಿದ್ದ ಕೆರೆಯಲ್ಲಿ ನೀರು ಸದ್ದಿಲ್ಲದೆ ತುಂಬುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಬಿ.ರಾಮು ಹಾಗೂ ಜಿಪಂ ಸಿಇಓ ಹರೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಪರಿಶೀಲನೆ ನಡೆಸಿದರಲ್ಲದೆ, ಮೋಟಾರು ಅಳವಡಿಸಿ ನೀರನ್ನು ಮೇಲೆತ್ತಿ ಮೊದಲಿಗೆ ಪರೀಕ್ಷೆಗೊಳಪಡಿಸಿ ಯೋಗ್ಯವಾಗಿದ್ದರೆ ಬಳಕೆಗೆ ಉಪಯೋಗಿಸುವಂತೆ ಗ್ರಾಪಂ ಪಿಡಿಓಗೆ ಕುಮಾರಸ್ವಾಮಿಗೆ ಅವರಿಗೆ ಸೂಚನೆ ನೀಡಿದ್ದಾರೆ.