ಬೆಂಗಳೂರಿನಲ್ಲಿ ಮತ್ತೆ ಬೆನ್ನಿ ಹಿನ್ ಕಣ್ ಕಟ್ ವಿದ್ಯೆ!
ಬೆಂಗಳೂರು, ಡಿ. 23: ಇದು ಮೂಢನಂಬಿಕೆ ನಿಷೇಧ ಮಸೂದೆಯನ್ನು ತುರ್ತಾಗಿ ಜಾರಿಗೆ ತರಲು ಉದ್ದೇಶಿಸಿರುವ ನಾಡಿನ ದೊರೆ ಸಿದ್ದರಾಮಯ್ಯ ಅವರ ತುರ್ತು ಗಮನಕ್ಕೆ! ಕ್ರೈಸ್ತ ಧರ್ಮದ ವಿವಾದಿತ ಗುರು, ಕಣ್ ಕಟ್ ವಿದ್ಯೆಯ ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾನೆ. ಹೊಸ ವರ್ಷದ ಹೊಸ್ತಿಲಲ್ಲಿ ಜನವರಿ 15ರಿಂದ 3 ದಿನಗಳ ಕಾಲ ಯಲಹಂಕದ ಜಕ್ಕೂರು ವಾಯುಪಡೆ ನೆಲೆಯಲ್ಲಿ ಠಿಕಾಣಿ ಹೂಡಲಿದ್ದಾನೆ.
'ಯಾರಿದು ಬೆನ್ನಿ ಹಿನ್? ಅವನೇನು ಭಯೋತ್ಪಾದಕನಾ? ಅವರು ಯಾರೋ ನನಗೆ ಗೊತ್ತಿಲ್ಲ!' ಎಂದು ಸಿಎಂ ಸಿದ್ದರಾಮಯ್ಯ ಅವರು 'ಕೈ'ಎತ್ತುವ ಮೊದಲು 61 ವರ್ಷದ ಬೆನ್ನಿ ಹಿನ್ brief history ಮತ್ತು ಕರ್ನಾಟಕ ಜತೆಗಿನ ಅವನ ಸಂಬಂಧದ ಬಗ್ಗೆ ಒಂದಷ್ಟು ಪ್ರಾಥಮಿಕ ಮಾಹಿತಿ ಇಲ್ಲಿದೆ: (ಮೂಢನಂಬಿಕೆ ಕರಡು ಕಾಂಗ್ರೆಸ್ ಪಕ್ಷದ್ದಲ್ಲ: ಪರಮೇಶ್ವರ್)
Toufik Benedictus Benny Hinn ಮೂಲ ಹೆಸರಿನ ಬೆನ್ನಿ ಹಿನ್ ಮೂಲ ಇಸ್ರೇಲಿನ ಜೆರೂಸೆಲಂ. ಪ್ರಸ್ತುತ ಅಮೆರಿಕದ ಪ್ರಜೆ. 'ಈ ಟಚ್ಚಲ್ಲಿ ಏನೋ ಇದೆ ಎನ್ನುತ್ತಾ ಕ್ಯಾನ್ಸರ್/ ಏಡ್ಸ್ ನಂತಹ ಅರಿಭಯಂಕರ ಕಾಯಿಲೆಗಳನ್ನು ಕೈ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ' ಎಂದು ಬೂಸಿ ಬಿಡುವುದು ಬೆನ್ನಿಯ ಜಾಯಮಾನ.
ಸರಿಯಾಗಿ 9 ವರ್ಷಗಳ ಹಿಂದೆ (2005ರ ಜನವರಿ 5) ಇದೇ ವಿವಾದಾತ್ಮಕ ವ್ಯಕ್ತಿ ಇಂತಹುದೇ ಕಾರ್ಯಕ್ರಮ ಆಯೋಜಿಸಿದ್ದ. ಆ ಸಂದರ್ಭದಲ್ಲಿಯೂ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೂ ಅಂದಿನ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಬೆನ್ನಿಗೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತ್ತು. (ತಾಕತ್ತಿದ್ರೆ ಕ್ರೈಸ್ತ, ಮುಸ್ಲಿಮರ ಕೈಲಿರುವ ಜಪಮಣಿ ಕಿತ್ಕೊಳ್ಳಿ)
ಕಂದಾಚಾರ/ಮೂಢನಂಬಿಕೆ ಹೆಸರಿನಲ್ಲಿ ಕಾಯಿಲೆಗಳನ್ನು ವಾಸಿ ಮಾಡುವ ನೆಪವೊಡ್ಡಿ ಅಮಾಯಕ ಜನರನ್ನು ಯಾಮಾರಿಸುತ್ತಾರೆ ಎಂದು ಹುಯಿಲೆಬ್ಬಿಸುವ ನಾಡಿನ ಸೋಕಾಲ್ಡ್ ಬುದ್ಧಿಜೀವಿಗಳು/ಪ್ರಗತಿಪರರು ಮೂಢನಂಬಿಕೆಯನ್ನು ಪ್ರಚೋದಿಸುವ ಬೆನ್ನಿ ಹಿನ್ ಬೆನ್ನಿಗೆ ನಿಲ್ಲುತ್ತಾರಾ? ಅಥವಾ ಕಣ್ ಕಟ್ ವಿದ್ಯೆಯ ಬೆನ್ನಿ ಕ್ರಾರ್ಯಕ್ರಮವನ್ನು ತಡೆಯುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ಆದರೆ ಇದಕ್ಕೆ ನೀರೆರೆಯಲು ರಾಜ್ಯ ಸರಕಾರ ಈಗಾಗಲೇ ಕಾರ್ಯಕ್ರಮದ ಆತಿಥ್ಯ ವಹಿಸುವುದು ನಿಕ್ಕಿಯಾಗಿದೆ. ಈಗಾಗಲೇ 3 ದಿನಗಳ ಕಾರ್ಯಕ್ರಮ ಫಿಕ್ಸ್ ಆಗಿದೆ. ಇವನು ಸೃಷ್ಟಿಸುವ ಭ್ರಮಾಲೋಕದಲ್ಲಿ ವಿಹರಿಸಲು ಅದಾಗಲೇ ಜನ ಸಾಲುಗಟ್ಟಿ ನಿಂತಿದ್ದಾರೆ.
ತನ್ನ ಕಣ್ ಕಟ್ ವಿದ್ಯೆಯನ್ನೇ ಬಂಡವಾಳ ಮಾಡಿಕೊಂಡು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕ್ರೈಸ್ತ ಮತಾಂತರಕ್ಕೆ ಹಾದಿ ಮಾಡಿಕೊಡುತ್ತಾನೆ ಎಂಬುದು ಇವನ ವಿರುದ್ಧವಿರುವ ಗಂಭೀರ ಆರೋಪ. ಆದರೆ ಬೆನ್ನಿ ಹಿನ್ ಕಣ್ ಕಟ್ ವಿದ್ಯೆ ಧರ್ಮಬಾಹಿರ ಎಂದು ಕ್ರೈಸ್ತ ಸಮುದಾಯದ ಬುದ್ಧಿಜೀವಿಗಳು ಸಹ ಅವನನ್ನು ವಿರೋಧಿಸುತ್ತಾರೆ.