ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನಲ್ಲಿ ಕಡಿತ
ಬೆಂಗಳೂರು, ಫೆಬ್ರವರಿ 23: ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ನಿಂದ ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಸದ್ಯ ಕಾಂಗ್ರೆಸ್ ನಲ್ಲಿ 12 ಮುಸ್ಲಿಂ, ಇಬ್ಬರು ಕ್ರಿಶ್ಚಿಯನ್ ಹಾಗೂ ಮತ್ತೊಬ್ಬರು ಜೈನ ಸಮುದಾಯಕ್ಕೆ ಸೇರಿದ ಶಾಸಕರಿದ್ದಾರೆ. ಹೀಗೆ 15 ಅಲ್ಪಸಂಖ್ಯಾತರಲ್ಲಿ ಮುಂದೆ ಕಾಂಗ್ರೆಸ್ ಸೇರ್ಪಡೆಯಾಗಲಿರುವ ಜೆಡಿಎಸ್ ಬಂಡಾಯ ಶಾಸಕರಾದ ಇಕ್ಬಾಲ್ ಅನ್ಸಾರಿ ಮತ್ತು ಜಮೀರ್ ಅಹ್ಮದ್ ಖಾನ್ ಕೂಡ ಸೇರಿದ್ದಾರೆ.
ಆದರೆ ಈ ಬಾರಿ ಇಷ್ಟೂ ಜನಕ್ಕೆ ಟಿಕೆಟ್ ಸಿಗುವ ಸಾಧ್ಯತೆಗಳಿಲ್ಲ. ಇದರಲ್ಲಿ ಈಗಾಗಲೇ ಕಲಬುರಗಿ ಉತ್ತರ ಕ್ಷೇತ್ರದ ಖಮರುಲ್ ಇಸ್ಲಾಂ ನಿಧನರಾಗಿದ್ದಾರೆ. ತಮ್ಮ ಪುತ್ರನ ಆಟಾಟೋಪದಿಂದಾಗಿ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಟಿಕೆಟ್ ಮೇಲಯೂ ತೂಗುಗತ್ತಿ ನೇತಾಡುತ್ತಿದೆ.
ಇನ್ನೊಂದೆಡೆ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಈ ಬಾರಿ ಬಹುತೇಕ ಕಣಕ್ಕಿಳಿಯುತ್ತಿಲ್ಲ. ಇಲ್ಲಿ ಕಾಂಗ್ರೆಸ್ ವಿಧಾನಪರಿತ್ ಸದಸ್ಯ ಐವನ್ ಡಿಸೋಜಾ ಮತ್ತು ಮಿಥುನ್ ರೈ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಒಂದೊಮ್ಮೆ ಐವನ್ ಡಿಸೋಜಾ ಟಿಕೆಟ್ ಗಿಟ್ಟಿಸಿದರೆ ಸರ್ವಜ್ಞನಗರದ ಕೆಜೆ ಜಾರ್ಜ್, ಮಂಗಳೂರು ದಕ್ಷಿಣದ ಜೆ.ಆರ್. ಲೋಬೋ ಸೇರಿ ಮೂವರು ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳು ಕಣಕ್ಕಿಳಿಬಹುದು. ಆದರೆ ಮಿಥುನ್ ರೈ ಟಿಕೆಟ್ ಪಡೆದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತ್ತೊಬ್ಬರು ಟಿಕೆಟ್ ಕಳೆದುಕೊಳ್ಳಲಿದ್ದಾರೆ.
ಕಳೆದ ಬಾರಿ ಹೆಬ್ಬಾಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದರೆ ಇಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದ್ದು. ಈ ಬಾರಿ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದೇ ಇರುವ ಸಾಧ್ಯತೆಗಳೇ ಹೆಚ್ಚಾಗಿವೆ.
ಹೀಗಾಗಿ, "ಈ ಬಾರಿ ಅಲ್ಪಸಂಖ್ಯಾತರಿಗೆ ಒಟ್ಟಾರೆ ಟಿಕೆಟ್ ಹಂಚಿಕೆಯಲ್ಲಿ ಕಡಿತವಾಗಬಹುದು. 2-3 ಟಿಕೆಟ್ ಗಳು ಮುಸ್ಲಿ ಸಮುದಾಯಕ್ಕೆ ಕಡಿಮೆಯಾಗಬಹುದು," ಎಂದು ಎಕನಾಮಿಕ್ ಟೈಮ್ಸ್ ಗೆ ಕಾಂಗ್ರೆಸ್ ಮುಸ್ಲಿಂ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ
ಟಿಕೆಟ್ ಕಡಿಮೆ ನೀಡಿಯೂ ಮುಸ್ಲಿಂ, ಕ್ರೈಸ್ತ ಮತ್ತು ಜೈನ ಮತದಾರರು ತನ್ನ ಬೆನ್ನಿಗೆ ನಿಲ್ಲಿದ್ದಾರೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಪಕ್ಷವಿದೆ.