ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆ. 09: ಅಳೆದೂ ತೂಗಿ ಸಂಪುಟ ವಿಸ್ತರಣೆ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ. ಈಗಾಗಲೇ ಖಾತೆಗಳಿಗಾಗಿ ಲಾಭಿ ನಡೆದಿದ್ದು, ಇಂಥದ್ದೆ ಖಾತೆ ಬೇಕು ಎಂದು ನೂತನ ಸಚಿವರು ಪಟ್ಟು ಹಿಡಿದಿದ್ದಾರೆ.
ಬೆಂಗಳೂರು ಮಹಾನಗರ ಪ್ರತಿನಿಧಿಸುವ ಸಚಿವರುಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ಪೈಪೋಟಿ ಇದೆ. ಜೊತೆಗೆ ಹಲವು ಸಚಿವರು ಇಂಥದ್ದೆ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ವಿವಾದಕ್ಕೆ ಎಡೆ ಮಾಡಿಕೊಡದಂತೆ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಮಾಡಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಖಾತೆಗಳ ಬಗ್ಗೆ ಮೂಲ ಬಿಜೆಪಿಗರೆ ಖ್ಯಾತೆ ತೆಗೆದಿದ್ದರು. ಆಗಲೂ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳ ಬಗ್ಗೆ ಸಿಎಂ ಮೇಲೆ ಒತ್ತಡವಿತ್ತು.
ಹೊಸ ಸಚಿವರಿಗೆ ಖಾತೆ ಹಂಚಿಕೆ: ದಿನಾಂಕ ನಿಗದಿಪಡಿಸಿದ ಯಡಿಯೂರಪ್ಪ
ಆದರೆ ಹೈಕಮಾಂಡ್ ಸೂಚನೆಯಂತೆ ಆಗ ಖಾತೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಂಚಿಕೆ ಮಾಡಿದ್ದರು. ಇದೀಗ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದವರೂ ಕೂಡ ಇಂಥದ್ದೆ ಖಾತೆ ಬೇಕು ಎಂದು ಸಿಎಂ ಎದುರು ಬೇಡಿಕೆ ಇಟ್ಟಿದ್ದಾರೆ. ಆದರೆ ಹೈಕಮಾಂಡ್ ಸೂಚನೆಯಂತೆಯೆ ಖಾತೆಬ ಹಂಚಿಕೆ ಮಾಡಲು ಈಗಾಗಲೇ ಯಡಿಯೂರಪ್ಪ ಅವರು ತೀರ್ಮಾನಿಸಿದ್ದು, ಬಹುತೇಕ ಖಾತೆಗಳು ಇವರಿಗೆ ಅಂತಿಮ ಆಗಿವೆ.
ಖಾತೆಗಳ ಹಂಚಿಕೆ ಬಹುತೇಕ ಅಂತಿಮ
ನಾಳೆ ಫೆಬ್ರುವರಿ 10 ರಂದು ನೂತನ ಸಚಿವರುಗೆ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ ಯಾರಿಗೆ ಯಾವ ಖಾತೆ ಎಂಬುದನ್ನು ಬಹಿರಂಗ ಪಡಿಸಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ 18 ಜನರು ಪ್ರಮಾಣ ವಚನ ಸ್ವೀಕರಿದ್ದರು. ಆಗಲೂ ಕೂಡ ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಸಚಿವರು ಪೈಪೋಟಿ ಆರಂಭಿಸಿದ್ದರು, ಹಲವು ಮುನಿಸಿಕೊಂಡಿದ್ದರು. ಆದರೆ ಹೈಕಮಾಂಡ್ ಅಣತಿಯಂತೆ ಖಾತೆಗಳನ್ನು ಯಡಿಯೂರಪ್ಪ ಹಂಚಿಕೆ ಮಾಡಿದ್ದರು.
ಈಗಲೂ ಕೂಡ ಹೈಕಮಾಂಡ್ ಸೂಚನೆಯಂತೆಯೆ ಖಾತೆಗಳ ಹಂಚಿಕೆ ಆಗಲಿದೆ. ಹೀಗಾಗಿ ಹಂಚಿಕೆಗೆ ಮೊದಲೇ ಲಾಭಿಯನ್ನು ನೂತನ ಸಚಿವರು ನಡೆಸಿದ್ದಾರೆ.
ಯಾರಿಗೆ ಯಾವ ಖಾತೆ?
ನೂತನ ಎಲ್ಲ ಸಚಿವರಿಗೆ ನಾಳೆ ಖಾತೆ ಹಂಚಿಕೆ ಮಾಡಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿರುವ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆ ಖಾತೆ, ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದ ಎಸ್.ಟಿ. ಸೋಮಶೇಖರ್ ಅವರಿಗೆ ಸಹಕಾರ, ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಸಕ್ಕರೆ ಖಾತೆ, ಕೆಆರ್ ಪೇಟೆ ಶಾಸಕ ನಾರಾಯಣಗೌಡ ಅವರಿಗೆ ಸಣ್ಣ ನೀರಾವರಿ, ಗೃಹ ಖಾತೆ ಬಯಸಿದ್ದ ಬಿ.ಸಿ. ಪಾಟೀಲ್ ಅವರಿಗೆ ಅರಣ್ಯ ಖಾತೆ, ಮಹಾಲಕ್ಶ್ಮಿಲೇಔಟ್ ಶಾಸಕ ಕೆ. ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಪೌರಾಡಳಿತ ಮತ್ತು ಕೌಶಲ್ಯಾಭಿವೃದ್ಧಿ, ಆನಂದ್ ಸಿಂಗ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ, ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ಬೆಂಗಳೂರು ಮಹಾನಗರ ಹೊರತು ಪಡಿಸಿ ನಗರಾಭಿವೃದ್ಧಿ, ಡಾ, ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಹಂಚಿಕೆ ಮಾಡಲು ಹೈಕಮಾಂಡ್ ಸೂಚಿಸಿದೆ.
ಸಂಪುಟ ಪುನಾರಚನೆ: ಹಾಲಿ ಸಚಿವರಿಗೆ ಆತಂಕ ತಂದ ಕಟೀಲ್ ಹೇಳಿಕೆ
ಪಟ್ಟು ಸಡಿಲಿಸದ ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆ ಖಾತೆ ವಹಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಆದರೆ ಹಿಂದೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಗೆ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮತ್ತೆ ಭೇಟಿ ಮಾಡಿ ವಾದ ಮಾಡಿದ್ದಾರೆ. ಪಕ್ಷದ ವರಿಷ್ಠರನ್ನು ನೀವು ಹೇಗೆ ಒಪ್ಪಿಸುತ್ತಿರೊ ಗೊತ್ತಿಲ್ಲ, ಆದರೆ ನನಗೆ ಜಲಸಂಪನ್ಮೂಲ ಇಲಾಖೆ ಬೇಕು. ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವಸ್ಥಾನ ಕೊಟ್ಟಿಲ್ಲ. ಹೀಗಾಗಿ ನನ್ನ ಬೇಡಿಕೆ ಈಡೇರಿಸಲೇಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.
ಮುಂದೆ ಸಚಿವ ಸಂಪುಟ ಪುನರ್ ರಚನೆ ಆಗುತ್ತದೆ. ಆಗ ಜಲಸಂಪನ್ಮೂಲ ಖಾತೆಯನ್ನು ನಿಮಗೆ ವಹಿಸುತ್ತೇವೆ ಎಂದು ಸಿಎಂ ಯಡಿಯೂರಪ್ಪ ಅವರು ಸಚಿವ ಜಾರಕಿಹೊಳಿ ಅವರನ್ನು ಒಪ್ಪಿಸಲು ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ರಮೇಶ್ ಜಾರಕಿಹೊಳಿ ಸಿಎಂ ಸಲಹೆಗೆ ಒಪ್ಪಿಲ್ಲ ಎಂದು ತಿಳಿದು ಬಂದಿದೆ.
ಮೂಲ ಬಿಜೆಪಿ ಸಚಿವರಿಂದಲೂ ಹೆಚ್ಚುತ್ತಿದೆ ಒತ್ತಡ
ಇನ್ನು ಈಗಾಗಲೇ ಪ್ರಭಾವಿ ಇಲಾಖೆಗಳನ್ನು ವಹಿಸಿಕೊಂಡಿರುವ ಮೂಲ ಬಿಜೆಪಿ ಸಚಿವರು ಆ ಖಾತೆಗಳನ್ನು ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಗೃಹ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಲೋಕೋಪಯೋಗಿ, ಅರಣ್ಯ, ಇಂಧನ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ಕೃಷಿ, ಬೃಹತ್ ಕೈಗಾರಿಕೆ, ಕಂದಾಯ ಖಾತೆಗಳ ಮರು ಹಂಚಿಕೆಗೆ ಆಯಾ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಬಿಟ್ಟುಕೊಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಸಂಪುಟ: ಎರಡು ಜಿಲ್ಲೆಗೆ ಬೆಣ್ಣೆ, ಹಲವು ಜಿಲ್ಲೆಗೆ ಸುಣ್ಣ
ಈ ಎಲ್ಲದರ ಮಧ್ಯೆ ಬಿಜೆಪಿ ಹೈಕಮಾಂಡ್ ತೀರ್ಮಾನ ಅಂತಿಮವಾಗಿದ್ದು, ಹೈಕಮಾಂಡ್ ಹೇಳಿದ ಖಾತೆಗಳನ್ನು ಒಪ್ಪಿಕೊಳ್ಳುತ್ತಾರೊ? ಅಥವಾ ಇಂಥದ್ದೆ ಖಾತೆ ಬೇಕು ಎಂದು ಖ್ಯಾತೆ ಮುಂದುವರೆಸುತ್ತಾರೊ ಎಂಬುದು ಕುತೂಹಲ ಮೂಡಿಸಿದೆ.