'ಹಿಂದಿ ರಾಷ್ಟ್ರಭಾಷೆ', 'ಕನ್ನಡ ಅನ್ನದ ಭಾಷೆ ಆಗೋದು ಬೇಡ': ಸಚಿವರ ಪ್ರಲಾಪ
ಬೆಂಗಳೂರು, ಡಿಸೆಂಬರ್ 10: ಭಾಷೆಯ ವಿಚಾರದಲ್ಲಿ ಸೂಕ್ಷ್ಮತೆ ಮರೆಯುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮತ್ತೆ ವಿವಾದ ಮೇಲೆಳೆದುಕೊಂಡಿದ್ದಾರೆ. ಯಾವುದೇ ಭಾಷೆ ಅನ್ನ ಕೊಡುವ ಭಾಷೆಯಾಗಬಾರದು. ಅದು ತನ್ನತನವನ್ನು ಉಳಿಸಿಕೊಳ್ಳುವಂತೆ ಇರಬೇಕು. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಎಂಬ ಭ್ರಮೆ ಸರಿಯಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಸಿ.ಟಿ. ರವಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಅದು ಅನ್ನ ಕೊಡುವ ಭಾಷೆಯಾಗಿ ಕಂಡಾಗ ಅದರ ಉಳಿವು ಸಾಧ್ಯ. ಕನ್ನಡವೂ ಅನ್ನದ ಭಾಷೆಯಾದರೆ ಅದರ ಮೇಲಿನ ಅಭಿಮಾನ ಮತ್ತು ಗೌರವ ಹೆಚ್ಚುತ್ತದೆ. ಹಾಗೆಯೇ ಬಳಕೆಯೂ ಹೆಚ್ಚುತ್ತದೆ ಎಂಬ ಸಾಮಾನ್ಯ ಜ್ಞಾನ ಸಚಿವರಿಗೆ ಇಲ್ಲವೇ? ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಭಾಷೆ ಹಾಗೂ ಸಂಸ್ಕೃತಿಯ ಅರಿವಿಲ್ಲದೆ ಅಸಂಬದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾಡಿದ್ದಾರೆ. ನಿಮಗೆ ಈಗ ಅನ್ನ ಕೊಡುತ್ತಿರುವ ಭಾಷೆ ಯಾವುದು ಹೇಳಿ? ಎಂದು ಪ್ರಶ್ನಿಸಿದ್ದಾರೆ.
ದೇಶಕ್ಕೊಂದೇ ಧ್ವಜ ಸಾಕು, ಕನ್ನಡಕ್ಕೆ ಏಕೆ?: ಮತ್ತೆ ಕೆಣಕಿದ ಸಿ.ಟಿ ರವಿ
ಸಿ.ಟಿ. ರವಿ ಕನ್ನಡದ ವಿಚಾರದಲ್ಲಿ ಕನ್ನಡಿಗರ ಭಾವನೆಗಳನ್ನು ಕೆಣಕುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಕನ್ನಡಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ. ದೇಶಕ್ಕೆ ಒಂದೇ ಧ್ವಜ ಸಾಕು. 'ಒಂದು ರಾಷ್ಟ್ರ, ಒಂದು ಧ್ವಜ' ಎಂಬ ಧೋರಣೆ ನಮ್ಮದು ಎನ್ನುವ ಮೂಲಕ ಆಕ್ರೋಶಕ್ಕೆ ತುತ್ತಾಗಿದ್ದರು. ಸಚಿವ ಸುರೇಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ 'ಹಿಂದಿ ರಾಷ್ಟ್ರ ಭಾಷೆ' ಎಂಬ ಹೇಳಿಕೆ ನೀಡಿರುವುದಕ್ಕೆ ಕೂಡ ಖಂಡನೆ ವ್ಯಕ್ತವಾಗಿದೆ.
ಅನ್ನ ಕೊಡುವ ಭಾಷೆಯಾಗಬಾರದು
ಭಾಷೆ ಕಳೆದರೆ ಸಂಸ್ಕೃತಿ ಕಳೆಯುತ್ತೆ ಹಾಗೇ ಸಂಸ್ಕೃತಿ ಕಳೆದುಹೋದರೆ ನಾವೇ ಇರುವುದಿಲ್ಲ. ಹೀಗಾಗಿ ಭಾಷೆ ಮತ್ತು ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ಒಂದು ಭಾಷೆ ಅನ್ನ ಕೊಡುವ ಭಾಷೆಯಾಗಬಾರದು, ಅದು ತನ್ನತನವನ್ನು ಉಳಿಸಿಕೊಳ್ಳುವಂತೆ ಇರಬೇಕು. ಕನ್ನಡ ಭಾಷೆ ಅನ್ನ ಕೊಡುವ ಭಾಷೆಯಾಗಬೇಕು ಎಂಬ ಭ್ರಮೆ ಸರಿಯಲ್ಲ ಎಂದು ಸಿ.ಟಿ. ರವಿ ಟ್ವೀಟ್ ಮಾಡಿದ್ದರು.
ಅನ್ನದ ಭಾಷೆಯಾದರೆ ಮಾತ್ರ ಉಳಿಯುತ್ತದೆ
ಒಂದು ಭಾಷೆ ಅನ್ನದ ಭಾಷೆಯಾಗಿಲ್ಲದಿದ್ದರೆ ಆ ಭಾಷೆ ಕಳೆದು ಅದರ ಹಿಂದಿನ ಸಂಸೃತಿಯು ಕಳೆದುಹೋಗುತ್ತೆ ಹಾಗು ಅದರಿಂದ ಕನ್ನಡಿಗರೆನ್ನುವ ಕುಲವೇ ಅಳಿದುಹೋಗುತ್ತದೆ ಹೀಗಾಗಿ ಕನ್ನಡ ಭಾಷೆಯನ್ನ ಅನ್ನದ ಭಾಷೆಯಾಗಿ ಉಳಿಸಿಕೊಂಡರೆ ಮಾತ್ರ ಕನ್ನಡವೂ ಅಳಿಯದೆ ಉಳಿಯುತ್ತದೆ ಮಾನ್ಯ ಭಾಷಾ ತಜ್ಞ ರವಿಯವರೇ- ಭುವನೇಶ್ ಕೆ.
ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ
ಸಂಜ್ಞೆ ಭಾಷೆಯಲ್ಲಿ ಕಲಿಯಬೇಕಾ?
ಯಾವುದೇ ಒಂದು ಭಾಷೆ ಅನ್ನದ ಭಾಷೆಯಾಗಬಾರದು ಅಂದ್ರೆ ಏನರ್ಥ? ಸಂಜ್ಞೆ ಭಾಷೆ ಬಳಸಿ ಜ್ಞಾನ-ವಿಜ್ಞಾನ, ತಂತ್ರಜ್ಞಾನ ಕಲಿಬೇಕಾ ಎಲ್ರೂ? ಅದೇನೂ ಅಂತ ಟ್ವೀಟ್ ಮಾಡ್ತೀರಾ? ವಿಜ್ಞಾನ-ತಂತ್ರಜ್ಞಾನದಲ್ಲಿ ಕನ್ನಡ ತರದೇ ಬರೀ ಸಂಸ್ಕೃತಿ ಅಂತ ಭಜನೆ ಮಾಡಿಕೊಂಡು ಕೂತಿದ್ರೆ ಇವಾಗ ನೀವು ಈ ತರ ಕನ್ನಡದಲ್ಲಿ ಟ್ವೀಟ್ ಮಾಡೋಕು ಸಾಧ್ಯ ಆಗ್ತಿರಲಿಲ್ಲ ನೆನಪಿರಲಿ- ಉಪೇಂದ್ರ
ಕನ್ನಡ ಮಂತ್ರಿಯಾಗಿದ್ದ ದುರಂತ
ನಿಮಗೆ ಮಂತ್ರಿಗಿರಿ ಕೊಟ್ಟಿರೋದು ಕನ್ನಡ. ಎಂಎಲ್ಎ ಆಗಿರೋದು ಕನ್ನಡಿಗರಾಗಿ ಹುಟ್ಟಿದ್ದಕ್ಕೆ. ಅನ್ನಕೊಡದ ಭಾಷೆಗೆ ಭವಿಷ್ಯವಿಲ್ಲ. ಬೇರೆಲ್ಲೋ ಯಾಕೆ ನೋಡೋದು? ನಿಮ್ಮ ಮಗನನ್ನೇ ತಗೊಳಿ. ಮನೇಲಿ ಕನ್ನಡ ಕಲಿಸೋಕೆ ಆಗ್ಲಿಲ್ಲ ನಿಮಗೆ. ನೀವು ಕನ್ನಡ ಮಂತ್ರಿಗಳಾಗಿದ್ದು ದುರಂತವೋ, ದುರಾದೃಷ್ಟವೋ ಗೊತಾಗ್ತಿಲ್ಲ- ಸಾಗರ
ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್
ಭಾಷೆ ಭಾಷಣಕ್ಕೆ ಮಾತ್ರವಲ್ಲ
ನುಡಿ ಅನ್ನೋದೇ ಸಂಸ್ಕೃತಿ. ನುಡಿ ಜೊತೆಗೆ ಸಂಸ್ಕೃತಿಗಳು ಇರ್ತಾವೆ. ತಾಯ್ನುಡಿ, ತಾಯ್ನುಡಿಯಲ್ಲೇ ಸೇವೆಗಳು, ಕೆಲಸ. ಇದು ಜನರ ಮಾನವಹಕ್ಕು. ಕನ್ನಡ ಅನ್ನ ಕೊಡುವ ನುಡಿ ಆಗಿತ್ತು, ಹಾಗೆಯೇ ಇರಬೇಕು ಕೂಡ. ಸರ್ಕಾರಗಳ ಹಿಂದಿ ದಬ್ಬಾಳಿಕೆ, ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಹಿಂದೆ ಸರಿದಿದೆ. ನುಡಿ ಅನ್ನ ಕೊಟ್ಟಾಗಲೇ ಗಟ್ಟಿಯಾಗುವುದು. ಭಾಷೆ ಭಾಷಣಕ್ಕೆ ಮಾತ್ರವಲ್ಲ- ಕೃಷಿಕ್ ಎ.ವಿ.
ಸುರೇಶ್ ಕುಮಾರ್ ವಿವಾದ
ಮೈಸೂರಿನಲ್ಲಿ ಶನಿವಾರ ನಡೆದ ಹಿಂದಿ ಪ್ರಚಾರ ಪರಿಷತ್ ಸಮಾರಂಭದಲ್ಲಿ ಮಾತನಾಡಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, 'ರಾಷ್ಟ್ರಭಾಷೆ ಹಿಂದಿಯನ್ನು ಹೆಚ್ಚು ಕಲಿತರೆ ಜ್ಞಾನ ಭಾಷೆಯಾಗಿ ವ್ಯವಹರಿಸಲು ಸಾಧ್ಯವಾಗುತ್ತದೆ' ಎಂದು ಹೇಳಿಕೆ ನೀಡಿದ್ದರು.
ಎಂತೆಂತಾ ಮಾಸ್ಟರ್ ಪೀಸ್ಗಳು
"ಜ್ಞಾನಕ್ಕಾಗಿ ಹಿಂದಿ ಭಾಷೆಯ ಕಲಿಕೆ ಅಗತ್ಯ" - ಸುರೇಶ್ ಕುಮಾರ್, ಶಿಕ್ಷಣ ಸಚಿವರು. "ಕನ್ನಡವು ಅನ್ನದ ಭಾಷೆಯಾಗಬೇಕೆಂಬ ಭ್ರಮೆ ಸರಿಯಲ್ಲ" - ಸಿಟಿ ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ. ಅಬ್ಬಾ, ಎಂತೆಂತಾ ಮಾಸ್ಟರ್ ಪೀಸ್ಗಳು.. ನಮ್ಮ ದೌರ್ಭಾಗ್ಯಕ್ಕೆ!!- ವಿಕಾಸ್ ಹೆಗ್ಡೆ
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು
ನಮ್ಮ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಮಾತು ಕೇಳಿ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು. ಮಾನ್ಯ ಸಚಿವರ ಭವಿಷ್ಯದ ಆಲೋಚನೆಗಳು 1) ಶಿಕ್ಷಣ ಸಚಿವ ಸುರೇಶ್ ಕುಮಾರ್ ಇನ್ನು ಮುಂದೆ ಹಿಂದಿ ಭಾಷೆಯಲ್ಲಿ ಪತ್ರಿಕಾಗೋಷ್ಠಿ 2)ಕರ್ನಾಟಕ ವಿಧಾನಸಭಾ ಸದನದಲ್ಲಿ ಹಿಂದಿಯಲ್ಲಿ ಚರ್ಚೆ- ದೀಪಕ್