ಖಾತೆ ಕ್ಯಾತೆ: ಆನಂದ್ ಸಿಂಗ್, ಎಂಟಿಬಿ ನಾಗರಾಜ್ ರಾಜೀನಾಮೆ ಕೊಡ್ತಾರಾ?
ಬೆಂಗಳೂರು, ಆಗಸ್ಟ್ 11: ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ನಾಯಕತ್ವದ ಬದಲಾವಣೆ ನಂತರ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪಟ್ಟಾಭಿಷೇಕ ಮಾಡಿದ್ದಾಯಿತು. ಹೊಸ ಸಚಿವ ಸಂಪುಟ ರಚನೆಯ ಹಗ್ಗಜಗ್ಗಾಟದ ಬಳಿಕ ಖಾತೆ ಕಿಚ್ಚು ಬಿಜೆಪಿ ಪಾಳಯದಲ್ಲಿ ಮುನಿಸು ಪ್ರಾರಂಭವಾಗಿದೆ.
Recommended Video
ತಾವು ಬಯಸಿದ ಖಾತೆ ಸಿಕ್ಕಿಲ್ಲವೆಂದು ಕೆಲ ಸಚಿವರು ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಇದರ ಪರಿಣಾಮ ನೂತನ ಸರ್ಕಾರದ ಎರಡು ವಿಕೆಟ್ಗಳು ಪತನವಾಗುವ ಹಂತ ತಲುಪಿವೆ. ಇಷ್ಟು ದಿನ ಅಸಮಾಧಾನದ ಹೇಳಿಕೆ ಕೊಡುವ ಮೂಲಕ ಹೈಕಮಾಂಡ್ಗೆ ಎಚ್ಚರಿಕೆ ನೀಡುತ್ತಿದ್ದ ಸಚಿವರು ಖಾತೆ ಸಲುವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ವಿಜಯನಗರ ಶಾಸಕ ಆನಂದ್ ಸಿಂಗ್ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ವೇಳೆ ಮೊದಲ ಸಾಲಿನಲ್ಲಿ ನಿಂತು ರಾಜೀನಾಮೆ ನೀಡಿದ್ದರು. ಈಗ ಬಿಜೆಪಿ ಸರ್ಕಾರದಲ್ಲಿ ಮತ್ತೆ ರಾಜೀನಾಮೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಆನಂದ್ ಸಿಂಗ್ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಬೊಮ್ಮಾಯಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಖಾತೆ ವಿಚಾರವಾಗಿ ಮತ್ತೆ ಸಿಡಿದೆದ್ದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ
ಮೂಲಗಳ ಪ್ರಕಾರ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಅನಂದ್ ಸಿಂಗ್ಗೆ ಪ್ರವಾಸೋದ್ಯಮ ಇಲಾಖೆ ನೀಡಿದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆನಂದ್ ಸಿಂಗ್ ಇಷ್ಟು ದಿನ ಬಾಯಿ ಮಾತಲ್ಲೇ ಎಚ್ಚರಿಕೆ ಕೊಡುತ್ತಿದ್ದರು. ಇದೀಗ ಸಚಿವ ಸ್ಥಾನ ಮಾತ್ರವಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಎಂದು ತಿಳಿದುಬಂದಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ಕ್ಷೇತ್ರದಲ್ಲಿರೋ ಶಾಸಕ ಆನಂದ್ ಸಿಂಗ್ ಕಚೇರಿಯಲ್ಲಿ ಇಷ್ಟು ದಿನ ಪ್ರವೇಶ ದ್ವಾರದಲ್ಲಿ ಶಾಸಕರ ಕಾರ್ಯಾಲಯ ಅನ್ನುವ ಬೃಹತ್ ಬೋರ್ಡ್ ರಾರಾಜಿಸುತ್ತಿತ್ತು. ಆದರೆ ಮಂಗಳವಾರ ಸಂಜೆ ಆನಂದ್ ಸಿಂಗ್ ಕಚೇರಿ ಎದುರು ಕ್ರೇನ್ ಪ್ರತ್ಯಕ್ಷವಾಗಿ, ಕ್ಷಣ ಮಾತ್ರದಲ್ಲಿ ಆನಂದ್ ಸಿಂಗ್ ಕಚೇರಿಯ ಶಾಸಕರ ಕಾರ್ಯಾಲಯ ನಾಮಫಲಕ ಕೆಳಕ್ಕಿಳಿಸಲಾಗಿದೆ. ಇದು ಸಚಿವ ಸ್ಥಾನದ ಜೊತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಮುನ್ಸೂಚನೆಯಾಗಿದೆ.
ಸಚಿವ ಸ್ಥಾನ ಮಾತ್ರವಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ
ಆನಂದ್ ಸಿಂಗ್ ರಾಜೀನಾಮೆ ಎಚ್ಚರಿಕೆ ಮೂಲಕ ರಾಜ್ಯ ಬಿಜೆಪಿ ಪಾಳಯದಲ್ಲಿ ಬಂಡಾಯದ ಬೆಂಕಿ ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ಕಚೇರಿ ಬೋರ್ಡ್ ತೆರವುಗೊಳಿಸುವುದರೊಂದಿಗೆ, ಆನಂದ್ ಸಿಂಗ್ ರಾಜೀನಾಮೆ ಪತ್ರವನ್ನೂ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಸಚಿವ ಸ್ಥಾನ ಮಾತ್ರವಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಲು ಮುಂದಾಗಿರುವುದು ಬಿಜೆಪಿ ವರಿಷ್ಠರನ್ನು ಕಂಗೆಡಿಸಿದೆ. ಹೀಗಾಗಿ ರಾಜ್ಯ ಬಿಜೆಪಿ ಬೆಳವಣಿಗೆಗಳ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ಪಡೆದುಕೊಂಡಿದ್ದಾರೆನ್ನಲಾಗಿದೆ.
ಸಿಎಂ ಬೊಮ್ಮಾಯಿ ಕರೆ ಸ್ವೀಕರಿಸದ ಆನಂದ್ ಸಿಂಗ್
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್ಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋನ್ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಸಿಎಂ ಬೊಮ್ಮಾಯಿ ಕರೆ ಮಾಡಿದರೆ ಆನಂದ್ ಸಿಂಗ್ ಮಾತ್ರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಖಾತೆ ಬದಲಾಯಿಸದ ಹಿನ್ನೆಲೆಯಲ್ಲಿ ಸಚಿವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಮುನಿಸಿಕೊಂಡಿರುವ ಆನಂದ್ ಸಿಂಗ್ ಅವರ ಕುಟುಂಬಸ್ಥರ ಮೊಬೈಲ್ಗೆ ಕರೆ ಮಾಡಿದರೂ ಸ್ವೀಕರಿಸಿದೆ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.
ಎಂಟಿಬಿ ನಾಗರಾಜ್ ರಾಜೀನಾಮೆ?
ಮತ್ತೊಂದೆಡೆ ಎಂಎಲ್ಸಿ ಎಂಟಿಬಿ ನಾಗರಾಜ್ ಕೂಡಾ ತಮಗೆ ಕೊಟ್ಟಿರುವ ಪೌರಾಡಳಿತ ಖಾತೆಯ ಬಗ್ಗೆ ಮೊದಲ ದಿನದಿಂದಲೇ ಅಸಮಾಧಾನ ಹೊರಹಾಕಿದ್ದಾರೆ. ಮೂರು ದಿನಗಳ ಹಿಂದೆ ಸಿಎಂ ಬೊಮ್ಮಾಯಿಯನ್ನು ಭೇಟಿ ಮಾಡಿದ್ದ ಸಚಿವ ಎಂಟಿಬಿ ನಾಗರಾಜ್, ಮೂರೇ ಮೂರು ದಿನ ಕಾಯುತ್ತೇನೆ. ಖಾತೆ ಬದಲಿಸದಿದ್ದರೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ಹೈಕಾಂಡ್ಗೆ ಎಚ್ಚರಿಕೆ ನೀಡದ್ದರು. ಆಗಸ್ಟ್ 8ರಂದು ಎಂಟಿಬಿ ನಾಗರಾಜ್ ಕೊಟ್ಟಿರುವ ಮೂರು ದಿನಗಳ ಡೆಡ್ಲೈನ್ ಬುಧವಾರ ಅಂತ್ಯಗೊಳ್ಳಲಿದೆ. ಹೀಗಾಗಿ ಎಂಟಿಬಿ ನಾಗರಾಜ್ ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎನ್ನುವ ಗುಸುಗುಸು ಚರ್ಚೆ ನಡೆಯುತ್ತಿದೆ.
ಶ್ರೀರಾಮುಲು ಪರೋಕ್ಷ ಅಸಮಾಧಾನ
ಇನ್ನು ಸಾರಿಗೆ ಖಾತೆ ನೀಡಿರುವ ಬಗ್ಗೆ ಸಚಿವ ಬಿ. ಶ್ರೀರಾಮುಲು ಕೂಡಾ ಚಿತ್ರದುರ್ಗದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ. ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಶ್ರೀರಾಮುಲುಗೆ ಸಾರಿಗೆ ಇಲಾಖೆ ಕೊಟ್ಟಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೂ ಕಾರಣವಾಗಿದೆ. ಸಾರಿಗೆ ಖಾತೆ ನೀಡಿರುವ ಅಸಮಾಧಾನದ ಬಗ್ಗೆ ಕೇಳಿದಾಗ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ ಎಂದು ಸತ್ಯ ಹರಿಶ್ಚಂದ್ರ ಕತೆ ಹೇಳಿ ತಮ್ಮ ನೋವನ್ನು ಪರೋಕ್ಷವಾಗಿ ಹೊರಹಾಕಿದ್ದರು.
ಮಾಹಿತಿ ಪಡೆದ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ
ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಖಾತೆ ವಿಚಾರವಾಗಿ ಅಸಮಾಧಾನ ಸ್ಫೋಟಗೊಂಡಿದ್ದು, ಪಕ್ಷದ ವಿದ್ಯಮಾನಗಳ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ಪಡೆದುಕೊಂಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ನಿರ್ಧಾರ ವಿಚಾರ, ಎಂಟಿಬಿ ನಾಗರಾಜ್ ಒತ್ತಡ, ಶಾಸಕ ಎಸ್.ಎ. ರಾಮದಾಸ್ ಮುನಿಸಿಕೊಂಡಿರುವುದು, ಬಿ. ಶ್ರೀರಾಮುಲು ಬೇಸರ, ಅಪ್ಪಚ್ಚು ರಂಜನ್ ಬೆಂಬಲಿಗರ ಪ್ರತಿಭಟನೆ ಈ ಎಲ್ಲಾ ವಿದ್ಯಮಾನಗಳ ಮಾಹಿತಿಯನ್ನು ಅರುಣ್ ಸಿಂಗ್ ಸಿಎಂ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದಿಂದ ಮಾಹಿತಿ ಪಡೆದಿದ್ದಾರೆ.