ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ: ಯಾವ ಸಚಿವರು ಏನು ಹೇಳಿದರು?
ಬೆಂಗಳೂರು, ಜು. 22: ನಾಯಕತ್ವ ಬದಲಾವಣೆ ಕುರಿತು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಎರಡೆರಡು ಬಾರಿ ಇವತ್ತು ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಜುಲೈ 26ರ ಬಳಿಕ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ನೇಮಕವಾಗುವುದು ಖಚಿತವಾಗಿದೆ. ಇದೀಗ ಹೈಕಮಾಂಡ್ ಕಡೆಗೆ ರಾಜ್ಯ ಬಿಜೆಪಿಯ ಎಲ್ಲ ನಾಯಕರ ಚಿತ್ತ ನೆಟ್ಟಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಸಂಪುಟ ಸಹೋದ್ಯೋಗಿಗಳು ಅನುಕರಿಸಿದ್ದಾರೆ. ಹೈಕಮಾಂಡ್ ತೀರ್ಮಾನದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಬಹುತೇಕ ಸಚಿವರಲ್ಲಿ ಉತ್ಸಾಹ ಕಾಣಿಸಲಿಲ್ಲ. ಎರಡು ವರ್ಷಗಳ ಸಂಭ್ರಮಾಚರಣೆ ಮಾಡಬೇಕೊ? ಅಥವಾ ತಮ್ಮ ನಾಯಕರ ಬದಲಾವಣೆ ಹಿನ್ನೆಲೆಯಲ್ಲಿ ಸುಮ್ಮನಿರಬೇಕೊ ಎಂಬ ದ್ವಂದ್ವ ಸಚಿವರ ಮಖಂದಲ್ಲಿ ಕಂಡು ಬಂದಿತು. ಆದರೂ ಕೂಡ ಬಹುತೇಕ ಸಚಿವರು ಯಡಿಯೂರಪ್ಪ ಅವರ ಪರವಾಗಿ ಮಾತನಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಲ್ಲಿ ಎಲ್ಲರಿಗೂ ಮತ್ತೆ ಸಂಪುಟದಲ್ಲಿ ಸಚಿವಸ್ಥಾನ ಸಿಗುತ್ತದೆಯಾ ಎಂಬ ಪ್ರಶ್ನೆ ಇದೀಗ ಎಲ್ಲ ಸಚಿವರಿಗೂ ಎದುರಾಗಿದೆ.
ಸಿಎಂ ಹೇಳಿದ ಮೇಲೆ ಆಯ್ತು!
ನಾಯಕತ್ವ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ ಮೇಲೆ ಆಯಿತು. ನಮಗೇನು ಆತಂಕ ಇಲ್ಲ. ಹೈಕಮಾಂಡ್ ಹೇಳಿದ ಮೇಲೆ ನಾವು ಮಾತನಾಡುವುದಿಲ್ಲ. ಅವರು ಹೇಳುವ ಸೂಚನೆಯನ್ನು ಪಾಲಿಸುತ್ತೇವೆ" ಎಂದರು.
"ನಾಯಕತ್ವ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಯಡಿಯೂರಪ್ಪ ಅವರನ್ನು ಮುಂದೂವರೆಸುತ್ತಾರಾ? ಇಲ್ಲವಾ? ಅನ್ನೋದು ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದು, ನಮ್ಮ ಸಂಪೂರ್ಣ ಒಪ್ಪಿಗೆ ಇದೆ. ಯಡಿಯೂರಪ್ಪ ನಂಬಿ ಬಂದಿದ್ದೇವೆ. ಸರ್ಕಾರ ರಚನೆ ಮಾಡಿದ್ದೇವೆ. ಮಂತ್ರಿನೂ ಆಗಿದ್ದೇವೆ. ಮುಂದೇನು ಹೇಳಿ? ನಮಗೆ ಯಾವುದೇ ಆತಂಕ ಇಲ್ಲ. ಆತಂಕ ಯಾಕೆ? ಕೊರೊನಾ ಸಂಕಷ್ಟ ಸೇರಿದಂತೆ ಎಲ್ಲ ವಿಚಾರಗಳನ್ನು ಅವಲೋಕನ ಮಾಡಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ" ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜಣ್ಣ ನಂಗೆ ಯಾವುದೇ ಮೆಸೇಜ್ ಬಂದಿಲ್ಲ!
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಾಜೂಗೌಡ ಅವರು, "ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇವು. ಆಗ ನೋಡು ರಾಜಣ್ಣ ನನಗೆ ಯಾವುದೇ ಮೆಸೇಜ್ ಬಂದಿಲ್ಲ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ. ಹೈಕಮಾಂಡ್ ಹೇಳಿದ್ರೆ ನಾನು ರಾಜೀನಾಮೆ ಕೊಡ್ತೇನೆ. ಹೀಗಾಗಿ ಬೆಳಗ್ಗೆಯೇ ಅವರು ಯಾರೂ ನನ್ನ ಪರ ಹೇಳಿಕೆ, ಪ್ರತಿಭಟನೆ ಮಾಡದಂತೆ ಅವರೇ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಸುಮ್ಮ ಸುಮ್ಮನೆ ಗೊಂದಲ ಸೃಷ್ಟಿ ಮಾಡೋದು ಬೇಡ ಎಂದಿದ್ದಾರೆ" ಎಂದರು.
ಇನ್ನು ಇದೇ ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, "ಸಿಎಂ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷ ಮಾತೃ ಸಮಾನ ಎಂದಿದ್ದಾರೆ. ಅದನ್ನು ವ್ಯಾಖ್ಯಾನ ಮಾಡಿ ಹೇಳುವಷ್ಟು ದೊಡ್ಡವರು ನಾನಲ್ಲ. ಉಳಿದಂತೆ 17 ವಲಸಿಗರು ವಿಚಾರ ಆ ನಂತರದ್ದು" ಎಂದರು.
ರಾಜ್ಯ ಆಳಬೇಕು ಅಂತ ಆಸೆ ಇದೆ
ಎಂದಿನಂತೆ ತಮ್ಮದೇ ದಾಟಿಯಲ್ಲಿಯೇ ಮಾತನಾಡಿದ ಆಹಾರ ಸಚಿವ ಉಮೇಶ್ ಕತ್ತಿ ಅವರು, "ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗಬೇಕು ಎನ್ನುವ ಬೇಡಿಕೆ ಇದೆ. ಆ ಭಾಗದ ಯಾವುದೇ ಸಮುದಾಯದವರು ಸಿಎಂ ಆದರೂ ಸಹಕಾರ ನೀಡುತ್ತೇವೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಶಾಸಕರು ಹೆಚ್ಚಿದ್ದಾರೆ. ಆದರೂ ಯಾರನ್ನೇ ಸಿಎಂ ಮಾಡಿದರೂ ಸ್ವಾಗತವಿದೆ. ನಾನೂ 8 ಬಾರಿ ಶಾಸಕನಾಗಿದ್ದೇನೆ. ನಾನೂ ಸಿಎಂ ಆಗಿ ರಾಜ್ಯ ಆಳಬೇಕು ಅಂತ ಆಸೆ ಇದೆ. ನಾನೂ ಯಡಿಯೂರಪ್ಪ ಸಮನಾಗಿದ್ದೇನೆ. ಆದರೆ ನನಗೆ ಇನ್ನೂ 15 ವರ್ಷ ಅವಕಾಶ ಇದೆ. ಯಾವತ್ತಾದರೂ ಒಂದು ಒಂದು ದಿನ ಸಿಎಂ ಆಗ್ತಿನಿ ಅನ್ನೊ ಭರವಸೆ ಇದೆ" ಎಂದು ಹೇಳಿದರು.
ಜೊತೆಗೆ, "ನಾನು ಈಗ ಹೈಕಮಾಂಡ್ ಭೇಟಿಗೆ ಹೋಗಲ್ಲ. ಬಿಜೆಪಿಯಲ್ಲಿ 75 ವರ್ಷದ ಲಿಮಿಟ್ ಇದೆ. ಯಡಿಯೂರಪ್ಪ ಅವರಿಗೆ 80 ವರ್ಷ ಹತ್ತಿರ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಅವರೂ ಬದ್ದರಾಗಿತ್ತಾರೆ. ನಾವೂ ಬದ್ದರಾಗಿರುತ್ತೇವೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಮುಖ್ಯಮಂತ್ರಿಗಳು ಪಾಲನೆ ಮಾಡುತ್ತಾರೆ. ನಾವೂ ಮಾಡುತ್ತೇವೆ. ಸಿಎಂ ಯಡಿಯೂರಪ್ಪ ಅವರಿಗೆ ಗೌರವಯುತ ನಿರ್ಗಮನವಾಗಬೇಕು. ಅವರು ಪಕ್ಷದ ತೀರ್ಮಾನವನ್ನು ಗೌರವಿಸುತ್ತಾರೆ. ಅವರು ಪಕ್ಷಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಪಕ್ಷವೂ ಅವರಿಗೆ ಗೌರವ ಕೊಡುತ್ತದೆ" ಎಂದು ಸಚಿವ ಉಮೇಶ್ ಕತ್ತಿ ವಿವರಿಸಿದರು.
Recommended Video
ನಾವೆಲ್ಲ ವಲಸಿಗರಲ್ಲ ನಾವೆಲ್ಲ ಬಿಜೆಪಿಯವರು
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ. ಗೋಪಾಲಯ್ಯ ಅವರು, "ನಾವೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಇದ್ದೇವೆ. ಅವರ ಜೊತೆ ಕುಳಿತು ಮಾತನಾಡಿ ಅವರ ಮನಸ್ಸಿಗೆ ನೋವಾಗದಂತೆ ಮಾಡುತ್ತೇವೆ. ಇನ್ನು ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಾವೆಲ್ಲ ಒಟ್ಟಿಗೆ ಕುಳಿತು ಚರ್ಚೆ ಮಾಡಿದ ಬಳಿಕ ಹೈಕಮಾಂಡ್ ಭೇಟಿ ಕುರಿತು ತಿರ್ಮಾನ ಮಾಡುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಧ್ವನಿ. ಜೊತೆಗೆ ನಾವೆಲ್ಲ ವಲಸಿಗರಲ್ಲ, ನಾವೆಲ್ಲರೂ ಬಿಜೆಪಿಯವರು. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವೂ ಬದ್ಧರಾಗಿರುತ್ತೇವೆ. ಹೀಗಾಗಿ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬುತ್ತೇವೆ" ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಎಲ್ಲ ಸಚಿವರೂ ಕೂಡ ಇದೀಗ ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಹೇಳಿದ್ದಾರೆ. ಆದರೆ ಸಿಎಂ ಬದಲಾವಣೆ ಬಳಿದ ಎಲ್ಲರಿಗೂ ಸಚಿವಸ್ಥಾನ ಸಿಗುತ್ತದೆಯಾ ಎಂಬ ಭರವಸೆ ಇದ್ದಂತಿಲ್ಲ. ಹೀಗಾಗಿ ಹೊಸ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಬಳಿಕ ಏನಾಗುತ್ತದೆಯೊ ಎಂಬ ಆತಂಕವಂತೂ ಎಲ್ಲ ಸಚಿವರಿಗೂ ಇದ್ದೆ ಇದೆ!