ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದರಾಯನಪುರ ಘಟನೆಗೆ ಸರ್ಕಾರದ ಧೋರಣೆಯೆ ಕಾರಣ ಎಂದ ಸಚಿವರು!

|
Google Oneindia Kannada News

ಬೆಂಗಳೂರು, ಏ. 20: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೃದುಧೋರಣೆ ನಿನ್ನೆ ಬೆಂಗಳೂರಿನ ಪಾದರಾಯನಪುರದಲ್ಲಿ ಘಟನೆ ನಡೆಯಲು ಕಾರಣವಾಯಿತಾ? ಇಂಥದ್ದೊಂದು ಚರ್ಚೆ ಇದೀಗ ಶುರುವಾಗಿದೆ. ಇದೇ ಚರ್ಚೆ ಇವತ್ತು ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೂ ನಡೆದಿದೆ ಎಂಬ ಮಾಹಿತಿಯಿದೆ.

ಇವತ್ತು ಬೆಳಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟದ ನಿಗದಿತ ಅಜೆಂಡಾದಲ್ಲಿನ ವಿಷಯಗಳನ್ನು ಬಿಟ್ಟು ಪಾದರಾಯನಪುರದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಕುರಿತು ಮೊದಲು ಚರ್ಚೆ ನಡೆದಿದೆ. ಗೃಹ ಇಲಾಖೆ ಕುರಿತು ಕೆಲವು ಸಚಿವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೆ ಕಟ್ಟುನಿಟ್ಟಿನ ಸೀಲ್‌ಡೌನ್ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಜೊತೆಗೆ ಹಲವು ಕಟ್ಟಿನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಂಪುಟದಲ್ಲಿ ನಡೆದ ಚರ್ಚೆಯ ಸಂಪೂರ್ಣ ಮಾಹಿತಿ ಮುಂದಿದೆ.

ಘಟನೆಗೆ ಸರ್ಕಾರದ ಮೃದು ಧೋರಣೆ ಕಾರಣ

ಘಟನೆಗೆ ಸರ್ಕಾರದ ಮೃದು ಧೋರಣೆ ಕಾರಣ

ಹಿಂದೆ ಸರ್ಕಾರ ಮೃದುಧೋರಣೆ ತಾಳಿದಿದ್ದೇ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ವೈದ್ಯರ ಮೇಲಿನ ಹತ್ಯಾಯತ್ನಕ್ಕೆ ಕಾರಣವಾಗಿದೆ ಎಂದು ಸಚಿವರು ಸಂಪುಟ ಸಭೆ ಆರಂಭದಲ್ಲಿಯೆ ಪ್ರಸ್ತಾಪ ಮಾಡಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಘಟನೆ ಆದಾಗಲೇ ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಮೃದು ನಡೆಗೆ ಸಚಿವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮೃದು ಧೋರಣೆ ಕುರಿತು ಸಚಿವರಾದ ಆರ್. ಅಶೋಕ್, ಸಿ.ಟಿ. ರವಿ ಹಾಗೂ ಬಿ. ಶ್ರೀರಾಮುಲು ಅವರು ಪ್ರಸ್ತಾಪ ಮಾಡಿದ್ದಾರೆ. ಮೃದು ಹೇಳಿಕೆಗಳಿಂದ ಸರ್ಕಾರದ ಬದಲು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ ಎಂದು ಸಚಿವರು ಮಾತನಾಡಿದ್ದಾರೆ.

ಪೊಲೀಸರಿಗೆ ಸಂಪೂರ್ಣ ಸ್ವಾತಂತ್ಯ ಕೊಡುತ್ತೇವೆ ಎಂದ ಸಿಎಂ

ಪೊಲೀಸರಿಗೆ ಸಂಪೂರ್ಣ ಸ್ವಾತಂತ್ಯ ಕೊಡುತ್ತೇವೆ ಎಂದ ಸಿಎಂ

ಸರ್ಕಾರದ ಮೃದು ಧೋರಣೆಯಿಂದಲೇ ಘಟನೆ ನಡೆಯಲು ಕುಮ್ಮಕ್ಕು ಕೊಟ್ಟಂತಾಗಿದೆ ಎಂದು ಸಂಪುಟ ಸದಸ್ಯರು ಆರೋಪಿಸಿದ್ದರಿಂದ ಪೊಲೀಸರ ಮೂಲಕ ಅಂತಹ ಪ್ರಕರಣಗಳನ್ನು ಹತ್ತಿಕ್ಕಲು ಚರ್ಚೆ ನಡೆದಿದೆ. ಜೊತೆಗೆ ಇಂತಹ ಕಠಿಣ ಸಂದರ್ಭಗಳಲ್ಲಿ ಸಂಯಮ ಅಗತ್ಯವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟದ ಸಹೋದ್ಯೋಗಿಗಳಿಗೆ ತಿಳಿ ಹೇಳಿದ್ದಾರೆ. ಆದರೆ ಇನ್ಮುಂದೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ದುಷ್ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಮೃದು ಧೋರಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ಜೊತೆಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದಿದ್ದಾರೆ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುವುದರಿಂದ ಸಣ್ಣ ಗಲಾಟೆ ಆಗಲು ಅವಕಾಶ ಇಲ್ಲ ಎಂದು ಸಂಪುಟ ಸದಸ್ಯರಿಗೆ ಹೇಳಿದ್ದಾರೆ.

ಕೇರಳ, ಉತ್ತರ ಪ್ರದೇಶದ ರೀತಿ ಸುಗ್ರೀವಾಜ್ಞೆ ಜಾರಿ

ಕೇರಳ, ಉತ್ತರ ಪ್ರದೇಶದ ರೀತಿ ಸುಗ್ರೀವಾಜ್ಞೆ ಜಾರಿ

ಕೊರೊನಾಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಉತ್ತರ ಪ್ರದೇಶದ ಸರ್ಕಾರಗಳು ಕೈಗೊಂಡಿರುವ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಕೂಡಾ ಕ್ರಮ ವಹಿಸಲು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಮಾಹಿತಿ ಕೊಟ್ಟಿದ್ದಾರೆ.

ಕೊರೊನಾ ವೈರಸ್‌ ಪರೀಕ್ಷೆ, ಚಿಕಿತ್ಸೆಗೆ ಸಹಕಾರ ಕೊಡದೇ ಇರುವುದು ಶಿಕ್ಷಾರ್ಹ ಅಪರಾಧ ಎಂದು ಸುಗ್ರೀವಾಜ್ಞೆ ಮಾಡಿದ್ದೇವೆ. ಪಾದರಾಯನಪುರ ಗಲಾಟೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ಅಲ್ಲಿಗೆ ಹೋಗುವ ಕಾರ್ಯಕರ್ತರಿಗೂ ಭದ್ರತೆ ಸಂಪೂರ್ಣ ಭದ್ರತೆ ಕೊಡಲಾಗುವುದು. ಪೊಲೀಸರಿಗೂ ಕೂಡ ಸ್ವತಂತ್ರವಾಗಿ ಕೆಲಸ ಮಾಡುವಂತೆ ಮೊದಲೇ ಸೂಚಿಸಿದ್ದೇವೆ. ಪೊಲೀಸರಿಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಎಂಬುದು ನಿಜವಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಸೀಲ್‌ಡೌನ್, ಲಾಕ್‌ಡೌನ್ ಮುಂದುವರಿಕೆ

ಸೀಲ್‌ಡೌನ್, ಲಾಕ್‌ಡೌನ್ ಮುಂದುವರಿಕೆ

ಮೇ 3 ರವರೆಗೂ ಯಥಾಸ್ಥಿತಿಯಂತೆ ಲಾಕ್‌ಡೌನ್ ಮುಂದುವರೆಸಲು ಸಂಪುಟ ತೀರ್ಮಾನ ಮಾಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರದಿಂದ ಏನಾದರೂ ಮಾರ್ಗದರ್ಶನ ಬಂದರೆ ಆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಸಧ್ಯಕ್ಕಂತೂ ಲಾಕ್‌ಡೌನ್ ಯಥಾಸ್ಥಿತಿ ಮುಂದುವರೆಸಲು ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳು ಹಿಂದಕ್ಕೆ

ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳು ಹಿಂದಕ್ಕೆ

ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಮೇಲೆ ಹೂಡಲಾದ ಮೊಕದ್ದಮೆಗಳು, ಟಿಪ್ಪು ಜಯಂತಿ ಸಂದರ್ಭದಲ್ಲಿ ಉಂಟಾದ ಗಲಭೆಯ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿದ ಪ್ರಕರಣಗಳು, ಗಣೇಶೋತ್ಸವದಂತಹ ಸಾರ್ವಜನಿಕ ಸಮಾರಂಭದ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಾವೆಗಳು ಒಳಗೊಂಡಂತೆ ರಾಜ್ಯದ ವಿವಿಧೆಡೆಗಳಲ್ಲಿ ಹೂಡಿದ್ದ 46 ಪ್ರಕರಣಗಳನ್ನು ಹಿಂಪಡೆಯಲಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. ಜೊತೆಗೆ, ಇಂತಹ ಸಾರ್ವಜನಿಕ ವಿಷಯಗಳಲ್ಲಿ ಹೋರಾಟ ಮಾಡಿದವರ ವಿರುದ್ಧ ದಾಖಲಾದ 152 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ.

ಸನ್ನಡತೆ ಖೈದಿಗಳ ಅವಧಿ ಪೂರ್ವ ಬಿಡುಗಡೆ

ಸನ್ನಡತೆ ಖೈದಿಗಳ ಅವಧಿ ಪೂರ್ವ ಬಿಡುಗಡೆ

ಜೀವಾವಧಿ ಶಿಕ್ಷೆಗೊಳಗಾಗಿ 14 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಅಥವಾ 10 ವರ್ಷ ಶಿಕ್ಷೆ ಅನುಭವಿಸಿದ ಖೈದಿಗಳಿಗೆ ಸನ್ನಡತೆ ಆಧಾರದ ಮೇರೆಗೆ ಅವಧಿ ಪೂರ್ವ ಬಿಡುಗಡೆ ಮಾಡಲು ನಿಯಮಗಳ ಕರಡನ್ನು ರಾಜ್ಯ ಸಚಿವ ಸಂಪುಟದ ಅನುಮೋದಿಸಿದೆ. ಈ ಮುನ್ನ, ದಂಡ ಪ್ರಕ್ರಿಯಾ ಸಂಹಿತೆಯ ಪರಿಚ್ಛೇಧ 167 ( 1 ) ವ್ಯಾಪ್ತಿಗೊಳಪಡುವ ಪ್ರಕರಣಗಳನ್ನು ರಾಜ್ಯಪಾಲರಿಗೆ ಕಳುಹಿಸಿ ಬಿಡುಗಡೆಗೆ ಶಿಫಾರಸ್ಸು ಮಾಡಲಾಗುತ್ತಿತ್ತು. ಇದೀಗ ಸನ್ನಡತೆ ಆಧಾರದ ಮೇರೆಗೆ ಶಿಕ್ಷಾ ಅವಧಿಯನ್ನು ಕಡಿಮೆ ಮಾಡಲು ಸೂಕ್ತ ನಿಯಮ ರೂಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್

ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್

ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲದ ಉಚಿತ ಸಿಲೆಂಡರ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದೇ ಮಾದರಿಯಲ್ಲಿಯೇ ರಾಜ್ಯ ಸರ್ಕಾರವೂ ಕೂಡಾ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲದ ಉಚಿತ ಸಿಲೆಂಡರ್ ವಿತರಿಸಲು ಹಾಗೂ ಇದಕ್ಕಾಗಿ 27.52 ಕೋಟಿ ವೆಚ್ಚ ಭರಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಹೊಂದಿರುವ 98,521 ಫಲಾನುಭವಿಗಳಿಗೆ ಇದರ ಲಾಭ ದೊರೆಯಲಿದೆ.

ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ

ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ

ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಿಸ್ತರಿಸಲು ಸಂಪುಟ ಸಹಮತಿ ನೀಡಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ 137 ಕೋಟಿ ರೂ ಹೊರೆಯಾಗಲಿದೆ. ಅಲ್ಲದೆ, ಇದರ ಲಾಭ 2800 ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ದೊರೆಯಲಿದೆ.

ಸಂಪುಟದ ಇತರ ನಿರ್ಣಯಗಳು

ಸಂಪುಟದ ಇತರ ನಿರ್ಣಯಗಳು

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕು ದಾರೋಜಿ ಗ್ರಾಮಕ್ಕೆ 23.40 ಕೋಟಿ ರೂ ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೆಯ ಹಂತದಲ್ಲಿ ಕೇರಳ-ಕರ್ನಾಟಕದ ಗಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಕೇಂದ್ರದ ಪಾಲು 1274 ಕೋಟಿ ರೂ ಒಳಗೊಂಡಂತೆ 2729.66 ಕೋಟಿ ರೂ ವೆಚ್ದದಲ್ಲಿ ಅಭಿವೃದ್ಧಿ ಪಡಿಸಲು ಸಚಿವ ಸಂಪುಟ ಸಮ್ಮತಿಸಿದೆ.

ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆಯಡಿ ಬ್ಯಾಂಕುಗಳಲ್ಲಿ ರೈತರ ಫಸಲುಗಳಿಗೆ ಮಾಡಿಸಲಾದ ವಿಮೆಯ ರಾಜ್ಯ ಸರ್ಕಾರದ ಪಾಲಿನ 2016 ಸಾಲಿನ ವಿಮಾ ಮೊತ್ತ 18.59 ಕೋಟಿಗಳನ್ನು ಭರಿಸಲು ಸಂಪುಟ ಒಪ್ಪಿಗೆ ನೀಡಿದೆ.

English summary
Ministers alleged in Cabinet meeting that government's soft attitude was responsible for Padarayanapura incident. Madhuswamy said the decision to continue the lockdown status has always been made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X