ಸಚಿವ ಸ್ಥಾನದ ಆಕಾಂಕ್ಷಿಗಳು: ಇರೋ 1ವರ್ಷದಲ್ಲಿ ಅದೇನು ಕುರ್ಚಿ ಬಿಸಿ ಮಾಡುತ್ತೀರೋ?
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಒತ್ತಡ ಹೇರುತ್ತಲೇ ಬರುತ್ತಿದ್ದಾರೆ. ಆದರೆ, ಪ್ರಬಲ ಬಿಜೆಪಿ ಹೈಕಮಾಂಡ್ ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ರಾಜ್ಯದ ನಾಯಕರ ಯಾವ ಶಿಫಾರಸಿಗೂ ಕ್ಯಾರೇ ಅನ್ನುತ್ತಿಲ್ಲ.
ಬಿಎಸ್ವೈ ಸರಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಸಿಎಂ ಮನೆ, ರಾಜ್ಯಾಧ್ಯಕ್ಷರ ಮನೆ, ದೆಹಲಿ ಸುತ್ತುತ್ತಿದ್ದವರಿಗೆ ನೋಡೋಣ ಎನ್ನುವ ಮಾತು ವರಿಷ್ಠರಿಂದ ಬರುತ್ತಿತ್ತೇ ವಿನಃ ಯಾವುದೇ ಖಚಿತ ಭರವಸೆ ಸಿಗುತ್ತಿಲ್ಲ. ಆದರೂ, ಆಕಾಂಕ್ಷಿಗಳ ಪ್ರಯತ್ನ ಮುಂದುವರಿಯುತ್ತಲೇ ಇದೆ.
ಆರಗ ಜ್ಞಾನೇಂದ್ರ ಸೇರಿ ಕೆಲವು ಸಚಿವರ ಭವಿಷ್ಯ ಹೈಕಮಾಂಡ್ ಅಂಗಳದಲ್ಲಿ!
ಈಗ, ಬಸವರಾಜ ಬೊಮ್ಮಾಯಿಯವರ ಸರದಿ. ಆಕಾಂಕ್ಷಿಗಳ ದೊಡ್ಡ ಲಿಸ್ಟೇ ಇದ್ದರೂ, ಕೊನೆಗೆ ಹೈಕಮಾಂಡ್ ಬಯಸಿದ್ದೇ ಆಗುವುದು ಎನ್ನುವುದು ಬೊಮ್ಮಾಯಿಯವರಿಗೆ ಗೊತ್ತಿರದ ವಿಚಾರವೇನೂ ಅಲ್ಲ. ಅವರು ದೆಹಲಿ ಪ್ರವಾಸಕ್ಕೆ ಹೊರಟಾಗಲೆಲ್ಲಾ ಸಂಪುಟ ವಿಸ್ತರಣೆಯ ವಿಚಾರ ಮುನ್ನಲೆಗೆ ಬರುತ್ತದೆ.
ಕೆಲವು ದಿನಗಳ ಹಿಂದೆ ಮತ್ತೆ ಬೊಮ್ಮಾಯಿಯವರು ದೆಹಲಿಗೆ ಹೋಗಿದ್ದರು. ಅಮಿತ್ ಶಾ ಅವರು ಒಂದು ಹತ್ತು ನಿಮಿಷ ಅವರ ಬಳಿ ಮಾತನಾಡಿದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ಮೋದಿ ಅವರ ಭೇಟಿಗೆ ಸಮಯಾವಕಾಶ ಸಿಗಲಿಲ್ಲ. ಇಷ್ಟಾದರೂ ಸಂಪುಟ ಸೇರಿಕೊಳ್ಳಲು ಬಯಸುತ್ತಿರುವವರ ಮಹತ್ವಾಕಾಂಕ್ಷೆ ಕಮ್ಮಿಯಾಗುತ್ತಿಲ್ಲ. ದೆಹಲಿಯಲ್ಲಿ, ಸಂಪುಟ ವಿಸ್ತರಣೆ ಆದರೂ ಆಗಬಹುದು ಎನ್ನುವ ಪ್ರತಿಕ್ರಿಯೆ ಸಿಎಂ ಅವರಿಂದ ಬಂತು.
ಬಿವೈ ವಿಜಯೇಂದ್ರ ಸಂಪುಟಕ್ಕೆ?: ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗ್ತಾರಾ ಬಿಎಸ್ವೈ ಪುತ್ರ?
ಸಚಿವ ಸಂಪುಟ/ವಿಸ್ತರಣೆಯ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಸ್ಪಷ್ಟತೆಯಿಲ್ಲ
ಸಚಿವ ಸಂಪುಟ/ವಿಸ್ತರಣೆಯ ವಿಚಾರದಲ್ಲಿ ಖುದ್ದು ಮುಖ್ಯಮಂತ್ರಿಗಳಿಗೇ ಸ್ಪಷ್ಟತೆಯಿಲ್ಲ. ಯಡಿಯೂರಪ್ಪನವರೇನೋ, ಮೂರು ದಿನದೊಳಗೆ ವಿಸ್ತರಣೆಯಾಗುವುದು ಖಚಿತ ಎಂದು ಹೇಳಿದ್ದರು. ಆದರೆ, ಹೈಕಮಾಂಡ್ ನಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಗುತ್ತಿಲ್ಲ. ಇನ್ನು ಒಂದು ವರ್ಷದೊಳಗೆ ಚುನಾವಣೆ ನಡೆಯಲೇ ಬೇಕಿದೆ. ಅವಧಿಗೆ ಮುನ್ನ ಚುನಾವಣೆ ನಡೆದರೂ ನಡೆಯಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.
ನೂತನವಾಗಿ ಸೇರ್ಪಡೆಗೊಳ್ಳುವ ಸಚಿವರು ಏನು ಸಾಧಿಸಲು ಸಾಧ್ಯ
ಒಂದು ವೇಳೆ ಸಂಪುಟ ವಿಸ್ತರಣೆ ಈಗ ಮಾಡಿದರೂ, ಇದರಿಂದ ನೂತನವಾಗಿ ಸೇರ್ಪಡೆಗೊಳ್ಳುವ ಸಚಿವರು ಏನು ಸಾಧಿಸಲು ಸಾಧ್ಯ ಎನ್ನುವ ಮಾತು ಬಿಜೆಪಿ ಆಪ್ತ ವಲಯದಲ್ಲೇ ಕೇಳಿ ಬರುತ್ತಿದೆ. ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳು, ಮಾಡಬೇಕಾಗಿರುವ ಕೆಲಸಗಳನ್ನು ಅರ್ಥ ಮಾಡಿಕೊಳ್ಳಲೇ ನೂತನ ಸಚಿವರಿಗೆ ಕನಿಷ್ಠ ನಾಲ್ಕೈದು ತಿಂಗಳಾದರೂ ಬೇಕಾಗುತ್ತದೆ. ಇದಾದ ನಂತರ ಇಲಾಖೆಯ ಕೆಲಸಗಳಿಗೆ ಅನುಮೋದನೆಗೆ ಇನ್ನಷ್ಟು ಸುತ್ತಾಡಬೇಕಾಗುತ್ತದೆ. ಅಷ್ಟರಲ್ಲಿ ಚುನಾವಣೆ ದಿನಾಂಕ ಏನಾದರೂ ಘೋಷಣೆಯಾದರೆ, ನೀತಿ ಸಂಹಿತೆ ಜಾರಿಯಾಗುತ್ತದೆ.
ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ
ಸಚಿವ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳುವ ಪ್ರಕಾರ, "ಈಗ ಸಚಿವ ಸ್ಥಾನ ಸಿಕ್ಕರೆ ಏನು ಮಾಡೋದು. ಕುರ್ಚಿ ಬಿಸಿ ಮಾಡಬಹುದು ಅಷ್ಟೇ, ಕುರ್ಚಿಯೂ ಬಿಸಿ ಆಗಲ್ಲ. ಈಗ ಸಚಿವ ಸ್ಥಾನ ಸಿಕ್ಕರೂ ಸಿಗೋದು ಕೇವಲ ಎಂಟು ತಿಂಗಳು ಅಷ್ಟೇ. ಈ ಎಂಟು ತಿಂಗಳಲ್ಲಿ ಯಾವ ಕ್ರಾಂತಿಕಾರಿ ಅಭಿವೃದ್ಧಿಯನ್ನೂ ಮಾಡಲಾಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಸ್ಟ್. ಇದರಿಂದ ಆಸೆ ಇರುವವರಿಗಷ್ಟೇ ಅನುಕೂಲವಾಗುತ್ತೆ"ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣವಾಗಿರಬಹುದು
ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಸಚಿವ ಸ್ಥಾನ ಸಿಕ್ಕಿದರೂ ಕುರ್ಚಿ ಬಿಸಿ ಮಾಡಲೂ ಸಾಧ್ಯವಿಲ್ಲ. ಜೊತೆಗೆ, ಚುನಾವಣಾ ವರ್ಷವಾಗಿರುವುದರಿಂದ, ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಗೊಂದಲಗಳು ಎದುರಾಗುತ್ತವೆ. ಜೊತೆಗೆ, ಆಕಾಂಕ್ಷಿಗಳಿಗೆ ಸ್ಥಾನ ಸಿಗದೇ ಇದ್ದರೆ, ಪಕ್ಷ ವಿರೋಧಿ ಚಟುವಟಿಕೆ ನಡೆದರೂ ನಡೆಯಬಹುದು. ಈ ಒಂದು ಅಂಶವೂ, ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣವಾಗಿರಬಹುದು.
Recommended Video