10 ಸಾವಿರ ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ!
ಬೆಂಗಳೂರು, ಜ. 09: ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಮಹತ್ವದ ಸಭೆ ನಡೆಸಿದ್ದಾರೆ. ಕಳೆದ ವರ್ಷ ಬಜೆಟ್ ಅಧಿವೇಶನದ ಬಳಿಕ ಇಡೀ ಜಗತ್ತಿಗೆ ಕೊರೊನಾ ವೈರಸ್ ವಕ್ಕರಿಸಿದ್ದರಿಂದ ಮಕ್ಕಳ ಕಲಿಕೆ ಕುಂಠಿತಗೊಂಡಿದೆ. ಅದಕ್ಕೆ ದೇಶ ಹಾಗೂ ರಾಜ್ಯದ ಸ್ಥಿತಿಯೂ ಭಿನ್ನವಾಗಿಲ್ಲ. ಇದ್ದುದರಲ್ಲಿಯೇ ರಾಜ್ಯದ ವಿದ್ಯಾರ್ಥಿಗಳು ಕಲಿಕೆಯಿಂದ ಸಂಪೂರ್ಣವಾಗಿ ವಿಮುಖರಾಗಿಲ್ಲ. ಸಂದರ್ಭದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿರುವ ರಾಜ್ಯ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುವಂತೆ ನೋಡಿಕೊಂಡಿದೆ.
ಇದೀಗ ಎಸ್ಎಸ್ಎಲ್ಸಿ ಹಾಗೂ ದ್ವಿತಿಯ ಪಿಯು ರೆಗ್ಯುಲರ್ ತರಗತಿಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ ಮತ್ತೆ ರಾಜ್ಯ ಬಜೆಟ್ ಹತ್ತಿರ ಬರುತ್ತಿದೆ. ಹೀಗಾಗಿ ಶಿಕ್ಷಣ ಇಲಾಖೆಯ ಅಭಿವೃದ್ಧಿ ಕಾರ್ಯಗಳೂ ಸೇರಿದಂತೆ ಬೇಡಿಕೆಗಳ ಕುರಿತು ಸುರೇಶ್ ಕುಮಾರ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ 10 ಸಾವಿರ, ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಅದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಆತಂಕ ಬೇಡ
ಸಾಕಷ್ಟು ಒತ್ತಡ, ವಿರೋಧಗಳ ಮಧ್ಯೆ ರಾಜ್ಯ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಹಾಗೂ ದ್ವಿತಿಯ ಪಿಯು ತರಗತಿಗಳನ್ನು ಆರಂಭಿಸಿದೆ. ರಾಜ್ಯದ ಕೆಲವೆಡೆ ಶಿಕ್ಷಕರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಅವರೆಲ್ಲರೂ ತಗರತಿಗಳು ಆರಂಭಿಸುವ ಮೊದಲು ಮಾಡಿದ್ದ ಪರೀಕ್ಷೆ. ಹೀಗಾಗಿ ಮಕ್ಕಳ ಪಾಲಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂಬ ಭರವಸೆಯನ್ನು ಪಾಲಕರಿಗೆ ಕೊಡಿ ಎಂದು ಅಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಆಯುವ್ಯವ ಪೂರ್ವಭಾವಿ ಸಭೆ
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ 2021-22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಸಚಿವ ಸುರೇಶ್ ಕುಮಾರ್ ನಡೆಸಿದ್ದಾರೆ. ಕಳೆದ ವರ್ಷ ಕೊರೊನಾ ವೈರಸ್ನಿಂದಾಗಿ ರಾಜ್ಯದ ಆರ್ಥಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಹೀಗಾಗಿ ಕೋವಿಡ್ ನಂತರದ ಸಂದರ್ಭದಲ್ಲಿ ರಾಜ್ಯದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ವಿದ್ಯಾರ್ಥಿ ಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.
ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು
ಶಾಲಾ ಶಿಕ್ಷಕರ ನೇಮಕಾತಿ?
ಆ ಸಭೆಯಲ್ಲಿ 2000 ಪ್ರೌಢ ಶಾಲಾ ಶಿಕ್ಷಕರು, 8 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ ಎಂಬ ಮಾಹಿತಿ ಕೇಳಿ ಬಂದಿತ್ತು. ಹೀಗಾಗಿ ಬಿ.ಇಡಿ ಹಾಗು ಡಿ.ಇಡಿ ಮುಗಿಸಿರುವ ಅಭ್ಯರ್ಥಿಗಳು ಸಂತಸಗೊಂಡಿದ್ದರು. ಆದರೆ ಪ್ರಸಕ್ತ ಕೊರೊನಾ ವೈರಸ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಕುರಿತು ತೀರ್ಮಾನ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಎರಡು ವಾರಗಳಲ್ಲಿ ಪ್ರಸ್ತಾವನೆ
ಶಿಕ್ಷಣ ಇಲಾಖೆಯ 2021-22 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಇಲಾಖೆಯ ಆಯುಕ್ತ ಅನ್ಬುಕುಮಾರ್, ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕಿ ದೀಪಾ ಚೋಳನ್, ಪದವಿಪೂರ್ವ ಶಿಕ್ಷಣ ನಿರ್ದೇಶಕಿ ಸ್ನೇಹಲ್, ಲೋಕ ಶಿಕ್ಷಣ ನಿರ್ದೇಶಕಿ ಸುಷ್ಮಾ ಗೋಡಬೋಲೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಂದಿನ ಎರಡು ವಾರಗಳಲ್ಲಿ ಪ್ರಸ್ತಾವನೆ ಸಿದ್ಧಪಡಿಸುವುದಾಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.