ನಿಂತು ಹೋದ ಶಿಕ್ಷಕರ ವರ್ಗಾವಣೆ: ಈ ಬಾರಿ ಶಿಕ್ಷಣ ಸಚಿವರೇ ತಡೆದರು!
ಬೆಂಗಳೂರು, ಸೆ.27: ಈ ವರ್ಷವೂ ಕೂಡ ಶಿಕ್ಷಕರ ವರ್ಗಾವಣೆ ಕನಸಾಗಿಯೇ ಉಳಿಯಲಿದೆ, ಆದರೆ ಕಳೆದ ಒಂದು ತಿಂಗಳಿಂದ ಈ ವರ್ಷವಾದರೂ ವರ್ಗಾವಣೆ ಭಾಗ್ಯ ಸಿಗಬಹುದು ಎಂದು ಶಿಕ್ಷಕರು ಕಾಯುತ್ತಿದ್ದರು. ಆದರೆ ಅದಕ್ಕೂ ಈಗ ಎಳ್ಳು-ನೀರು ಬಿಡುವಂತೆ ಕಾಣುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಒಂದಲ್ಲಾ ಒಂದು ಕಾರಣದಿಂದ ರಾಜ್ಯ ಸರ್ಕಾರಿ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಸರ್ಕಾರ ಮುಂದೂಡುತ್ತಲೇ ಬಂದಿದೆ.
ಇದೀಗ ಪ್ರಸ್ತುತ ಚಾಲ್ತಿಯಲ್ಲಿರುವ ಹೆಚ್ಚುವರಿ ಹಾಗೂ ಕಡ್ಡಾಯ ವರ್ಗಾವಣೆಗಳ ಪ್ರಕ್ರಿಯೆಯನ್ನೂ ತಕ್ಷಣದಿಂದಲೇ ತಡೆ ಹಿಡಿಯುವಂತೆ ಶಿಕ್ಷಣ ಸಚಿವ ಎನ್. ಮಹೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಕೋರಿಕೆ ವರ್ಗಾವಣೆ ಪರಿಗಣಿಸುವುದರ ಕುರಿತು ಕಾನೂನು ಇಲಾಖೆ ಅಭಿಪ್ರಾಯ ಪಡೆಯಲು ನಿರ್ಧರಿಸಿರುವುದರಿಂದ ಕೋರಿಗೆ ವರ್ಗಾವಣೆಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ.
ಎರಡು ವರ್ಷಗಳ ನಂತರ ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ!
ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲು ಈ ಹಿಂದೆ ವಿಭಾಗ ಮಟ್ಟದಲ್ಲಿ 70:1 ಅನುಸರಿಸಲಾಗುತ್ತಿತ್ತು, ಬಳಿಕ ಶಿಕ್ಷಕರ ವಿರೋಧ ವ್ಯಕ್ತವಾದ ಹಿನ್ನೆಲೆ 50:1 ಗುರುತಿಸಲು ತೀರ್ಮಾನಿಸಲಾಗಿತ್ತು. ಖುದ್ದಾಗಿ ಶಿಕ್ಷಣ ಸಚಿವರೇ ಈಗ ವರ್ಗಾವಣೆಯನ್ನು ತಡೆಹಿಡಿದಿದ್ದಾರೆ ಎನ್ನುವುದು ವಿಪರ್ಯಾಸ.
ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲು ಪರಿಷ್ಕೃತ ವೇಳಾಪಟ್ಟಿ ಸಿದ್ಧ ವಾಗಿತ್ತು.. ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ, ಕಡ್ಡಾಯ ವರ್ಗಾವಣೆ ಹಾಗೂ ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳ ಕುರಿತು ಕೆಲವೊಂದು ಪರಿಷ್ಕರಣೆ ಮಾಡಲಾಗಿತ್ತು.