BREAKING: ಪಿಎ ಬಂಧನದ ಕುರಿತು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮೊದಲ ಪ್ರತಿಕ್ರಿಯೆ!
ಬೆಂಗಳೂರು, ಜು. 02: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಎನ್ನಲಾಗಿರುವ ರಾಜು ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಶ್ರೀರಾಮುಲು ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ದೂರಿಗೆ ಸಂಬಂಧಿಸಿದಂತೆ ರಾಜು ಎಂಬುವನನ್ನು ಬಂಧಿಸಲಾಗಿದೆ. ಇಡೀ ಪ್ರಕರಣದ ಕುರಿತು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ವಿಜಯೇಂದ್ರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾತನಾಡಿದ ಶ್ರೀರಾಮುಲು ಅವರು, "ನಾನು ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಾರೂ ಕೂಡಾ ಬೇರೆ ಯಾರದ್ದೇ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ತನಿಖೆ ನಡೆಯುವ ಸಮಯದಲ್ಲಿ ನಾನು ಮಾತಾಡುವುದು ಸರಿಯಲ್ಲ ಅಂತಾ ಸುಮ್ಮನಿದ್ದೇನೆ" ಎಂದಿದ್ದಾರೆ.
Recommended Video
"ವಿಜಯೇಂದ್ರ ಅವರ ಜೊತೆ ಕೂಡಾ ಮಾತನಾಡುತ್ತೇನೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಜೊತೆ ಕೂಡ ಮಾತಾಡುತ್ತೇನೆ. ತನಿಖೆಯ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಆದರೆ ಈ ವಿಚಾರವನ್ನು ವಿಜಯೇಂದ್ರ ನನ್ನ ಗಮನಕ್ಕೆ ತಂದಿಲ್ಲ. ಗಮನಕ್ಕೆ ತಂದಿದ್ದರೆ ನಾನು ವಿಜಯೇಂದ್ರ ಜೊತೆ ಕುಳಿತು ಮಾತಾಡುತ್ತಿದ್ದೆ. ನೋವಾಗಿದೆ ಎಂಬ ಮಾತು ಸಮಂಜಸ ಇದೆ. ಆದರೆ ಮಿಸ್ ಕಮ್ಯುನಿಕೇಶನ್ ಕೂಡ ಆಗಿದೆ. ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿ ನಾನಲ್ಲ. ರಾಜು ಅಧಿಕೃತವಾಗಿ ನನ್ನ ಬಳಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ, ನನಗೆ ಗೊತ್ತಿರುವ ಹುಡುಗ ಅಷ್ಟೇ. ನನಗೆ ತಿಳಿಸದೇ ಅರೆಸ್ಟ್ ಮಾಡಿದರು ಎಂಬ ವಿಚಾರಕ್ಕೆ ನನಗೆ ಅಸಮಾಧಾನ ಇಲ್ಲ. ಮೊದಲೇ ನನ್ನ ಗಮನಕ್ಕೆ ತಂದಿರುತ್ತಿದ್ದರೆ ಕೂರಿಸಿ ವಿಚಾರಿಸಿ ಮಾತಾಡುತ್ತಿದ್ದೆ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ" ಎಂದಿದ್ದಾರೆ. ಆ ಮೂಲಕ ಮಾಹಿತಿ ನೀಡದೇ ರಾಜು ಬಂಧನ ವಿಚಾರದಲ್ಲಿ ಬೇಸರವಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.