ಸ್ಟಿಂಗ್ ಆಪರೇಶನ್ ನಲ್ಲಿ ಹೊರಬಿದ್ದ ಸಚಿವೆ ಶಶಿಕಲಾ ಜೊಲ್ಲೆಯ 'ಒಂದು ಮೊಟ್ಟೆಯ ಕಥೆ'
ಇತ್ತೀಚೆಗೆ ಜಾಹೀರಾತು ಒಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಭಾವಚಿತ್ರ ಹಾಕದೇ ವಿವಾದಕ್ಕೀಡಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಖಾಸಗಿ ಸುದ್ದಿವಾಹಿನಿ ನ್ಯೂಸ್ ಫಸ್ಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸಚಿವೆ ಮಾತೃಪೂರ್ಣ ಯೋಜನೆಯಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಅಂಶ ಹೊರದಿದ್ದಿದೆ.
ರಾಜ್ಯದ ಮುಂದಿನ ಸಿಎಂ ಯಾರು? ನಂಬರ್ 1,2,3 ಮಾತ್ರ ಇದನ್ನು ಬಲ್ಲರು!
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಸರಕಾರ ನಿರ್ಧರಿಸಿತ್ತು. ಟೆಂಡರ್ ಮೂಲಕ ಮೊಟ್ಟೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿತ್ತು.
ಈ ಟೆಂಡರ್ ಪಡೆಯುವವರು ಪ್ರತಿ ತಿಂಗಳು ಸಚಿವೆ ಶಶಿಕಲಾ ಜೊಲ್ಲೆಗೆ ತಿಂಗಳಿಗೆ ಒಂದು ಕೋಟಿ ನೀಡಬೇಕು ಎನ್ನುವ ಸಂಭಾಷಣೆ ಸ್ಟಿಂಗ್ ಆಪರೇಶನ್ ನಲ್ಲಿ ರೆಕಾರ್ಡ್ ಆಗಿದೆ. ಟೆಂಡರ್ ಪಡೆಯುವ ವೇಷದಲ್ಲಿ ಖಾಸಗಿ ವಾಹಿನಿ ಈ ಕಾರ್ಯಾಚರಣೆ ನಡೆಸಿತ್ತು.
ಕಾರ್ಯಾಚರಣೆಯ ವೇಳೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಲಂಚಕ್ಕೆ ಆಮಿಷ
ಕಾರ್ಯಾಚರಣೆಯ ವೇಳೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಲಂಚಕ್ಕೆ ಆಮಿಷವೊಡ್ಡಿದ್ದರು. ತಮಗೆ ಪ್ರತೀ ತಿಂಗಳು ಐವತ್ತು ಲಕ್ಷ ಮತ್ತು ಸಚಿವರಿಗೆ ಒಂದು ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಟೆಂಡರ್ ನೀಡುವ ಸಂಪೂರ್ಣ ಜವಾಬ್ದಾರಿ ತಾವು ಹೊರುವುದಾಗಿ ಶಾಸಕರು ಹೇಳಿರುವ ಮಾತು ವಿಡಿಯೋದಲ್ಲಿದೆ.
|
ಮೊಟ್ಟೆತಿಂದಬಜೆಪಿಸರ್ಕಾರ ಎಂದು ಕೆಪಿಸಿಸಿ ಟ್ವೀಟ್
ಈ ಪ್ರಕರಣ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷ ಸಚಿವರ ಮತ್ತು ಬಿಜೆಪಿಯ ವಿರುದ್ದ ತಿರುಗಿಬಿದ್ದಿದೆ. "@BJP4Karnataka ಸರ್ಕಾರ 'ದಿನಕ್ಕೊಂದು ಭ್ರಷ್ಟಾಚಾರ' ಯೋಜನೆ ಹಾಕಿಕೊಂಡಿದ್ದರ ಭಾಗವಾಗಿ ಈಗ ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ಕಿಕ್ ಬ್ಯಾಕ್ ಬೇಡಿಕೆ ಇಡುವ ಹಗರಣ ಬಯಲಾಗಿದೆ. ಸರ್ಕಾರಕ್ಕೆ ಸ್ವಲ್ಪವಾದರೂ ಮರ್ಯಾದೆ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆದು, ಹಗರಣವನ್ನು ತನಿಖೆಗೆ ವಹಿಸಬೇಕು. #ಮೊಟ್ಟೆತಿಂದಬಜೆಪಿಸರ್ಕಾರ" ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ಮುಖ್ಯಮಂತ್ರಿಗಳು ಶೀಘ್ರ ಕ್ರಮವನ್ನು ತೆಗೆದುಕೊಳ್ಳಲಿ, ಕುಮಾರಸ್ವಾಮಿ
ಬಿಜೆಪಿಯಲ್ಲಿ ಎಲ್ಲೆಲ್ಲೂ ಕಮಿಷನ್ ದಂಧೆ, ಈಗ ಮೊಟ್ಟೆ ವಿತರಣೆಯಲ್ಲೂ ಭ್ರಷ್ಟಾಚಾರ ಬಯಲಾಗಿದೆ. ಅಬಕಾರಿ ಇಲಾಖೆಯಲ್ಲೂ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆಯಿಟ್ಟ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೂ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿಗಳು ಶೀಘ್ರ ಕ್ರಮವನ್ನು ತೆಗೆದುಕೊಳ್ಳಲಿ"ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ ಮತ್ತು ಬಿಜೆಪಿ ಶಾಸಕರ ವಿರುದ್ದ ಕಿಕ್ ಬ್ಯಾಕ್ ಆರೋಪ
ಸಚಿವೆ ಶಶಿಕಲಾ ಜೊಲ್ಲೆ ಮತ್ತು ಬಿಜೆಪಿ ಶಾಸಕರ ವಿರುದ್ದ ಕಿಕ್ ಬ್ಯಾಕ್ ಆರೋಪ ಕೇಳಿ ಬರುತ್ತಿದ್ದಂತೆಯೇ, ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಮೊಟ್ಟೆಯಲ್ಲೂ ಬಿಜೆಪಿಯ ಅಕ್ರಮ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಹಲವೆಡೆ, ಸಚಿವರ ಭಾವಚಿತ್ರ ಸುಟ್ಟುಹಾಕಿದ್ದಾರೆ.