ಸಿಎಂ ಯಡಿಯೂರಪ್ಪ ಆದೇಶ ತಡೆಹಿಡಿದ ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು. ಫೆ. 16: ಮಠಗಳಿಗೆ ಅನ್ನ ದಾಸೋಹ ಯೋಜನೆ ಸ್ಥಗಿತಗೊಳಿಸುವ ಮೂಲಕ ವಿವಾದಕ್ಕೆ ಕಾರಣವಾಗಿ ಆಹಾರ ಖಾತೆ ಕಳೆದುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಇದೀಗ ಅಂಥದ್ದೆ ಮತ್ತೊಂದು ವಿವಾದಾತ್ಮಕ ಆದೇಶ ಹೊರಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಅವರು ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಸಂಬಂಧಿಸಿದಂತೆ ಮಾಡಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ಹೊಂದಿದ್ದವರಿಗೆ ಸ್ಥಳ ನಿಯೋಜನೆಗೆ ಸೂಚನೆ ಕೊಟ್ಟಿದ್ದರು. ಆದರೆ ಅದನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ತಡೆ ಹಿಡಿದಿದ್ದಾರೆ. ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಬಡ್ತಿ ಹೊಂದಿ ಸ್ಥಳ ನಿಯೋಜನೆಗೊಂಡಿದ್ದ 274 ಹಿರಿಯ ಮೇಲ್ವಿಚಾರಕರು ಇದೀಗ ಅತಂತ್ರರಾಗಿದ್ದಾರೆ.
ಯಡಿಯೂರಪ್ಪ ಸಂಪುಟ ಸೇರಿದ ಶಶಿಕಲಾ ಜೊಲ್ಲೆ ಪರಿಚಯ
ಕರ್ನಾಟಕ ಲೋಕಸೇವಾ ಆಯೋಗದಿಂದ 519 ಮೇಲ್ವಿಚಾರಕೀಯ ನೇಮಕ ಮಾಡಲಾಗಿತ್ತು. ನಂತರ 274 ಮೇಲ್ವಿಚಾರಕೀಯರಿಗೆ ಪಾರದರ್ಶಕವಾಗಿ ಫೆಬ್ರವರಿ 12 ಹಾಗೂ 13 ರಂದು ಕೌನ್ಸೆಲಿಂಗ್ ಮಾಡಿ, ಫೆಬ್ರವರಿ 14 ರಂದು ಹಿರಿಯ ಮೇಲ್ವಿಚಾರಕೀಯರು ಎಂದು ಬಡ್ತಿ ಸಹಿತ ಸ್ಥಳ ನಿಯೋಜನೆ ಮಾಡಲಾಗಿತ್ತು. ಇದೀಗ ಸ್ಥಳ ನಿಯೋಜನೆ ಮಾಡಿದ್ದ ಆ ಆದೇಶವನ್ನು ತಡೆಹಿಡಿಯುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ವಿವಾದಕ್ಕೆ ಕಾರಣವಾಗಿದ್ದಾರೆ.
ಶಶಿಕಲಾ ಜೊಲ್ಲೆ ಹೊರಡಿಸಿರುವ ಆದೇಶದಲ್ಲೇನಿದೆ?
ಇದೇ 2020 ಫೆಬ್ರವರಿ 14 ರಂದು ಮೇಲ್ವಿಚಾರಕರ ಹುದ್ದೆಯಿಂದ ಹಿರಿಯ ಮೇಲ್ವಿಚಾರಕರ ಹುದ್ದೆಗೆ ಪದೋನ್ನತಿ ನೀಡಿ, ಸ್ಥಳ ನಿಯುಕ್ತಿಗೊಳಿಸಿ ಹೊರಡಿಸಿರುವ ಆದೇಶವನ್ನು ತತಕ್ಷಣವೇ ತಡೆಹಿಡಿದು, ಕಡತವನ್ನು ನನ್ನ ಅನುಮೋದನೆಗೆ ಕಳಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಆದೇಶ ಮಾಡಿದ್ದಾರೆ.
ಈ ಮೊದಲೇ 2020 ಜನವರಿ 7 ರಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಆದೇಶವೊಂದನ್ನು ಹೊರಡಿಸಿದ್ದು, ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗದ ವರ್ಗಾವಣೆ, ನಿಯೋಜನೆ ಅಥವಾ ಸ್ಥಳ ನಿಯುಕ್ತಿಗೆ ಮಾಡುವ ಮೊದಲು ಅನುಮತಿ ಪಡೆಯಲೇಬೇಕೆಂದು ಸೂಚಿಸಿದ್ದರು. ಹೀಗಾಗಿ ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಮಾಡಿದ್ದ ಸ್ಥಳ ನಿಯೋಜನೆ ತಡೆಹಿಡಿದಿದ್ದಾರೆ, ಆ ಮೂಲಕ ಸ್ಥಳ ನಿಯೋಜನೆಗೊಂಡಿದ್ದ ಎಲ್ಲ 274 ಹಿರಿಯ ಮೇಲ್ವಿಚಾರಕರು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ ಅನುಮತಿ ಪಡೆಯಬೇಕಾಗಿದೆ.
ಸಚಿವರ ಆದೇಶದಂತೆ ಸ್ಥಳ ನಿಯೋಜನೆ ರದ್ದು
ಸ್ಥಳ ನಿಯೋಜನೆಗೊಂಡು ಇನ್ನೇನು ವರದಿ ಮಾಡಿಕೊಳ್ಳಲು ತಯಾರಾಗಿದ್ದ 274 ಮೇಲ್ವಿಚಾರಕರು ಇದೀಗ ಸಚಿವರ ಆದೇಶದಿಂದ ಪೇಚಿಗೆ ಸಿಲುಕಿದ್ದಾರೆ. ಮೇಲ್ವಿಚಾರಕರ ಹುದ್ದೆಯಿಂದ ಬಡ್ತಿಹೊಂದಿ ಹಿರಿಯ ಮೇಲ್ವಿಚಾರಕರಾಗಿ ಸ್ಥಳನಿಯೋಜನೆಗೊಳಿಸಿ ಮಾಡಿದ್ದ ಆದೇಶವನ್ನು ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಆದೇಶದಂತೆ ರದ್ದು ಮಾಡಲಾಗಿದೆ. ಹೀಗಾಗಿ ಮುಂಬಡ್ತಿ ನೀಡಲಾಗಿರುವ ಮೇಲ್ವಿಚಾರಕಿಯರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಹಾಗೂ ವರದಿ ಮಾಡಿಕೊಳ್ಳಬಾರದು ಎಂದು ಇಲಾಖೆ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಆದೇಶ ಹೊರಡಿಸಿದ್ದಾರೆ.
ಸಿಎಂ ಬಿಎಸ್ವೈ ಆದೇಶ ತಡೆಹಿಡಿದ ಸಚಿವೆ ಜೊಲ್ಲೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವಾಗುವಂತೆ 274 ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಮೇಲ್ವಿಚಾರಕರಿಗೆ ಮುಂಬಡ್ತಿ ಕೊಟ್ಟು ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡುವಂತೆ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದರು. ಅದರಂತೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಿದ್ದ ಇಲಾಖೆ ನಿರ್ದೇಶಕರು ಎಲ್ಲ 274 ಮೇಲ್ವಿಚಾರಕೀಯರಿಗೆ ಹಿರಿಯ ಮೇಲ್ವಿಚಾರಕರು ಎಂದು ಮುಂಬಡ್ತಿ ಕೊಟ್ಟು ಹೊಸದಾಗಿ ಆಯ್ಕೆಯಾಗಿದ್ದ 274 ಮೇಲ್ವಿಚಾರಕೀಯರನ್ನು ನೇಮಕ ಮಾಡಿದ್ದರು. ಇದೀಗ ಆ ಆದೇಶವನ್ನು ತಡೆಹಿಡಿಯಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ಕೊಟ್ಟಿದ್ದರಿಂದ ಆ ಕಡೆ ಮುಂಬಡ್ತಿಯೂ ಇಲ್ಲದೆ, ಈ ಕಡೆ ಹಿಂದಿನ ಮೇಲ್ವಿಚಾರಕಿ ಹುದ್ದೆಯೂ ಇಲ್ಲದೆ ಅತಂತ್ರರಾಗಿದ್ದಾರೆ.
ಮಠಗಳ ವಿಚಾರದಲ್ಲಿ ಜೊಲ್ಲೆ ತರಾಟೆಗೆ ತೆಗೆದುಕೊಂಡಿದ್ದ ಸಿಎಂ
ಕೆಲ ದಿನಗಳ ಹಿಂದೆ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದರು. ಸಿದ್ದಗಂಗಾ ಸೇರಿದಂತೆ ಮಠಗಳಿಗೆ ಅನ್ನ ದಾಸೋಹ ಯೋಜನೆಯಡಿ ಸರಬರಾಜು ಆಗುತ್ತಿದ್ದ ಆಹಾರ ಧಾನ್ಯವನ್ನು ರದ್ದುಗೊಳಿಸುವ ಮೂಲಕ ಆಹಾರ ಇಲಾಖೆಯನ್ನು ಸಚಿವೆ ಶಶಿಕಲಾ ಜೊಲ್ಲೆ ಕಳೆದುಕೊಮಡಿದ್ದರು. ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸದೇ ಮಠಗಳಿಗೆ ಆಹರ ಧಾನ್ಯ ಕಟ್ ಮಾಡಿದ್ದರಿಂದ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಶಿಕಲಾ ಜೊಲ್ಲೆ ಅವರ ಮೇಲೆ ಗರಂ ಆಗಿದ್ದರು. ಆಹಾರ ಸಚಿವೆ ಜೊಲ್ಲೆ ಅವರ ನಿರ್ಧಾರದಿಂದ ಇಡೀ ಬಿಜೆಪಿ ಸರ್ಕಾರಕ್ಕೆ ಮುಜಗರವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೊಲ್ಲೆ ಅವರನ್ನು ಸಿಎಂ ತರಾಟೆಗೆ ತೆಗೆದು ಕೊಂಡಿದ್ದರು. ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯನ್ನು ಶಶಿಕಲಾ ಜೊಲ್ಲೆ ಅವರಿಂದ ಕಿತ್ತುಕೊಂಡು ಸಚಿವ ಗೋಪಾಲಯ್ಯ ಅವರಿಗೆ ಸಿಎಂ ಕೊಟ್ಟಿದ್ದರು. ಇದೀಗ ಮತ್ತೆ ಸಿಎಂ ಆದೇಶ ತಡೆಹಿಡುಯುವ ಮೂಲಕ ಶಶಿಕಲಾ ಜೊಲ್ಲೆ ಅವರು ಯಡಿಯೂರಪ್ಪ ಅವರ ಕಂಗೆಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.