ಸಂಚಲನ ಮೂಡಿಸಿದ ಸಚಿವ ರೋಷನ್ ಬೇಗ್ ಹೇಳಿಕೆ
ಬೆಂಗಳೂರು, ಡಿ 27: ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಗೆ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಇನ್ನಿಲ್ಲದಂತೆ ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನ ಇದುವರೆಗೆ ಕೈಗೂಡಲಿಲ್ಲ, ಕೈಗೂಡುವ ಲಕ್ಷಣವೂ ಕಾಣುತ್ತಿಲ್ಲ.
ಈ ಮಧ್ಯೆ ಡಿಸಿಎಂ ಹುದ್ದೆಯ ಆಕ್ಷಾಂಕ್ಷಿಗಳ ಪಟ್ಟಿಗೆ ಇನ್ನೊಬ್ಬರ ಹೆಸರು ಸೇರ್ಪಡೆಯಾಗಿದೆ. ಕಾಂಗ್ರೆಸ್ಸಿನ ಹಿರಿಯ ಸಚಿವ, ಸಿಎಂ ಸಿದ್ದರಾಮಯ್ಯ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ರೋಷನ್ ಬೇಗ್ ಡಿಸಿಎಂ ಹುದ್ದೆಗೆ ನಾನೂ ಒಬ್ಬ ಆಕಾಂಕ್ಷಿ ಎಂದು ಟವೆಲ್ ಹಾಕಿದ್ದಾರೆ. (ರಾಜ್ಯದಲ್ಲಿ ಸರ್ಕಾರಿ ಕೇಬಲ್)
ವಿಕಾಸ ಸೌಧದ ಬಳಿಯಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಶುಕ್ರವಾರ (ಡಿ 26) ಅಲ್ಪಸಂಖ್ಯಾತ ಆಯೋಗದವರ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಸಚಿವ ಬೇಗ್, ಸರಕಾರದಲ್ಲಿ ಇದುವರೆಗೆ ಹಲವಾರು ಮಹತ್ವದ ಖಾತೆಯನ್ನು ನಿರ್ವಹಿಸಿದ್ದೇನೆ. ನಾನೂ ಡಿಸಿಎಂ ಸ್ಥಾನಕ್ಕೆ ಯಾಕೆ ಆಕಾಂಕ್ಷಿಯಾಗಬಾರದೆಂದು ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ದಶಕದಿಂದ ನಾನು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ, ಹಲವು ಖಾತೆಗಳನ್ನುನ್ನು ನಿಭಾಯಿಸಿದ್ದೇನೆ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ, ನನಗೂ ಆ ಸ್ಥಾನಕ್ಕೆ ಬರಬೇಕೆನ್ನುವ ಆಸೆಯಿದೆ ಎಂದು ಮನದಾಸೆಯನ್ನು ಹೊರಗೆಡವಿದ್ದಾರೆ.
ಆದರೆ ನಾನು ಆ ಸ್ಥಾನವನ್ನು ಬಯಸಿದ್ದೇನೆಯೇ ಹೊರತು ಅದಕ್ಕಾಗಿ ಹೋರಾಟ ಮಾಡುವುದಿಲ್ಲ, ರಾಜಕೀಯ ಮಾಡುವುದಿಲ್ಲ. ಅವಕಾಶ ಸಿಕ್ಕರೆ ನಿಭಾಯಿಸಲು ಹಿಂಜರಿಯುವುದಿಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಟಾಂಗ್ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ವಿತರಿಸುವ ಯೋಜನೆ ಪೈಪ್ ಲೈನ್ ನಲ್ಲಿದೆ. ಇಸ್ಕಾನ್ ಸಂಸ್ಥೆ 13.50 ರೂಪಾಯಿಗೆ ಊಟ ನೀಡಲು ಮುಂದೆ ಬಂದಿದೆ.
ಸರಕಾರೀ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಮಧ್ಯಮ ವರ್ಗದವರು ಅಥವಾ ಬಡವರು. ಹೀಗಾಗಿ, ಈ ಕಡಿಮೆ ದರದಲ್ಲಿ ಊಟ ನೀಡುವ ಸ್ಕೀಂ ಸದ್ಯದಲ್ಲೇ ಜಾರಿಗೆ ತರುತ್ತೇವೆಂದು ಸಚಿವ ರೋಷನ್ ಬೇಗ್ ಸನ್ಮಾನ ಸ್ವೀಕರಿಸುತ್ತಾ ಹೇಳಿದ್ದಾರೆ.