ಸಿಎಂ ಭೇಟಿಯಾದ ರಮೇಶ ಜಾರಕಿಹೊಳಿ, ಆರ್ ಅಶೋಕ್: ಕುತೂಹಲಕ್ಕೆ ಎಡೆ
ಬೆಂಗಳೂರು, ಮೇ 30: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡು ಕೆಲ ಶಾಸಕರು ಬಿನ್ನಮತೀಯ ಚಟುವಟಿಕೆ ನಡೆಸಿದ್ದಾರೆ ಎಂಬ ವದಂತಿ ಎದ್ದಿದೆ.
ಇದರ ಬೆನ್ನಲ್ಲೇ ಶನಿವಾರ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ರಮೇಶ ಜಾರಕಿಹೊಳಿ ಅವರು, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!
ಸದ್ಯ ಬೆಳಗಾವಿ ಜಿಲ್ಲೆಯಿಂದಲೇ ಕಿಡಿ ಹೊತ್ತಿಕೊಂಡಿರುವುದರಿಂದ ರಮೇಶ ಜಾರಕಿಹೊಳಿ ಅವರ ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಮುಖಂಡ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಕೆಲ ಶಾಸಕರು ಬಿನ್ನಮತೀಯ ಚಟುವಟಿಕೆ ನಡೆಸಿದ್ದಾರೆ ಎಂಬುದರ ಬಗ್ಗೆ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಅಲ್ಲದೇ ಕಂದಾಯ ಸಚಿವ ಆರ್ ಅಶೋಕ್ ಅವರೂ ಕೂಡ ಯಡಿಯೂರಪ್ಪ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ಜನ ಒಟ್ಟಿಗೆ ಸೇರಿ ಊಟ ಮಾಡಿದರೆ ಅದು ಬಂಡಾಯ ಅಲ್ಲ. ಯಡಿಯೂರಪ್ಪನವರು ಈ ವಯಸ್ಸಿನಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಕ್ಕೆ ಒಂದು ದಿನವೂ ಕಡಿಮೆ ಇಲ್ಲದಂತೆ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.