ಹಿಡಿದ ಪಟ್ಟು ಬಿಡದ ಸಾಹುಕಾರ: ರಮೇಶ್ ಜಾರಕಿಹೊಳಿಗೆ ಮತ್ತೊಂದು ಮೇಲುಗೈ
ಎಚ್.ಡಿ,ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೆಬೆಲ್ ಆಗಿಯೇ ತಮ್ಮನ್ನು ಗುರುತಿಸಿಕೊಂಡಿದ್ದ ಹಾಲೀ ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ, ಮತ್ತೊಂದು ಸುತ್ತಿನ ರಾಜಕೀಯ ಮೇಲಾಟದಲ್ಲೂ ಮೇಲುಗೈ ಸಾಧಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದುಬಂದಿದ್ದ ಸಾಹುಕಾರ, ಯಡಿಯೂರಪ್ಪನವರು ಸಂಪುಟ ವಿಸ್ತರಣೆ ಮಾಡುವಲ್ಲಿ ತಡಮಾಡುತ್ತಿದ್ದಾರೆಂದು ಆಕ್ರೋಶವನ್ನು ಹೊರಹಾಕಿದ್ದರು. "ನಾವು ಹದಿಮೂರ ಜನ ಶಾಸಕರಲ್ಲ, ಐವತ್ತು ಜನರಿದ್ದೇವೆ" ಎಂದು ಮತ್ತೊಂದು ಸುತ್ತಿನ ರೆಬೆಲ್ ಆಟಕ್ಕೆ ಸಜ್ಜಾಗಿದ್ದರು.
ಆದರೆ, ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡಿದ ನಂತರ ಸದ್ಯಕ್ಕೆ ಸುಮ್ಮನಾಗಿದ್ದಾರೆ. ಇಂಧನ ಅಥವಾ ಜಲಸಂಪನ್ಮೂಲ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದ ಜಾರಕಿಹೊಳಿಗೆ, ಮುಖ್ಯಮಂತ್ರಿಗಳು ಕೇಳಿದ್ದನ್ನು ದಯಪಾಲಿಸಿದ್ದಾಗಿದೆ.
ನೂತನ ಸಚಿವರ ಖಾತೆ ಮತ್ತೆ ಬದಲಾವಣೆ ಮಾಡಿದ ಯಡಿಯೂರಪ್ಪ!
ಇಷ್ಟಕ್ಕೇ ಮುಗಿದಿಲ್ಲ ರಮೇಶ್ ಜಾರಕಿಹೊಳಿ ಡಿಮಾಂಡ್. ಈಗ, ಬೆಳಗಾವಿ ಉಸ್ತುವಾರಿಯೂ ನನಗೇ ಬೇಕೆಂದು ಪಟ್ಟು ಹಿಡಿದಿರುವ ರಮೇಶ್ ಗೆ ಅಲ್ಲೂ ಮೇಲುಗೈ ಸಿಗುವ ಸಾಧ್ಯತೆಯಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದಾರೆ. ಅವರೂ ಬೆಳಗಾವಿ ಜಿಲ್ಲಾ ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಮಾಹಿತಿಯಿದೆ. ಯಾಕೆಂದರೆ, ಅವರ ಸ್ವಕ್ಷೇತ್ರ ಜಿಲ್ಲೆಯ ಅಥಣಿ.
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸುವವರು ನಾಲ್ವರು ಸಂಪುಟದಲ್ಲಿದ್ದಾರೆ
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸುವವರು ನಾಲ್ವರು ಸಂಪುಟದಲ್ಲಿದ್ದಾರೆ. ಅವರೆಂದರೆ, ಶಶಿಕಲಾ ಜೊಲ್ಲೆ, ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ್ ಮತ್ತು ರಮೇಶ್ ಜಾರಕಿಹೊಳಿ. ಇದರ ಜೊತೆಗೆ, ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿರುವ ಹುಕ್ಕೇರಿ ಶಾಸಕ ಉಮೇಶ್ ಕತ್ತಿ. ಸದ್ಯ, ಬೆಳಗಾವಿ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ನೋಡಿಕೊಳ್ಳುತ್ತಿದ್ದಾರೆ.
ಹೊಸದಾಗಿ ಸಚಿವ ಸಂಪುಟಕ್ಕೆ ಸೇರಿಕೊಂಡಿರುವ ಹತ್ತು ಸಚಿವರು
ಹೊಸದಾಗಿ ಸಚಿವ ಸಂಪುಟಕ್ಕೆ ಸೇರಿಕೊಂಡಿರುವ ಹತ್ತು ಸಚಿವರಿಗೆ ಜಿಲ್ಲಾ ಉಸ್ತುವಾರಿಯನ್ನೂ ನೀಡಬೇಕಿದೆ. ಅದರಲ್ಲಿ ಜಗದೀಶ ಶೆಟ್ಟರ್ ಅವರಿಗೆ ಧಾರವಾಡ ಹೊರತಾಗಿ, ಬೆಳಗಾವಿಯ ಉಸ್ತುವಾರಿಯನ್ನೂ ನೀಡಲಾಗಿತ್ತು. ಇನ್ನು ಬೆಳಗಾವಿ ಮೂಲದ ಶಶಿಕಲಾ ಜೊಲ್ಲೆ ಉತ್ತರ ಕನ್ನಡದ ಉಸ್ತುವಾರಿಯಾಗಿದ್ದಾರೆ.
'ಇದು ಸಿಎಂ ಯಡಿಯೂರಪ್ಪ ಸರ್ಕಾರವೊ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಂಪುಟವೊ?'
ಮಹೇಶ್ ಕುಮಠಳ್ಳಿ ಜೊತೆಗೆ ರಮೇಶ್ ಸಿಎಂ ಭೇಟಿಯಾಗಿದ್ದರು
ಎರಡು ದಿನಗಳ ಕೆಳಗೆ ಮಹೇಶ್ ಕುಮಠಳ್ಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜೊತೆಗೆ ರಮೇಶ್, ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಅ ವೇಳೆ, ತನ್ನ ಸ್ವಂತ ಜಿಲ್ಲೆಯಾದ ಬೆಳಗಾವಿಯ ಜಿಲ್ಲಾ ಉಸ್ತುವಾರಿಯನ್ನು ನನಗೇ ನೀಡಬೇಕೆಂದು ರಮೇಶ್ ಜಾರಕಿಹೊಳಿ ಡಿಮಾಂಡ್ ಮಾಡಿದ್ದರು ಎನ್ನುವ ಮಾಹಿತಿಯಿದೆ.
ಹಿಡಿದ ಪಟ್ಟು ಬಿಡದ ಸಾಹುಕಾರ ರಮೇಶ್ ಜಾರಕಿಹೊಳಿಗೆ ಮತ್ತೊಂದು ಮೇಲುಗೈ
ಸಚಿವ ಜಾರಕಿಹೊಳಿ ಡಿಮಾಂಡ್ ಗೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿಯಿದೆ. ಹಾಗಾಗಿ, ಬಯಸಿದ ಖಾತೆಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿಗೆ ಜಿಲ್ಲಾ ಉಸ್ತುವಾರಿಯೂ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿಗೆ, ರಮೇಶ್ ಜಾರಕಿಹೊಳಿ, ತಾನು ಬಯಸಿದ್ದ ಸಚಿವ ಸ್ಥಾನ ಮತ್ತು ಜಿಲ್ಲಾ ಉಸ್ತುವಾರಿಯ ಎರಡನ್ನೂ ಪಡೆಯುವಲ್ಲಿ ಯಶಸ್ವಿಯಾದಂತಾಗಿದೆ.