ಅಲ್ಲಿ ಗಂಗೆಯಲ್ಲಿ ತೇಲಿ ಬರುವ ಅನಾಥ ಶವ, ಇಲ್ಲಿ ಸರಕಾರದಿಂದಲೇ ಗೌರವದ ವಿದಾಯ
ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲಾ ಪರಿಹಾರವಾಗುತ್ತದೆ ಎನ್ನುವುದು ಅಸಂಖ್ಯಾತ ಹಿಂದೂಗಳ ನಂಬಿಕೆ. ದೇವನದಿ ಎಂದು ಕರೆಯಲ್ಪಡುವ ಗಂಗೆಯಲ್ಲಿ ಕಳೆದ ಕೆಲವು ವಾರಗಳ ಹಿಂದೆ, ಸಾಲುಸಾಲು ಅನಾಥ ಶವಗಳು ತೇಲಿಬಂದು ದಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಈ ಆಘಾತಕಾರಿ ದೃಶ್ಯಗಳು ಕೊರೊನಾದ ತೀವ್ರತೆಯ ಸಾಕ್ಷಿಯಾಗಿತ್ತು. ಈ ಶವಗಳು ನಮ್ಮ ರಾಜ್ಯದ್ದು ಅಲ್ಲ ಎಂದು ಉತ್ತರ ಪ್ರದೇಶ ಮತ್ತು ಬಿಹಾರ ಸರಕಾರ ಒಬ್ಬರೊನ್ಜೊಬ್ಬರನ್ನು ದೂಷಿಸುತ್ತಿದ್ದವು. ಈ ವಿದ್ಯಮಾನ ಒಂದು ಕಡೆ..
ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ: ಸಾಮೂಹಿಕ ಅಸ್ಥಿ ವಿಸರ್ಜನೆ ನಂತರ ಆರ್ ಅಶೋಕ್ ಮಾತು
ಇನ್ನೊಂದು ಕಡೆ ನಮ್ಮ ರಾಜ್ಯಕ್ಕೆ ಬರೋಣ. ಕೊರೊನಾ ನಿರ್ವಹಣೆಯನ್ನು ಸರಕಾರ ಸರಿಯಾಗಿ ನಿರ್ವಹಿಸಿತೋ ಇಲ್ಲವೋ ಅದು ಆಮೇಲಿನ ಮಾತು. ಆದರೆ, ಒಂದು ವಿಚಾರಕ್ಕಂತೂ ಯಡಿಯೂರಪ್ಪ ಸರಕಾರ ಮತ್ತು ಕಂದಾಯ ಸಚಿವ ಆರ್.ಅಶೋಕ್ ಗೆ ಶಹಬ್ಬಾಸ್ ಹೇಳಲೇ ಬೇಕು.
ಸರ್ಕಾರದ ವತಿಯಿಂದ ಕಾವೇರಿ ನದಿಯಲ್ಲಿ 1,000 ಕೊವಿಡ್-19 ಮೃತ ಅಸ್ಥಿ ವಿಸರ್ಜನೆ
ಕೆಲವು ದಿನಗಳ ಹಿಂದೆನೇ ಆರ್.ಅಶೋಕ್ ಸರಕಾರವೇ ಮುಂದೆ ನಿಂತು, ವಾರಸುದಾರರು ಇಲ್ಲದ, ಅನಾಥವಾಗಿ ದಹಿಸಿಹೋದವರ ಚಿತಾಭಸ್ಮವನ್ನು ವಿಸರ್ಜಿಸುವ ಕೆಲಸವನ್ನು ಮಾಡಲಿದೆ ಎಂದು ಹೇಳಿದ್ದರು. ಅದರಂತೇ ನಡೆದುಕೊಂಡರು.
ಗಂಗಾ ನದಿಯಲ್ಲಿ ನೂರಕ್ಕೂ ಹೆಚ್ಚು ಶವಗಳು ಅನಾಥವಾಗಿ ನಡಿ ದಂಡೆಯಲ್ಲಿ
ಉತ್ತರ ಪ್ರದೇಶದ ಭಲಿಯಾ, ಘಾಜೀಪುರ, ಬಕ್ಸರ್ ಮುಂತಾದ ಕಡೆ ಗಂಗಾ ನದಿಯಲ್ಲಿ ನೂರಕ್ಕೂ ಹೆಚ್ಚು ಶವಗಳು ಅನಾಥವಾಗಿ ನಡಿ ದಂಡೆಯಲ್ಲಿ ಬಿದ್ದಿದ್ದವು. ಅಂತಿಮ ಸಂಸ್ಕಾರ ನಡೆಸಲು ಆರ್ಥಿಕವಾಗಿ ಸಬಲರಿಲ್ಲದ ಜನರು ಈ ರೀತಿ ಶವವನ್ನು ಗಂಗೆಗೆ ಬಿಸಾಕುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡ ಉತ್ತರ ಪ್ರದೇಶ ಸರಕಾರ ಅಂತಿಮ ಸಂಸ್ಕಾರಕ್ಕೆ ಐದು ಸಾವಿರ ನೀಡುವುದಾಗಿ ಪ್ರಕಟಿಸಿತು.
ಚಿತಾಭಸ್ಮ ವಿಸರ್ಜನೆ ಮತ್ತು ಅಪರ ಕ್ರಿಯೆಯನ್ನು ಸರಕಾರವೇ ಮಾಡಿತು
ಇದೇ ರೀತಿ ಬೆಂಗಳೂರಿನ ವಿವಿಧ ಚಿತಾಗಾರಗಳಲ್ಲಿ ಅನಾಥವಾಗಿ ದಹಿಸಿ ಹೋದವವರ ಚಿತಾಭಸ್ಮವನ್ನು ಕೊಂಡೊಯ್ಯಲು ಸರಕಾರ ಮತ್ತು ಬಿಬಿಎಂಪಿ ಮನವಿ ಮಾಡಿದ್ದರೂ, ಯಾರೂ ವಾರಸುದಾರರು ಇರಲಿಲ್ಲ. ಕೊನೆಗೆ, ಚಿತಾಭಸ್ಮ ವಿಸರ್ಜನೆ ಮತ್ತು ಅಪರ ಕ್ರಿಯೆಯನ್ನು ಸರಕಾರವೇ ಮಾಡಲು ನಿರ್ಧರಿಸಿತು. ಅದರಂತೇ, ಆರ್.ಅಶೋಕ್ ನೇತೃತ್ವದಲ್ಲಿ ಕಾವೇರಿ ನದಿ ತೀರದಲ್ಲಿ ಸರಕಾರ ಈ ಕೆಲಸವನ್ನು ಮಾಡಿ, ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
566 ಜನರ ಅಸ್ಥಿಯನ್ನು ಆರ್.ಅಶೋಕ್ ವಿಸರ್ಜಿಸಿದರು
ಅಪರ ಕ್ರಿಯೆಗೂ ಘನತೆ ಇದೆ ಎಂದು 566 ಜನರ ಅಸ್ಥಿಯನ್ನು ಆರ್.ಅಶೋಕ್ ವಿಸರ್ಜಿಸಿದರು. ಕಂದಾಯ ಸಚಿವರು ಮೃತರ ಸಹೋದರನಾಗಿ, ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಸಚಿವ ನಾರಾಯಣ ಗೌಡ್ರು ಮೃತರ ತಂದೆಯ ಸ್ಥಾನದಲ್ಲಿ ನಿಂತು ಅಸ್ಥಿ ವಿಸರ್ಜನಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಆ ಮೂಲಕ, ಅನಾಥ ಶವಗಳಿಗೆ ಗೌರವಪೂರ್ಣ ವಿದಾಯವನ್ನು ಹೇಳಿದರು.
ಮೃತರು ಸಮಾಜಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ಸೇವೆಯನ್ನು ಮಾಡಿರುತ್ತಾರೆ
"ಹಿಂದೂ ಸಂಪ್ರದಾಯದ ಪ್ರಕಾರ ಮೃತರಿಗೆ ಸದ್ಗತಿ ಸಿಗಬೇಕು. ಈ ಅಸ್ಥಿಗಳನ್ನು ವಿಸರ್ಜನೆ ಮಾಡುವುದು ನನ್ನ ಕರ್ತವ್ಯ ಎಂದು ಮಾಡಿದ್ದೇನೆ. ಮೃತರು ಸಮಾಜಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ಸೇವೆಯನ್ನು ಮಾಡಿರುತ್ತಾರೆ. ಗಂಗಾ ನದಿಯಲ್ಲಿ ನೂರಾರು ಶವಗಳು ಅನಾಥವಾಗಿ ಬಿದ್ದಿರುವುದನ್ನು ನಾವೆಲ್ಲಾ ನೋಡಿದ್ದೇವೆ. ಆ ರೀತಿ ಇಲ್ಲಿ ಆಗ ಬಾರದು ಎನ್ನುವ ದೃಷ್ಟಿಯಿಂದ ಈ ಕೆಲಸವನ್ನು ಮಾಡಿದ್ದೇನೆ"ಎಂದು ಆರ್.ಅಶೋಕ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
Recommended Video