ನೆರೆ ಪರಿಹಾರ: ಮನೆ ಕಳೆದುಕೊಂಡವರಿಗೆ 50,000 ದಿಂದ 5 ಲಕ್ಷ ಪರಿಹಾರ
ಬೆಂಗಳೂರು, ಆಗಸ್ಟ್.10: ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕೆ ಅಗತ್ಯ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಮನವಿ ಸಲ್ಲಿಸಿದರು.
Recommended Video
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಉಭಯ ಸಚಿವರು ವಿಡಿಯೋ ಸಂವಾದ ನಡೆಸಿದರು. ತದನಂತರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನಿ ಮೋದಿ ಅವರು ರಾಜ್ಯದ ಪ್ರವಾಹ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಮಳೆ ಹಾನಿ: ಮೋದಿ ಮುಂದೆ 5 ಬೇಡಿಕೆಗಳನ್ನು ಮುಂದಿಟ್ಟ ಕರ್ನಾಟಕ
ಜಿಲ್ಲಾಧಿಕಾರಿಗಳ ಬೇಡಿಕೆ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಕಳೆದ ವರ್ಷದ ಬಾಕಿ ಉಳಿದಿರುವ ಪರಿಹಾರ ಹಣವನ್ನು ಕೇಳಿದ್ದೇವೆ. ಕೇಂದ್ರ ಸರ್ಕಾರ ಇಲ್ಲ ಎನ್ನುತ್ತಿದ್ದು, ಎನ್ ಡಿಆರ್ ಎಫ್ ನಿಯಮಗಳಡಿ ಪರಿಹಾರ ಸಿಕ್ಕಿದೆ.
ರಾಜ್ಯದಿಂದ 4 ಸಾವಿರ ಕೋಟಿ ರೂಪಾಯಿಗೆ ಮನವಿ
ರಾಜ್ಯದಿಂದ ಕೇಂದ್ರಕ್ಕೆ ಕೇಳಿದ 4 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 395 ಕೋಟಿ ರೂ ಮುಂಗಡವಾಗಿ ಕೊಡಿ ಎಂದು ಮನವಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನೆರೆ ಪರಿಹಾರ ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನದ ಊಟ
ರಾಜ್ಯದಲ್ಲಿ ಸೃಷ್ಟಿಯಾಗಿರುವ ನೆರೆ ಪರಿಸ್ಥಿತಿ ನಿಭಾಯಿಸಲು ತೆರೆದಿರುವ ಕಾಳಜಿ ಕೇಂದ್ರದಲ್ಲಿ ಇರುವ ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಡಿಸಲಿದ್ದು, ಮೊಟ್ಟೆ, ಹಪ್ಪಳ, ಉಪ್ಪಿನಕಾಯಿ, ಊಟದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕಾಳಜಿ ಕೇಂದ್ರಗಳಲ್ಲಿ ರಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲಾಗುತ್ತಿದ್ದು, ಅಧಿಕಾರಿಗಳಿಗೆ ಇಂದೇ ನಿರ್ದೇಶನ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
"ಕಳೆದ ವರ್ಷ ಲಕ್ಷ ಕೊಟ್ಟರೂ ಮನೆ ಕಟ್ಟಿಕೊಂಡಿಲ್ಲ"
2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರ ನೆರವಿಗಾಗಿ 334 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿತ್ತು. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು, ಮೂರನೇ ಕಂತು, ನಾಲ್ಕನೇ ಕಂತು ಬಾಕಿ ಪರಿಹಾರ ಇರೋರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. 21 ಜಿಲ್ಲೆಗಳಲ್ಲಿ ಕಳೆದ ವರ್ಷದ ಶೇ.80% ಸಂತ್ರಸ್ತರು 1 ಲಕ್ಷ ಪರಿಹಾರ ಪಡೆದು ಕೆಲಸವನ್ನೇ ಆರಂಭಿಸಿಲ್ಲ. ಅವರೆಲ್ಲ ಮನೆ ನಿರ್ಮಾಣ ಆರಂಭಿಸಲು ಸಚಿವ ಆರ್.ಅಶೋಕ್ ಮನವಿ ಮಾಡಿಕೊಂಡಿದ್ದಾರೆ.
ಮನೆ ಹಾನಿಯಾದಲ್ಲಿ ನಾಲ್ಕು ವಿಭಾಗದಲ್ಲಿ ಪರಿಹಾರ ಬಿಡುಗಡೆ
ಪ್ರವಾಹ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೂ ಪರಿಹಾರವನ್ನು ಒದಗಿಸಲಾಗಿತ್ತು. ಎ, ಬಿ, ಸಿ, ಡಿ ಕೆಟಗರಿಗಳಲ್ಲಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ 10 ಸಾವಿರ ಪರಿಹಾರ ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರದಿಂದಲೇ ಪರಿಹಾರ ಬರಲಿ ಎಂದು ಕಾಯ್ದುಕೊಂಡು ಕೂರುವುದಿಲ್ಲ. ರಾಜ್ಯ ಸರ್ಕಾರದ ಬಳಿಯೂ ಹಣವಿದ್ದು, ಜಿಲ್ಲಾಡಳಿತದ ಖಾತೆಯಲ್ಲಿ 1,120 ಕೋಟಿ ರೂಪಾಯಿ ಹಣವಿದೆ ಎಂದು ತಿಳಿಸಿದ್ದಾರೆ.