ಪ್ರಧಾನಿ ನರೇಂದ್ರ ಮೋದಿ ಅವರಿಂದ ಕ್ರಾಂತಿಕಾರಿ ಹೆಜ್ಜೆ
ಬೆಂಗಳೂರು, ಜು. 29: ಐದನೇ ತರಗತಿಯ ವರೆಗೆ ಮಾತೃಭಾಷೆಯಲ್ಲಿಯೆ ಶಿಕ್ಷಣ ಕೊಡುವುದು ಸೇರಿದಂತೆ ಹಲವು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಸ್ವಾಗತಿಸಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನವ ಭಾರತವನ್ನು ನಿರ್ಮಾಣ ಮಾಡುವ ಪ್ರಬಲ ಶಕ್ತಿ ಹೊಂದಿದ್ದು, ಆಧುನಿಕ ದೃಷ್ಟಿಕೋನ, ದೇಶದ ಅಗತ್ಯಗಳು, ಜಾಗತಿಕ ಸವಾಲು, ಹೀಗೆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರೂಪಿಸಲಾಗಿರುವ ಪರಿಪೂರ್ಣ ಶಿಕ್ಷಣ ನೀತಿ ಇದಾಗಿದೆ ಎಂದು ಡಾ. ಅಶ್ವಥ್ ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ-2020: ಉನ್ನತ ಶಿಕ್ಷಣ ಅಭಿವೃದ್ಧಿಗೆ ಆನೆಬಲ
ಹಲವು ವರ್ಷಗಳಿಂದ ನಮ್ಮ ಶಿಕ್ಷಣ ನೀತಿಯೇ ಬದಲಾಗಿಲ್ಲ ಅಂದರೆ ಅಚ್ಚರಿ ಆಗುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಶಿಕ್ಷಣ ಎನ್ನವುದು ಮನುಕುಲವನ್ನು ಮುನ್ನಡೆಸುವ ಚಾಲಕ ಶಕ್ತಿ. ಸಶಕ್ತ ಸಮಾಜದ ಆತ್ಮ. ಯಾವುದೇ ದೇಶವನ್ನು ಬಲಿಷ್ಠವಾಗಿ, ಭವ್ಯವಾಗಿ ನಿರ್ಮಾಣ ಮಾಡಬಲ್ಲ ಶಕ್ತಿ ಅದಕ್ಕೆ ಮಾತ್ರ ಇದೆ. ನರೇಂದ್ರ ಮೋದಿ ಅವರು ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲೂ ಜಾರಿ
ಈಗಾಗಲೇ ರಾಜ್ಯ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು, ಆ ಬಗ್ಗೆ ಸೂಕ್ತ ಸಲಹೆ-ಸಹಕಾರ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ. ಕೇಂದ್ರ ಸರಕಾರವು ಜಾರಿ ಮಾಡಿದ ಕೂಡಲೇ ರಾಜ್ಯದಲ್ಲಿಯೂ ನೀತಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.
ಕಾಲಕ್ಕೆ ತಕ್ಕಂತೆ
ಋಷಿ-ಮುನಿಗಳ ಪಾಠ, ಗುರುಕುಲಗಳು, ಆ ನಂತರ ನಿರಂತರವಾಗಿ ನಮ್ಮ ಶಿಕ್ಷಣ ಪದ್ಧತಿ ಬದಲಾಗುತ್ತಾ ಬಂದಿದೆ. ಕಾಲಕ್ಕೆ ತಕ್ಕಂತೆ ಅದು ರೂಪಾಂತರಾಗುತ್ತಿದೆ. ಈಗಲೂ ಅಂಥದ್ದೇ ಪ್ರಕ್ರಿಯೆ ನಡೆದಿದ್ದು, ಅದಕ್ಕೊಂದು ಸಮಗ್ರತೆಯ ಸ್ವರೂಪ ಬಂದಿದೆ ಎಂದಿದ್ದಾರೆ.
1986ರಲ್ಲಿ ಮೊದಲಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಬಳಿಕ 1992ರಲ್ಲಿ ಆ ನೀತಿಯನ್ನು ಪರಿಷ್ಕರಿಸಲಾಯಿತು. ಭಾರತವು ಎಲ್ಲ ರಂಗಗಳಲ್ಲೂ ಶರವೇಗದಲ್ಲಿ ಮುನ್ನಡೆಯುತ್ತಿದೆ. ತಾಂತ್ರಿಕವಾಗಿ, ವೈಜ್ಞಾನಿಕವಾಗಿ ನಾಗಾಲೋಟದಲ್ಲಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಹೊಸ ನೀತಿ ಅಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಾಂತಿಕಾರಕ ಹೆಜ್ಜೆ
ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ಪದ್ಧತಿ ಇರಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಅದರ ಅಗತ್ಯವನ್ನು ಅರ್ಥ ಮಾಡಿಕೊಂಡಿದೆ. ಜೊತೆಗೆ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಿರುವುದು ಅರ್ಥಪೂರ್ಣ ಹಾಗೂ ಒಂದು ಕ್ರಾಂತಿಕಾರಕ ಹೆಜ್ಜೆ ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಏಕರೂಪದ ಶಿಕ್ಷಣ
ಶಿಕ್ಷಣ ಪದ್ಧತಿಯಲ್ಲಿ ಏಕರೂಪತೆ ತರುವುದು, ಸರ್ವರಿಗೂ ಶಿಕ್ಷಣ ಎನ್ನುವ ಮಾತಿನಂತೆ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡುವುದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಿಂದಲೇ ಅತ್ಯುತ್ತಮ ಶಿಕ್ಷಣ ಸಿಗಲಿ ಎಂಬುದು ನೂತನ ಶಿಕ್ಷಣ ನೀತಿಯ ಆಶಯವಾಗಿದೆ.
ಬಹುಭಾಷೆಗಳನ್ನು ಗೌರವಿಸುವ ಅಂಶಗಳಿರುವುದು ನಾವೆಲ್ಲರೂ ಗಮನಿಸಬೇಕಾದ ಅಂಶ. ಒಟ್ಟಾರೆಯಾಗಿ ಪ್ರತಿಯೊಬ್ಬರೂ ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸಬೇಕಾಗಿದೆ. ಮತ್ತೊಮ್ಮೆ ನಾನು ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೃತ್ಪೂರ್ವವಾಗಿ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ
ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹೊಸ ಶಿಕ್ಷಣ ನೀತಿ ರೂಪಿಸಿದ್ದರು. ನಂತರ ದೇಶದ ಶಿಕ್ಷಣ ವಲಯದಲ್ಲಿ ಬದಲಾವಣೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನೀತಿ ರಚಿಸಿತು. ಈ ಮೂಲಕ ಡಿಜಿಟಲ್ ಶಿಕ್ಷಣ ಮತ್ತು ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಸೇರಿಸಲು ಸರ್ಕಾರ ನಿರ್ಧರಿಸಿದೆ.
ಶ್ರೇಣೀಕೃತ ಶೈಕ್ಷಣಿಕ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಮತ್ತು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ನಿಯಂತ್ರಕ ಸಂಸ್ಥೆ ಇರುವುದು ನೀತಿಯ ಇತರ ವೈಶಿಷ್ಟ್ಯಗಳಾಗಿವೆ.