ಗಣಿ ಹಗರಣ: ಖಡಕ್ ಆದೇಶ ಮಾಡಿದ ಸಚಿವ ನಿರಾಣಿ!
ಬೆಂಗಳೂರು, ಫೆ. 17: ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು ಬಿ.ಎಂ. ಅವರನ್ನು ಅಮಾನತುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗಣಿ ಮತ್ತು ಭೂ ಇಲಾಖೆಯ ನಿರ್ದೇಶಕ ಪ್ರಾಣೇಶ್ ಬಿ.ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ 26-10-2016 ರಿಂದ 3-9-2018ರವರೆಗೆ ಹಿರಿಯ ಭೂವಿಜ್ಞಾನಿಯಾಗಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗರಾಜು ಬಿ.ಎಂ. ಅವರ ಮೇಲೆ ವ್ಯಾಪಕವಾದ ಆರೋಪಗಳು ಕೇಳಿ ಬಂದಿದ್ದವು. ಕಲ್ಲು ಗಣಿ ಮಾಲೀಕರಿಗೆ ಕಿರುಕುಳ ನೀಡುವುದು, ಭ್ರಷ್ಟಾಚಾರ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಂದು ಸಾರ್ವಜನಿಕರಿಂದ ಲಿಖಿತ ದೂರುಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ಇಲಾಖೆಯ ನಿರ್ದೇಶಕ ಪ್ರಾಣೇಶ್ ಬಿ.ಎಸ್. ಅವರು ಕರ್ನಾಟಕ ನಾಗರೀಕ ಸೇವೆ (ನಡತೆ ನಿಯಮಗಳು 1966ರ ನಿಯಮ 3ರ) ಪ್ರಕಾರ ಲಿಂಗರಾಜು ಬಿ.ಎಂ. ಅವರು ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿರುವುದರಿಂದ 16-20- 2021 ರಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.