ಈ ಸಲ ಮಂಡ್ಯ ಜಿಲ್ಲೆಯಲ್ಲಿ ಶುರುವಾಯ್ತು 'ಸಿಡಿ' ರಾಜಕೀಯ!
ಬೆಂಗಳೂರು, ಮೇ 26: ಕರ್ನಾಟಕದ ರಾಜಕಾರಣಕ್ಕೂ 'ಸಿಡಿ'ಗೂ ಅದೇನೊ ಅವಿನಾಭಾವ ಸಂಬಂಧ. ರಾಜ್ಯದ ರಾಜಕಾರಣದಲ್ಲಿ ಆಗಾಗ ಸಿಡಿ ವಿಷಯ ಪ್ರಸ್ತಾಪವಾಗುತ್ತಲೆ ಇರುತ್ತದೆ. ಕೊರೊನಾ ವೈರಸ್ ಸೃಷ್ಟಿಸಿರುವ ಲಾಕ್ಡೌನ್ ಸಂದರ್ಭದಲ್ಲಿ ಮತ್ತೆ ಸಿಡಿ ವಿಚಾರ ಚರ್ಚೆಗೆ ಬಂದಿದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಸಿಡಿ ವಿಚಾರ ಪ್ರಸ್ತಾಪವಾಗಿರುವುದು ವಿಶೇಷ.
ಹಿಂದೆಯೂ ಕೂಡ ರಾಜ್ಯದಲ್ಲಿ ಸಿಡಿ ರಾಜಕೀಯ ಹಲವು ಬಾರಿ ನಡೆದಿದೆ. ಕೆಲವು ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಮುಳುವಾಗಿವೆ. ಕೆಲವು ರಾಜಕಾರಣಿಗಳು ಮಂತ್ರಿಸ್ಥಾನಕ್ಕೂ ರಾಜೀನಾಮೆ ಕೊಟ್ಟಿರುವುದು ಇದೆ. ಇದೀಗ ಆ ರೀತಿಯ ಚರ್ಚೆ ಮತ್ತೆ ಆರಂಭವಾಗಿದೆ. ಸದಾ ರಾಜಕೀಯ ಜಿದ್ದಾಜಿದ್ದಿನಿಂದ ಕೂಡಿರುವ ಮಂಡ್ಯ ಜಿಲ್ಲೆಯಲ್ಲಿ ಸಿಡಿ ವಿಚಾರ ಪ್ರಸ್ತಾಪವಾಗಿರುವುದು ವಿಶೇಷ. 'ಸಿಡಿ' ಬಿಡುಗಡೆ ಮಾಡಲಿ ಎಂದು ಜೆಡಿಎಸ್ ಶಾಸಕರು ಸವಾಲು ಹಾಕಿದ್ದಾರೆ. ನಾನು ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳೆ ಇಲ್ಲ ಎಂದು ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ. ಏನದು 'ಸಿಡಿ' ಮಾತು? ಇಲ್ಲಿದೆ ಮಾಹಿತಿ.
ಅದ್ಯಾವ "ಸಿಡಿ' ಇದೆಯೊ ಬಿಡಲಿ
ಅದ್ಯಾವ ಸಿಡಿ ಇದೆಯೊ ಬಿಡೋದಕ್ಕೆ ಹೇಳಿ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶಗೌಡ ಸವಾಲು ಹಾಕಿದ್ದಾರೆ. ಸಚಿವರಾದವರು ದೇವಲೋಕದಿಂದ ಇಳಿದು ಬಂದಿಲ್ಲ. ಜಿಲ್ಲಾಡಳಿತದ ನ್ಯೂನತೆ ಬಗ್ಗೆ ಮಾತನಾಡಿದ್ದೇನೆ, ಮುಂದೆಯೂ ಮಾತನಾಡುತ್ತೇನೆ. ಜಿಲ್ಲಾಡಳಿತ ತಪ್ಪು ಮಾಹಿತಿ ಕೊಟ್ಟರೂ ಒಪ್ಪಿಕೊಳ್ಳಬೇಕಾ?
ಸದ್ಯ ನಮ್ಮ ತಪ್ಪುಗಳು, ನ್ಯೂನತೆಗಳು ಏನು ಇವೆಯೋ? ಯಾವುದಾದರೂ ಬ್ಲೂ ಫಿಲ್ಮ್ ಇದೆಯೋ? ನೋಡಿಯೆ ಬಿಡೋಣ. ನಾವು ನೋಡೋಕೆ ತಯಾರಿದ್ದೇವೆ. ನಾವು ಬಾಂಬೆಗೆಲ್ಲ ಹೋಗೋರಲ್ಲ. ನಮ್ಮ ಎಲ್ಲ ವ್ಯವಹಾರಗಳು ಇಲ್ಲಿಯೆ ಇವೆ ಎಂದು ಶಾಸಕ ಸುರೇಶಗೌಡ ಸವಾಲು ಹಾಕಿದ್ದಾರೆ.
ನಾನು ಸಚಿವನಾಗಿದ್ದರಿಂದ ಬೇಜಾರು!
ಇನ್ನು ಜೆಡಿಎಸ್ ಶಾಸಕ ಸುರೇಶಗೌಡ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ತೋಟಗಾರಿಕಾ ಸಚಿವ ನಾರಾಯಣಗೌಡ ಅವರು, ನಾವೆಲ್ಲ ಮೊದಲು ಒಂದೆ ಪಕ್ಷದಲ್ಲಿ ಇದ್ದೆವು. ನಾನೀಗ ಮಂತ್ರಿಯಾಗಿದ್ದೇನೆ. ಎಸ್ಕಾರ್ಟ್ನೊಂದಿಗೆ ಓಡಾಡೋದನ್ನು ನೋಡಿ ಬೇಸರವಾಗಿದ್ದಾರೋ ಗೊತ್ತಿಲ್ಲ.
ನಾವೆಲ್ಲರೂ ಒಂದೇ ಪಕ್ಷದಲ್ಲಿ ಇದ್ದವರು. ಹಿಂದೆ ಅವರ್ಯಾರೂ ನನ್ನನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರಲಿಲ್ಲ. ಆದರೂ ನಾನೀಗ ಅವರೆಲ್ಲರ ಸಹಮತದೊಂದಿಗೇ ಮಂಡ್ಯ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗಲೂ ಜಿಲ್ಲೆಯ ಎಲ್ಲ ಶಾಸಕರು ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ಮಾಧ್ಯಮದ ಎದುರು ಹೋದಾಗ ಮಾತ್ರ ನನ್ನ ಬಗ್ಗೆ ಕಿಡಿಕಾರುತ್ತಾರೆ. ಇದಕ್ಕೆ ಏನು ಕಾರಣವೊ ಗೊತ್ತಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ನನ್ನತ್ರ ಯಾವ 'ಸಿಡಿ'ಯೂ ಇಲ್ಲ!
ನಾನು ಶಾಸಕ ಸುರೇಶ್ಗೌಡ ಅವರ ಸಿಡಿ ಬಿಡುಗಡೆ ಮಾಡುತ್ತೇನೆ. ನನ್ನತ್ರ ಅವರ ಸಿಡಿ ಇದೆ ಎಂಬ ವಿಚಾರವನ್ನೇ ಮಾತನಾಡಿಲ್ಲ. ಸಿಡಿ ಮಾಡೋದು, ಮಾಡಿಸೋದು ನನ್ನ ಸ್ವಭಾವ ಅಲ್ಲ. ಯಾವತ್ತೂ ಅಂತ ಕೆಲಸ ಮಾಡೋದಿಲ್ಲ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ಮಹಾರಾಷ್ಟ್ರದಲ್ಲಿ ಎಲ್ಲವನ್ನು ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಯಾವುದಕ್ಕು ಹೆದರುವ ಜಾಯಮಾನ ನನ್ನದಲ್ಲ. ಜಿಲ್ಲೆಯಲ್ಲಿ ಒಳ್ಳೆ ಕೆಲಸ ಮಾಡಿ, ಸರ್ಕಾರಕ್ಕೂ ಉತ್ತಮ ಹೆಸರು ತರುವುದು ನನ್ನ ಉದ್ದೇಶ ಎಂದು ನಾರಾಯಣಗೌಡ ಹೇಳಿದ್ದಾರೆ.
ಸಿಎಂ ಬಳಿ ಯಾಕೆ ಕರೆದೊಯ್ಯಬೇಕು?
ಮೈಶುಗರ್ ಸಕ್ಕರೆ ಕಾರ್ಖಾನೆಯನ್ನ ಖಾಸಗಿಗೆ ಕೊಡುವ ನಿರ್ಧಾರ ಕೈ ಬಿಡಲಾಗಿದೆ. ಈ ವಿಚಾರವನ್ನ ಸಿಎಂ ಜೊತೆ ಚರ್ಚಿಸಿದ್ದೇನೆ. ಆದರೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರ ಮಾತಾಡಲು ಶಾಸಕರನ್ನ ಸಿಎಂ ಬಳಿ ಕರೆದೊಯ್ಯಬೇಕು ಎಂಬ ಆಶಯ ಅವರಲ್ಲಿತ್ತು. ಸಮಸ್ಯೆ ಇತ್ಯರ್ಥ ಆದಮೇಲೆ ಶಾಸಕರನ್ನ ಸಿಎಂ ಬಳಿ ಯಾಕೆ ಕರೆದೊಯ್ಯಬೇಕು? ಈ ವಿಚಾರಕ್ಕೆ ಮಂಡ್ಯ ಜಿಲ್ಲೆಯ ಶಾಸಕರೆಲ್ಲ ಬೇಸರವಾಗಿದ್ದಾರೋ ಏನೋ ಗೊತ್ತಿಲ್ಲ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ.