ಯು.ಟಿ.ಖಾದರ್ ಪೌರತ್ವದ 'ಬೆಂಕಿ'ಗೆ ಕೋಟ ಶ್ರೀನಿವಾಸ ಪೂಜಾರಿಯ 'ನೀರು'
ಧಾರವಾಡ, ಡಿ 19: ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಮಾಜಿ ಸಚಿವ, ಶಾಸಕ, ಯು.ಟಿ.ಖಾದರ್ ನೀಡಿದ ಹೇಳಿಕೆಗೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟನ್ನು ನೀಡಿದ್ದಾರೆ.
"ಪೌರತ್ವ ಮಸೂದೆ ಬಹುಮತದಿಂದ, ಸಂವಿಧಾನದ ದೇಗುಲ ಸಂಸತ್ತಿನಲ್ಲಿ ಆಂಗೀಕಾರಗೊಂಡಿದೆ. ಈ ಮಸೂದೆಯ ಬಗ್ಗೆ ಮಾಜಿ ಸಚಿವ ಖಾದರ್ ನೀಡಿರುವ ಹೇಳಿಕೆಗೆ ನನ್ನ ವಿರೋಧವಿದೆ" ಎಂದು ಸಚಿವ ಪೂಜಾರಿ ಹೇಳಿದ್ದಾರೆ.
ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ಹೇಳಿಲ್ಲ: ಯು.ಟಿ.ಖಾದರ್
"ನೀವು ಹಾಕುವ ಬೆಂಕಿಗೆ, ನೀರು ಹಾಕಿ ಅದನ್ನು ನಂದಿಸುವ ಸಾಮರ್ಥ್ಯ ನಮಗಿದೆ. ಅಧಿಕಾರ ಇಲ್ಲದ ಕೆಲವರು ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ" ಎಂದು ಸಚಿವರು, ಖಾದರ್ ಅವರಿಗೆ ತಿರುಗೇಟು ನೀಡಿದ್ದಾರೆ.
"ತಿದ್ದುಪಡಿ ಕಾಯ್ದೆ ಸಂಸತ್ತಿನ ಎರಡೂ ಸದನದಲ್ಲಿ ಪಾಸ್ ಆಗಿದೆ. ಹೀಗಿರುವಾಗ, ಸಚಿವರ 'ಬೆಂಕಿ' ಹೇಳಿಕೆ, ಜನರನ್ನು ಪ್ರಚೋದಿಸುವಂತದ್ದು" ಎಂದು ಸಚಿವ, ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕರ್ನಾಟಕಕ್ಕೆ ಬೆಂಕಿ ಹಚ್ಚುತ್ತೇನೆಂದು ನಾನು ಹೇಳಿಲ್ಲ.CAB ಕರ್ನಾಟಕದಲ್ಲಿ ಜಾರಿ ಮಾಡಿದರೆ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂಬರ್ಥದಲ್ಲಿ ಹೇಳಿದ್ದೇನೆ. ತಪ್ಪಾಗಿ ಅರ್ಥೈಸಿಕೊಂಡು ಕಾಲಹರಣ ಮಾಡುವ ಬದಲು ಇತರ ಕೆಲಸದತ್ತ ಗಮನ ಕೊಡಿ" ಎಂದು ಖಾದರ್, ಟ್ವೀಟ್ ಮಾಡಿದ್ದಾರೆ.
"ಅಂದಹಾಗೆ, ಹೊಸ ಕಾನೂನು ಹುಟ್ಟು ಹಾಕಿ ಉತ್ತರದ ರಾಜ್ಯಗಳಿಗೆ ಬೆಂಕಿ ಇಟ್ಟಿದ್ದೀರ. ಇದರ ನಡುವೆ ಆರ್ಥಿಕತೆ ಕುಸಿತದ ಕಥೆ ಎಲ್ಲಿಗೆ ಬಂತು? ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಾನೂನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ" ಎಂದು ಖಾದರ್, ಕೇಂದ್ರ ಸರಕಾರಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.