ಸಿದ್ದರಾಮಯ್ಯಗಿಂತ ಡಿಕೆ ಶಿವಕುಮಾರ್ ಪ್ರಭಾವಿಯೇ?: ಸಚಿವ ಕೆ. ಸುಧಾಕರ್ ಪ್ರಶ್ನೆ
ಬೆಂಗಳೂರು, ಅಕ್ಟೋಬರ್ 5: ಉಪ ಚುನಾವಣೆಯ ಹೊಸ್ತಿಲಿನಲ್ಲಿ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಹಾಗೂ ಅವರ ಆಪ್ತರ ನಿವಾಸದ ಮೇಲೆ ನಡೆದ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ಬಿಜೆಪಿ ನಾಯಕರು ನಿರಾಕರಿಸಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿವಿಐ ದಾಳಿ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅದನ್ನು ಮರೆತಿದ್ದೀರಾ? ಎಂದು ಸಚಿವ ಕೆ. ಸುಧಾಕರ್ ಕೆಣಕಿದ್ದಾರೆ. ತನಿಖಾ ಸಂಸ್ಥೆಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಅವು ಕಾನೂನಾತ್ಮಕ ಕಾರ್ಯ ನಡೆಸುತ್ತಿವೆ ಎಂದು ದಾಳಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ; ಉಪ ಚುನಾವಣೆ ಲೆಕ್ಕಾಚಾರ ಉಲ್ಟಾ
'ಪ್ರತೀ ಬಾರಿ ಸಿಬಿಐ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಅಮಿತ್ ಶಾ ಅವರಿಗೆ 2 ವರ್ಷ ಗುಜರಾತ್ ಪ್ರವೇಶ ನಿಷೇಧಿಸಿದ್ದಾಗ, ಈಗಿನ ಆಂಧ್ರ ಪ್ರದೇಶದ ಸಿಎಂ ಸೇರಿ ಹಲವಾರು ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಎಂಬುದು ಮರೆತುಹೋಯಿತೇ?' ಎಂದು ಕೆ. ಸುಧಾಕರ್ ಪ್ರಶ್ನಿಸಿದ್ದಾರೆ. ಮುಂದೆ ಓದಿ...
ಕಾನೂನಿಗಿಂತ ಯಾರೂ ದೊಡ್ಡವರಲ್ಲ
'ಸಿಬಿಐ, ಇಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇಬೇಕು' ಎಂದು ದಾಳಿಯ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಪ್ರಾಮಾಣಿಕತೆ ಸಾಬೀತುಪಡಿಸಲು ಅವಕಾಶ
ಈ ದಾಳಿಯ ಬಗ್ಗೆ ಪೂರ್ತಿ ಮಾಹಿತಿ ಇಲ್ಲ. ಐಟಿ, ಸಿಬಿಐ ದಾಳಿ ಹೊಸದೇನಲ್ಲ. ಅವು ಡಿಕೆ ಶಿವಕುಮಾರ್ ಅವರ ಪ್ರಕರಣದಲ್ಲಿ ಮುಂದುವರಿದ ತನಿಖೆ ಮಾಡುತ್ತಿರಬೇಕು ಎನಿಸುತ್ತದೆ. ಭ್ರಷ್ಟಾಚಾರ ಕುರಿತು ತನಿಖೆ ಮಾಡಲು ಸಿಬಿಐನಲ್ಲಿ ವಿಭಾಗ ಇದೆ. ಬಹುಶಃ ಆ ವಿಭಾಗದಿಂದ ತನಿಖೆ ನಡೆಯುತ್ತಿದೆ. ತನಿಖೆ ಆದ ಮೇಲೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪಾರದರ್ಶಕವಾಗಿ ತನಿಖೆ ಆಗುತ್ತಿದೆ. ತಾವು ಭ್ರಷ್ಟಾಚಾರ ಮಾಡಿಲ್ಲ, ಪ್ರಾಮಾಣಿಕರು ಎಂದು ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಇದು ಅವರ ಪ್ರಾಮಾಣಿಕೆಯನ್ನು ರುಜುವಾತುಪಡಿಸಲು ಅವಕಾಶ.
ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಸಿದ್ದರಾಮಯ್ಯಗಿಂತ ದೊಡ್ಡವರೇ?
ಈ ದಾಳಿ ಯಾಕೆ ರಾಜಕೀಯ ಪ್ರೇರಿತ ಆಗಬೇಕು ಹೇಳಿ? ಕಾಂಗ್ರೆಸ್ನಲ್ಲಿ ಡಿಕೆಶಿ ಒಬ್ಬರೇ ಇರೋದಾ? ಸಿದ್ದರಾಮಯ್ಯ ಇಲ್ಲವಾ? ಐದು ವರ್ಷ ಸಿಎಂ ಆಗಿದ್ದರಲ್ಲ, ಅವರ ಮೇಲೆ ಏಕೆ ದಾಳಿ ನಡೆಸಿಲ್ಲ? ಇವರಿಗಿಂತ ಅವರು ಪ್ರಭಾವಿ ಅಲ್ಲವಾ? ಡಿಕೆ ಶಿವಕುಮಾರ್ ಅವರಿಗೆ ಮಾತ್ರವೇ ದಾಳಿ ಅನ್ವಯಿಸುತ್ತದೆಯಾ?
ಎರಡು ಕ್ಷೇತ್ರದಿಂದ ಸರ್ಕಾರಕ್ಕೇನೂ ಆಗಬೇಕಿಲ್ಲ
ಬಿಜೆಪಿ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡುತ್ತಿಲ್ಲ. ಇವರ ಮೇಲೆ ಆಗುತ್ತಿರುವುದಕ್ಕೂ ರಾಜಕಾರಣಕ್ಕೂ ಸಂಬಂಧ ಇಲ್ಲ. ರಾಜ್ಯದಲ್ಲಿ ಬಿಜೆಪ ಸರ್ಕಾರ ಸ್ವಂತ ಬಲದಿಂದ ನಡೆಯುತ್ತಿದೆ. 117 ಕ್ಷೇತ್ರಗಳ ಬಲ ಇದೆ. ಉಪ ಚುನಾವಣೆಯ ಎರಡೂ ಕ್ಷೇತ್ರದಲ್ಲಿ ಸೋಲುತ್ತೇವೆ ಎಂದುಕೊಳ್ಳಿ, ಸೋತರೆ ಏನಾಗುತ್ತೆ ಸರ್ಕಾರಕ್ಕೆ. ಎರಡು ಸ್ಥಾನದಿಂದ ಸರ್ಕಾರ ಅಳಿವು ಉಳಿವು ಇದೆಯೇ? ಇಲ್ಲವಲ್ಲ ಎಂದು ಹೇಳಿದರು.
ಸಿಬಿಐ ದಾಳಿಯ ಬಗ್ಗೆ ಡಿಕೆ ಶಿವಕುಮಾರ್ಗೆ ಮೊದಲೇ ಸುಳಿವು ಇತ್ತೇ?
ನಿಷ್ಪಕ್ಷಪಾತ ತನಿಖೆ ಆಗಲಿ
ಈ ದಾಳಿಗಳು ರಾಜಕೀಯ ದುರುದ್ದೇಶ ಎಂದು ಕಾಂಗ್ರೆಸ್ ನೆಪಪಾತ್ರಕ್ಕೆ ಹೇಳಬಹುದು. ನನಗೆ ತಿಳಿದಿರುವಂತೆ ಸಿಬಿಐ, ಇಡಿ, ಐಟಿ ಎಲ್ಲವೂ ಸ್ವಾಯತ್ತ ಸಂಸ್ಥೆಗಳು. ಅವರ ತನಿಖೆಗಳು ನಿಷ್ಪಕ್ಷಪಾತವಾಗಿ ನಡೆಯಲಿ, ಸತ್ಯ ಹೊರಬರಲಿ ಎಂದು ಆಶಿಸುತ್ತೇನೆ ಎಂದರು.
ಎಲ್ಲರೂ ಸಮಾನರು
ಯಾರ ಮೇಲೆ ಆರೋಪ ಬಂದರೂ ತನಿಖೆಗೆ ಅವಕಾಶ ಮಾಡಿಕೊಡಬೇಕು. ಎಲ್ಲರೂ ಸಂವಿಧಾನದ ಅಡಿಯಲ್ಲಿ ಸಮಾನರು. ಪ್ರಾಮಾಣಿಕರೆ ಇದ್ದರೆ ಅವರು ಆರೋಪದಿಂದ ಹೊರಬರುತ್ತಾರೆ. ಯಾವುದೇ ರೀತಿ ಭ್ರಷ್ಟಾಚಾರ ಮಾಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅದನ್ನು ಸಾಬೀತುಪಡಿಸಲು ಅವರಿಗೆ ಅವಕಾಶ.
Recommended Video
ಆಗ ಇದ್ದದ್ದು ಯಾವ ಸರ್ಕಾರ?
ಟಾರ್ಗೆಟ್ ಮಾಡುವ ಅವಶ್ಯಕತೆ ಯಾರಿಗೂ ಇಲ್ಲ. ಹಾಗಾದರೆ ಹಿಂದೆ ಇಂದಿನ ಗೃಹ ಸಚಿವರು ಅಮಿತ್ ಶಾ ಅವರು ಗುಜರಾತ್ ಪ್ರವೇಶಿಸದಂತೆ ನಿಷೇಧ ಮಾಡಿದ್ದರಲ್ಲ ಯಾವ ಸರ್ಕಾರವಿತ್ತು? ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ತಂದೆ ವೈ ಎಸ್ ರಾಜಶೇಖರ್ ರೆಡ್ಡಿ ಅವರನ್ನು ಎರಡು ವರ್ಷ ಜೈಲಲ್ಲಿ ಇಟ್ಟಿದ್ದರಲ್ಲ. ಯಾವ ಸರ್ಕಾರ ಇತ್ತು? ಕಾಂಗ್ರೆಸ್ನವರೂ ರಾಜಕೀಯ ಪ್ರೇರಿತವಾಗಿ ಮಾಡಿದ್ದರು ಎಂದು ಹೇಳಬಹುದಲ್ಲ. ಹಾಗಲ್ಲ. ಇವೆಲ್ಲ ಸ್ವಾಯತ್ತ ಸಂಸ್ಥೆಗಳು. ಒಳ್ಳೆಯ ಕೆಲಸ ಮಾಡುತ್ತಿವೆ. ಸ್ವಾತಂತ್ರ್ಯ ಕೊಡೋಣ ಅವರ ಮೇಲೆ ನಂಬಿಕೆ ಇರಿಸೋಣ ಎಂದರು.