ಸಾರಿಗೆ ಇಲಾಖೆ ಪ್ರಸ್ತಾವನೆ: ಬಸ್ ಪ್ರಯಾಣ ದರ ತುಟ್ಟಿಯಾಗುತ್ತಾ?
ಬೆಂಗಳೂರು, ಜು.19: ತೈಲ ಹೆಚ್ಚಳ ದರ ಬಳಿಕ ರೈತರ ಸಾಲಮನ್ನಾ ಹೊರೆ ಇಳಿಸುವ ಉದ್ದೇಶದಿಂದ ಸಾರ್ವಜನಿಕರು ಬಸ್ ಪ್ರಯಾಣ ದರ ಏರಿಕೆ ಬರೆಗೆ ಸಜ್ಜಾಗಬೇಕಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸು ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಶೇಕಡಾ 20ರಷ್ಟು ಬಸ್ಸುಗಳ ದರ ಏರಿಕೆಯಾಗುವ ಸಾಧ್ಯತೆಯಿದ್ದು ಸರ್ಕಾರದ ಮುಂದೆ ಕಳೆದ ಎರಡು ತಿಂಗಳಿನಿಂದ ಪ್ರಸ್ತಾವನೆ ಬಾಕಿಯಿದೆ.
ಬಿಎಂಟಿಸಿ ಬಸ್ಗಳು ತಾಸಿಗೆ ಹದಿನೈದೇ ಕಿಮೀ ಓಡುತ್ತಂತೆ
ಡೀಸೆಲ್ ಬೆಲೆ ಅನೇಕ ದಿನಗಳಿಂದ ಏರುಗತಿಯಲ್ಲೇ ಸಾಗಿದ್ದು, ಇತ್ತೀಚೆಗೆ ಬಜೆಟ್ನಲ್ಲಿ ಡೀಸೆಲ್ ಮೇಲೆ ತೆರಿಗೆ ದರ ಶೇ.19ರಿಂದ 21ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಲೀಟರ್ ಡೀಸೆಲ್ ದರ 1.12ರಷ್ಟು ಹೆಚ್ಚಳವಾಗುತ್ತದೆ.
ಡೀಸೆಲ್ ಬೆಲೆ ಏರಿಕೆ ಮತ್ತು ನಿರ್ವಹಣೆ ವೆಚ್ಚ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮೆಟ್ರೊಪಾಲಿಟನ್ ಸಂಚಾರ ನಿಗಮ ತಿಳಿಸಿದೆ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ತಿಳಿಸಿದ್ದಾರೆ.
ಇಂಧನ ಬೆಲೆ ಹೆಚ್ಚಳದಿಂದ ಕಾರ್ಯನಿರ್ವಹಣೆ ವೆಚ್ಚ ಹೆಚ್ಚಳವಾಗಿರುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬ ಒತ್ತಾಯ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿಗೆ ಮತ್ತಷ್ಟು ಹೊರೆಯಾಗಿದೆ. ಬಿಎಂಟಿಸಿಗೆ 600 ಕೋಟಿ ರೂಪಾಯಿಗೂ ಅಧಿಕ ಹೊರೆಯಾಗುತ್ತಿದ್ದು ಇದನ್ನು ಭರಿಸಲು ಪ್ರಯಾಣಿಕರ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.
ಈ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮಣ್ಣ ತಿಳಿಸಿದ್ದಾರೆ. ಇಲಾಖೆಯಲ್ಲಿ ಖಾಲಿ ಇರುವ ಸುಮಾರು 400 ಹುದ್ದೆಗಳ ಭರ್ತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿ ಮಾಡುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಚಿವರು ತಿಳಿಸಿದರು. ಬಿಎಂಟಿಸಿಗೆ ನೂರು ಕೋಟಿ ಸಹಾಯಧನ ನೀಡಲಾಗಿದ್ದರೂ ಉಳಿದ ಮೂರು ನಿಗಮಗಳಿಗೆ ಲಭಿಸಿಲ್ಲ.