ಜಿ.ಟಿ. ದೇವೇಗೌಡಗೆ ಹೊಸ ಖಾತೆ: ಇನ್ನೂ ನಿರ್ಧಾರ ಪ್ರಕಟಿಸದ ಜೆಡಿಎಸ್
ಬೆಂಗಳೂರು, ಜೂನ್ 12: ಎಂಟನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣ ಖಾತೆ ಕೊಟ್ಟಿರುವುದು ಸರಿಯಲ್ಲ ಎಂದು ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಜಿ.ಟಿ. ದೇವೇಗೌಡ ಅವರಿಗೆ ಪರ್ಯಾಯವಾಗಿ ಯಾವ ಖಾತೆ ನೀಡಬೇಕು ಎನ್ನುವುದು ಜೆಡಿಎಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಸಂಬಂಧ ಚರ್ಚೆ ನಡೆಸಲು ಜಿ.ಟಿ. ದೇವೇಗೌಡ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿದ್ದಾರೆ ಸಮಾಲೋಚನೆ ನಡೆಸಿದರು.
ಖಾತೆ ಬದಲಾವಣೆಗೆ ಜಿಟಿಡಿ ಕ್ಯಾತೆ! ಸರಿಯೇ? ತಪ್ಪೇ?
ಈ ವೇಳೆ ಮಾತನಾಡಿದ ಜಿ.ಟಿ. ದೇವೇಗೌಡ ಅವರು, ರೈತರಿಗೆ ಹತ್ತಿರವಿರುವ ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಂದು ಅಥವಾ ನಾಳೆ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ಅಲ್ಲಿಯವರೆಗೂ ಈಗ ಕೊಟ್ಟಿರುವ ಖಾತೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಮೂಲಗಳ ಪ್ರಕಾರ, ಜಿಟಿಡಿ ಅವರಿಗೆ ಸಹಕಾರ ಖಾತೆ ನೀಡಲು ತೀರ್ಮಾನಿಸಲಾಗಿದೆ. ಈಗ ಸಹಕಾರ ಖಾತೆಯನ್ನು ಹೊಂದಿರುವ ಬಂಡೆಪ್ಪ ಕಾಶೆಂಪುರ್ ಅವರಿಗೆ ಅವಕಾರಿ ಖಾತೆ ನೀಡಲಾಗಿದೆ. ಉನ್ನತ ಶಿಕ್ಷಣ ಖಾತೆಯನ್ನು ಕುಮಾರಸ್ವಾಮಿ ಅವರು ತಮ್ಮ ಬಳಿಯೇ ಇರಿಸಿಕೊಳ್ಳಲಿದ್ದಾರೆ.
ಕೇವಲ ಎಂಟನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣದ ಹೊಣೆಗಾರಿಕೆ ನೀಡಿದ್ದನ್ನು ಜಿಟಿಡಿ ಒಪ್ಪಿರಲಿಲ್ಲ. ಅಬಕಾರಿ ಖಾತೆಯನ್ನು ನೀಡಲು ಮುಂದಾದಾಗಲೂ ಅದಕ್ಕೆ ಜಿಟಿಡಿ ಒಲ್ಲೆ ಎಂದಿದ್ದರು ಎನ್ನಲಾಗಿದೆ.
ಬೆಂಬಲಿಗರ ಒತ್ತಾಯ: ಜಿಟಿ ದೇವೇಗೌಡರ ಖಾತೆ ಬದಲಾವಣೆ ಸಾಧ್ಯತೆ
ಅನೇಕ ಪ್ರಮುಖ ಖಾತೆಗಳು ಜೆಡಿಎಸ್ ಬಳಿ ಇವೆ. ಇವುಗಳಲ್ಲಿ ಒಂದನ್ನು ತಮಗೆ ನೀಡಬೇಕು ಎಂದು ಜಿ.ಟಿ. ದೇವೇಗೌಡ ಬಿಗಿಪಟ್ಟು ಹಿಡಿದಿದ್ದಾರೆ.
ಪಕ್ಷದಲ್ಲಿ ಹಿರಿಯ ಮುಖಂಡರಲ್ಲಿ ಒಬ್ಬರಾಗಿರುವುದರಿಂದ ಮತ್ತು ಈ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ ಅಂತರದಿಂದ ಸೋಲಿಸಿ ಗಮನ ಸೆಳೆದಿರುವುದರಿಂದ ಜಿ.ಟಿ. ದೇವೇಗೌಡ ಅವರ ಹಠಕ್ಕೆ ಜೆಡಿಎಸ್ ಮಣಿಯಲೇಬೇಕಾಗಿದೆ.
ಹೀಗಾಗಿ ಈಗಾಗಲೇ ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಅವರು ಖಾತೆ ಬದಲಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್. ಪುಟ್ಟರಾಜು ಅವರು ಸಹ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಡಿ.ಸಿ. ತಮ್ಮಣ್ಣ ಅವರಿಗೆ ಅವರಿಗೆ ನೀಡಿರುವ ಸಾರಿಗೆ ಇಲಾಖೆಯನ್ನು ತಮಗೆ ನೀಡುವಂತೆ ಅವರು ಒತ್ತಾಯಿಸಿದ್ದರು. ಆದರೆ, ಅದಕ್ಕೆ ಜೆಡಿಎಸ್ ವರಿಷ್ಠರು ಅದಕ್ಕೆ ಮಣೆಹಾಕಿಲ್ಲ.