ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡುತ್ತಿದೆ-ಸಚಿವ ಸುಧಾಕರ್
ಬೆಂಗಳೂರು, ಡಿಸೆಂಬರ್ 8: ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದು, ಗುಜರಾತ್ನಲ್ಲಿ ನಮ್ಮ ಪಕ್ಷ ಸತತ 7ನೇ ಬಾರಿ ಅಭೂತ ಪೂರ್ವ ಗೆಲುವು ಸಾಧಿಸಿದೆ. ಮತ್ತೊಮ್ಮೆ ಗುಜರಾತಿನ ಜನರು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಾಗೂ ಗುಜರಾತ್ ಸರ್ಕಾರದ ಕಾರ್ಯವೈಖರಿಯಲ್ಲಿ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Recommended Video
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ನಿಂದ ಹಿನ್ನೆಡೆ ಸಾಧಿಸಿದ್ದಾರೆ. ಇನ್ನೂ ಸ್ಪಷ್ಟ ಫಲಿತಾಂಶ ಬಂದಿಲ್ಲ. ಸದ್ಯದ ಫಲಿತಾಂಶವನ್ನು ನಾನು ಹೇಳಿದ್ದೇನೆ ಎಂದರು.
ಉತ್ತಮ ಆಡಳಿತ ಮಾಡಿರುವುದಕ್ಕೆ ಗುಜರಾತ್ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಆಡಿಪಾಯ ಹಾಕಿದ್ದು ನಮ್ಮ ಮೆಚ್ಚಿನ ನಾಯಕ ನರೇಂದ್ರ ಮೋದಿಯವರು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಒಂದು ಜನರೇಷನ್ ದಾಟಿದರು. ಹಿಂದಿನ ಮತ್ತು ಹೊಸ ಪೀಳಿಗೆಯ ಜನರು ಮೋದಿಯವರ ಆಡಳಿತವನ್ನು ಒಪ್ಪಿಕೊಂಡಿದ್ದಾರೆ. ದೇಶ ಮುನ್ನೆಡಿಸುವ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಇನ್ನು ಗುಜರಾತ್ನಂತೆ ಕರ್ನಾಟಕದಲ್ಲಿಯೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಎಲ್ಲಾ ಸಮುದಾಯಗಳಿಗೆ ಸಮಾಜಿಕ ನ್ಯಾಯ ಕೊಡುತ್ತಿದೆ. ಇನ್ನೊಂದೆಡೆ ವೇಗವಾಗಿ ಅಭಿವೃದ್ಧಿ ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತೆ ನಮ್ಮ ಪಕ್ಷದ ಸರ್ಕಾರ ಸಂದೇಹವಿಲ್ಲದೆ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ಇನ್ನುಮುಂದಿನ ಐದು ತಿಂಗಳು ದೇಶದಲ್ಲಿ ಬೇರೆ ಯಾವುದೇ ರಾಜ್ಯಗಳಲ್ಲಿ ಚುನಾವಣೆ ಇಲ್ಲ. ನಿಖರವಾಗಿ, ಸ್ಪಷ್ಟತೆಯಿಂದ ನಮ್ಮ ಕಾರ್ಯವೈಖರಿಗಳನ್ನು ಹಾಗೂ ಕಾರ್ಯತಂತ್ರವನ್ನು ರಚನೆ ಮಾಡುತ್ತೇವೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಇಂದಿನಿಂದ ಐದು ತಿಂಗಳಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ಹೇಗೆ ತರಬೇಕು ಎನ್ನುವುದರ ಬಗ್ಗೆ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.