ಶಿರಾ, ಆರ್.ಆರ್.ನಗರ ಉಪಚುನಾವಣೆ ಸಮೀಕ್ಷೆ: ಆಂತರಿಕ ವರದಿ
ಬೆಂಗಳೂರು, ನ 4: ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು ಮುಂಜಾಗೃತಾಕ್ರಮ ತೆಗೆದುಕೊಂಡಿತ್ತು.
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತನ್ನು ನಡೆಸಿತ್ತು. ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನವಾಗಿದೆ.
ನಾನು ಬಕೆಟ್ ಹಿಡಿಯುವ ರಾಜಕಾರಣಿ ಅಲ್ಲ; ಸಿ.ಟಿ.ರವಿ
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೇ ಗೆಲುವು ಎನ್ನುವ ವಿಶ್ವಾಸದಲ್ಲಿದೆ. ಆದರೆ, ಮತದಾರನ ನಾಡಿಮಿಡಿತ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ನವೆಂಬರ್ ಹತ್ತರಂದು ಮಧ್ಯಾಹ್ನದೊತ್ತಿಗೆ ಫಲಿತಾಂಶ ಹೊರಬೀಳಲಿದೆ.
ಶಿರಾ: 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ
ಈ ನಡುವೆ, ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪಕ್ಷದ ಆಂತರಿಕ ವರದಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಬಿಜೆಪಿಯ ಈ ಆಂತರಿಕ ವರದಿ ಎಷ್ಟರ ಮಟ್ಟಿಗೆ ಕರಾರುವಕ್ಕಾಗಲಿದೆ ಎನ್ನುವುದನ್ನು ತಿಳಿಯಲು ಇನ್ನೊಂದು ವಾರ ಕಾಯಬೇಕಿದೆ.
ಕರ್ನಾಟಕ ಬಿಜೆಪಿಯ ಭದ್ರಕೋಟೆ
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿ.ಟಿ.ರವಿ, "ಕರ್ನಾಟಕ ಬಿಜೆಪಿಯ ಭದ್ರಕೋಟೆ. ಇಲ್ಲಿ ನಮ್ಮ ಪಕ್ಷವನ್ನು ಅಲುಗಾಡಿಸಲು ಬಂದವರೇ ಪ್ಯಾಕ್ ಅಪ್ ಆಗಲಿದ್ದಾರೆ. ಸೋತರೆ ಇವಿಎಂ ಸಮಸ್ಯೆ, ಗೆದ್ದರೆ ಜನಾದೇಶ ಇದು ಕಾಂಗ್ರೆಸ್ಸಿನ ಸಂಪ್ರದಾಯ"ಎಂದು ಸಚಿವರು ಲೇವಡಿ ಮಾಡಿದ್ದಾರೆ.
ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲಿದೆ
"ನಮ್ಮ ಆಂತರಿಕ ವರದಿಯ ಪ್ರಕಾರ ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಪಕ್ಷಕ್ಕೆ ಬೇಸ್ ಇಲ್ಲದ ಶಿರಾದಲ್ಲೂ ನಾವು ಗೆಲ್ಲಲಿದ್ದೇವೆ. ಬರೀ ಗೆಲುವು ಮಾತ್ರವಲ್ಲ, ದೊಡ್ಡ ಮಟ್ಟದ ವಿಜಯವನ್ನು ನಾವು ಸಾಧಿಸಲಿದ್ದೇವೆ"ಎಂದು ಸಿ.ಟಿ.ರವಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಚುನಾವಣಾ ಆಯೋಗ, ಇವಿಎಂ ಮೂಲೆ ಗೂಬೆ ಕೂರಿಸುವುದು
"ತನ್ನ ಪಕ್ಷ ಗೆಲುವು ಸಾಧಿಸಿದಾಗ ಜನಾದೇಶ ಎನ್ನುವುದು, ಸೋತರೆ, ಚುನಾವಣಾ ಆಯೋಗ, ಇವಿಎಂ ಮೂಲೆ ಗೂಬೆ ಕೂರಿಸುವುದು, ವ್ಯತಿರಿಕ್ತ ಕೋರ್ಟ್ ತೀರ್ಪು ಬಂದರೆ, ನ್ಯಾಯಾಧೀಶರನ್ನು ದೂರುವುದು ಕಾಂಗ್ರೆಸ್ಸಿನ ಹಳೇ ಚಾಳಿ. ಉಪಚುನಾವಣೆಯ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನುವ ಆಂತರಿಕ ವರದಿ ಬಂದಿದೆ" ಎಂದು ಸಿ.ಟಿ.ರವಿ ಹೇಳಿದ್ದಾರೆ.
Recommended Video
ರಾಜೀನಾಮೆ ಅಂಗೀಕರಿಸುವಂತೆ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ
"ಆರ್ ಆರ್ ನಗರದಲ್ಲಿ 25 ಸಾವಿರ, ಶಿರಾದಲ್ಲಿ 10 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ. ಅಧಿಕಾರದ ವ್ಯಾಮೋಹ ಜವಾಬ್ದಾರಿಯ ಕೆಲಸಕ್ಕೆ ಹಿನ್ನಡೆ ಆಗಬಾರದು. ನಿನ್ನೆಯೂ ನನ್ನ ರಾಜೀನಾಮೆ ಅಂಗೀಕರಿಸುವಂತೆ ಸಿಎಂ ಅವರಲ್ಲಿ ಕೇಳಿಕೊಂಡಿದ್ದೇನೆ" ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.