ಆಜಾದಿ ಕಾ ಅಮೃತಮಹೋತ್ಸವ್: ಹಿಂದಿ ಇಂಗ್ಲೀಷ್ ಕಡ್ಡಾಯ ಗೊಂದಲಕ್ಕೆ ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ
ಬೆಂಗಳೂರು ಜೂ. 17: ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಹೊರ ರಾಜ್ಯಗಳಿಗೆ ಪ್ರವಾಸ ಹೊರಡುವ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಜ್ಞಾನವಿರಬೇಕು ಎಂದು ಸೂಚಿಸಿದ್ದ ಶಿಕ್ಷಣ ಇಲಾಖೆಯ ವಿಚಾರಕ್ಕೆ ಸಚಿವ ಬಿ.ಸಿ.ನಾಗೇಶ್ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಹೊರ ರಾಜ್ಯಗಳಿಗೆ ಪ್ರವಾಸ ತೆರಳಲಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವಾಗಲಿ ಇಲ್ಲವೇ ನೆರೆಯ ರಾಜ್ಯ ಸರ್ಕಾರಗಳಾಗಲಿ ಹಿಂದಿ ಇಲ್ಲವೇ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂದು ಎಲ್ಲಿಯೂ ಹೇಳಿಲ್ಲ. ಹೀಗಿದ್ದರು ಈ ಕುರಿತು ಗೊಂದಲಕ್ಕೆ ಕಾರಣರಾದ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಪಠ್ಯಕ್ರಮದ ತಲೆಬಿಸಿಯ ಬೆನ್ನಲ್ಲೆ ಸೃಷ್ಟಿಯಾಗಿದ್ದ ಪ್ರವಾಸ ಹಾಗೂ ಭಾಷಾ ವಿಚಾರದ ಗೊಂದಲಕ್ಕೆ ಅವರು ತೆರೆ ಎಳೆದಿದ್ದಾರೆ.
ಬಿ. ಸಿ. ನಾಗೇಶ್ ಮಂತ್ರಿಯಾಗಲು ನಾಲಾಯಕ್; ಸಿದ್ದರಾಮಯ್ಯ
ಕೇಂದ್ರ ಸರ್ಕಾರ ಅಜಾದಿಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ 'ಏಕ್ ಭಾರತ್ ಶ್ರೇಷ್ಠ ಭಾರತ್' ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಹೊರ ರಾಜ್ಯಗಳಿಗೆ ಪ್ರವಾಸ ಕಲ್ಪಿಸುತ್ತಿದೆ. ಆದರೆ ಈ ಪ್ರವಾಸಕ್ಕೆ ಹಿಂದಿ ಭಾಷೆ ಬರುವವರಿಗೆ, ತಂತ್ರಜ್ಞಾನ ಕುರಿತು ತಿಳುವಳಿಕೆ ಇರುವವರಿಗೆ ಮಾತ್ರ ಅವಕಾಶ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಲಾಗಿತ್ತು.
ವಿವಾದ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಪ್ರವಾಸ ವಿಚಾರದಲ್ಲಿ ಭಾಷೆ ಕಡ್ಡಾಯ ಎಂಬುದು ಎಲ್ಲಿಯೂ ಪ್ರಸ್ತಾಪವಾಗಿಲ್ಲ ಎಂದು ಹೇಳುವ ಜತೆಗೆ ವಿವಾದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇಲಾಖೆಗೆ ಪತ್ರ: ಎಚ್ ಡಿಕೆ ಟೀಕೆ
ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಪ್ರವಾಸಕ್ಕೆ ಹಿಂದಿ ಭಾಷೆ ಕಡ್ಡಾಯ ಎಂಬ ಸುತ್ತೋಲೆ ಹಿಂಪಡೆದು, ಹೊಸ ಸುತ್ತೋಲೆ ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
ವಿವಾದ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇಂತಹ ಕರಾಳ ಸುತ್ತೋಲೆಗೆ ಬಿಜೆಪಿ ಸರ್ಕಾರವೇ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಮತ್ತು ಕರ್ನಾಟಕದ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸುವ ಹೇಯ ಕೃತ್ಯಕ್ಕೆ ಇಳಿದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲಾಖೆ ಸಿಬ್ಬಂದಿ ತಪ್ಪೇನು?
ಹೊರ ರಾಜ್ಯಗಳಿಗೆ ಪ್ರವಾಸ ಕಲ್ಪಿಸುವ ಯೋಜನೆಯಡಿ, ಉತ್ತರಾಖಂಡ ಪ್ರವಾಸಕ್ಕೆ ತೆರಳಲು ಕರ್ನಾಟಕದಿಂದ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿತ್ತು. ಈ ಸಂಬಂಧ ರಾಜ್ಯ ಶಿಕ್ಷಣ ಇಲಾಖೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಉಪನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯಲ್ಲಿ ಹೊರ ರಾಜ್ಯದ ಪ್ರವಾಸಕ್ಕಾಗಿ ನಿಮ್ಮ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮತ್ತು ಹಿಂದಿ ಭಾಷೆ ಬಲ್ಲ, ತಂತ್ರಜ್ಞಾನ ತಿಳುವಳಿಕೆ ಹೊಂದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಹೇಳಿದ್ದೆ, ಈ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
Recommended Video
(ಒನ್ಇಂಡಿಯಾ ಸುದ್ದಿ)