Breaking; ರಾಜೀನಾಮೆ ಬಗ್ಗೆ ಮೌನ ಮುರಿದ ಆನಂದ್ ಸಿಂಗ್
ಬೆಂಗಳೂರು, ಆಗಸ್ಟ್ 24; ಸಚಿವ ಆನಂದ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ ಬಳಿಕ ಖಾತೆ ಕ್ಯಾತೆಯನ್ನು ತೆಗೆದಿದ್ದರು. ಈಗ ಪುನಃ ಸಚಿವರ ರಾಜೀನಾಮೆ ಸುದ್ದಿ ಹರಿದಾಡುತ್ತಿದೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವ ಆನಂದ್ ಸಿಂಗ್ ರಾಜೀನಾಮೆ ವದಂತಿಗಳಿಗೆ ತೆರೆ ಎಳೆದರು. ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ಸ್ಪಷ್ಟನೆಯನ್ನು ನೀಡಿದರು.
ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಥಂಡಾ; ಶಾಸಕರ ಕಾರ್ಯಾಲಯ ಪುನರಾರಂಭ
"ಇಂದು ಬೆಳಗ್ಗೆ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ನನ್ನ ಕೆಲವು ಮನವಿಗಳನ್ನು ಸಲ್ಲಿಕೆ ಮಾಡಿದ್ದೇನೆ. ಅವರು ನಿಮಗೆ ವಹಿಸಿರುವ ಖಾತೆಯ ಜವಾಬ್ದಾರಿಯನ್ನು ಮೊದಲು ತೆಗೆದುಕೊಳ್ಳಿ" ಎಂದು ಸೂಚನೆ ನೀಡಿದ್ದಾರೆ.
ಸಚಿವರಿಗೆ ಖಾತೆ ಹಂಚಿಕೆ: ಅಪಸ್ವರ ಎತ್ತಿದ ಆನಂದ್ ಸಿಂಗ್
"ಮುಖ್ಯಮಂತ್ರಿಗಳು ಸಹ ಇದೇ ಸೂಚನೆಯನ್ನು ನೀಡಿದ್ದರು. ನನ್ನ ಬೇಡಿಕೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರು ಕೊಟ್ಟಿರುವ ಸೂಚನೆಯಂತೆ ನಾನು ಅಧಿಕಾರ ವಹಿಸಿಕೊಳ್ಳುತ್ತೇನೆ" ಎಂದು ಆನಂದ್ ಸಿಂಗ್ ಹೇಳಿದರು.
ಬಸವರಾಜ ಬೊಮ್ಮಾಯಿ ಸಂಪುಟ: ಯಾವ ಸಚಿವರಿಗೆ ಯಾವ ಖಾತೆ?
ಇಂಧನ ಅಥವ ಜಲ ಸಂಪನ್ಮೂಲ ಖಾತೆ ಬೇಕು ಎಂದು ಸಚಿವ ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ. ಆದ್ದರಿಂದ ಇಷ್ಟು ದಿನ ಕಳೆದರೂ ಸಹ ಅವರು ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿರಲಿಲ್ಲ.
ಮನವೊಲಿಕೆ ಮಾಡಿದ್ದ ಸಿಎಂ, ಮಾಜಿ ಸಿಎಂ
ಸಚಿವ ಆನಂದ್ ಸಿಂಗ್ ಖಾತೆ ಕ್ಯಾತೆ ಹೆಚ್ಚಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆನಂದ್ ಸಿಂಗ್ ಕರೆಸಿ ಮನವೊಲಿಕೆ ಮಾಡಿದ್ದರು. ಆದರೆ ಸೋಮವಾರ ರಾತ್ರಿಯಿಂದ ಪುನಃ ಆನಂದ್ ಸಿಂಗ್ ರಾಜೀನಾಮೆ ಸುದ್ದಿ ಹಬ್ಬಿತ್ತು.
ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ಆನಂದ್ ಸಿಂಗ್ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ವಿಧಾನಸೌಧದಲ್ಲಿನ ತಮ್ಮ ಕಚೇರಿಗೆ ಹೋಗಿ ಅಧಿಕಾರ ಸಹ ಸ್ವೀಕಾರ ಮಾಡಿರಲಿಲ್ಲ.
ಸಂದೇಶ ಕಳಿಸಿದ್ದಾರೆ ಎಂಬ ಸುದ್ದಿಗಳು
ಸೋಮವಾರ ರಾತ್ರಿ ಆಪ್ತರ ಜೊತೆ ಆನಂದ್ ಸಿಂಗ್ ಸಭೆ ಮಾಡಿದ್ದರು. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಆನಂದ್ ಸಿಂಗ್ ತಮ್ಮ ಆಪ್ತ ಶಾಸಕ ರಾಜೂಗೌಡ ಮೂಲಕ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪಗೆ ಸಂದೇಶ ರವಾನೆ ಮಾಡಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ವಿದೇಶ ಪ್ರವಾಸಕ್ಕೆ ತೆರಳಿದ್ದ ಯಡಿಯೂರಪ್ಪ ಸೋಮವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಆನಂದ್ ಸಿಂಗ್ ವಿಚಾರದ್ದೇ ಚರ್ಚೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ದಿನದಿಂದ ಆನಂದ್ ಸಿಂಗ್ ವಿಚಾರವೇ ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಚ್. ಡಿ. ಕುಮಾರಸ್ವಾಮಿ ಸರ್ಕಾರವಿದ್ದಾಗ ಮೊದಲು ರಾಜೀನಾಮೆ ನೀಡಿದ್ದ ಶಾಸಕ ಆನಂದ್ ಸಿಂಗ್ ಬಳಿಕ ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದರು.
ಆಗಸ್ಟ್ 15ರಂದು ಬಳ್ಳಾರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆನಂದ್ ಸಿಂಗ್ಗೆ ಮಾಧ್ಯಮದವರು ಎಂದು ಅಧಿಕಾರ ವಹಿಸಿಕೊಳ್ಳುವಿರಿ? ಎಂದು ಕೇಳಿದ್ದರು. ಆಗ "ಅಬೀಬಿ ಪಿಕ್ಚರ್ ಬಾಕಿ ಹೈ" ಎಂದು ಉತ್ತರ ಕೊಟ್ಟಿದ್ದರು.
Recommended Video
ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವರಿಷ್ಠರನ್ನು ಭೇಟಿ ಮಾಡಲಿರುವ ಅವರು ಆನಂದ್ ಸಿಂಗ್ ಬೇಡಿಕೆ ಬಗ್ಗೆಯೂ ಚರ್ಚೆ ನಡೆಸುವ ನಿರೀಕ್ಷೆ ಇದೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ ಭರವಸೆ ಬಳಿಕ ಆನಂದ್ ಸಿಂಗ್ ವಿಧಾನಸೌಧಕ್ಕೆ ತೆರಳಿ ತಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.