ಚುನಾವಣೆಯಲ್ಲಿ ರಮ್ಯಾ ಸೋಲು: ಅಂಬರೀಷ್ ಹೇಳಿಕೆ
ಬೆಂಗಳೂರು, ಮೇ 19: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಸೋಲಿನ ಹಿಂದೆ ತನ್ನ ಹೆಸರು ಕೇಳಿ ಬರುತ್ತಿರುವುದಕ್ಕೆ ಸಚಿವ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಸೋಲಿಗೆ ನಾನು ಕಾರಣನಲ್ಲ, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ನಾನು ಕಾರಣವೆಂದು ಆರೋಪ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ 'ಸರಕಾರದ ಒಂದು ವರ್ಷದ ಸಾಧನೆಯ ಕೈಪಿಡಿ' ಬಿಡುಗಡೆ ಮಾಡುತ್ತಾ ಮಾತನಾಡುತ್ತಿದ್ದ ಅಂಬರೀಷ್, ಚುನಾವಣೆ ಎಂದ ಮೇಲೆ ಸೋಲು ಗೆಲುವು ಮಾಮೂಲು ಎಂದಿದ್ದಾರೆ. (ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ)
ಚುನಾವಣೆ ಎನ್ನುವುದು ಒಂದು ರೀತಿಯಲ್ಲಿ ಜೂಜಾಟದಂತೆ, ಸೋಲು ಮತ್ತು ಗೆಲುವನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ರಮ್ಯಾಳನ್ನು ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇನೆಂದು ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.
ದೇಶದೆಲ್ಲಡೆ ಮೋದಿ ಅಲೆ ಇದೆ. ಆದರೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಶಿವಲಿಂಗಯ್ಯ ಅವರಿಗೆ ಠೇವಣಿ ಸಿಗದಂತೆ ನೋಡಿಕೊಂಡಿದ್ದೇನೆಂದು ಅಂಬರೀಷ್ ಹೇಳಿದ್ದಾರೆ.
ರಮ್ಯಾ ಕಡಿಮೆ ಅಂತರದಲ್ಲಿ ಚುನಾವಣೆಯಲ್ಲಿ ಸೋತಿದ್ದಾಳೆ. ಮುಂದಿನ ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆಲ್ಲಿಸುತ್ತೇವೆಂದು ಅಂಬರೀಷ್, ರಮ್ಯಾಗೆ ಸಾಂತ್ವನ ನೀಡಿದ್ದಾರೆ.
ರಮ್ಯಾ ಅಭಿಮಾನಿಗಳು ಚುನಾವಣಾ ಸೋಲಿಗೆ ಅಂಬರೀಷ್ ಕಾರಣ. ಅಂಬರೀಶ್ ಕಾಂಗ್ರೆಸ್ಸಿನ ಮೀರ್ ಸಾದಿಕ್ ಎಂದು ನೇರವಾಗಿ ಆರೋಪಿಸುತ್ತಿದ್ದರು.