10 ಲಕ್ಷಕ್ಕೂ ಅಧಿಕ ಗಣಿ ಅವಲಂಬಿತರ ಕುಟುಂಬಗಳ ಗೋಳು ಕೇಳುವವರಿಲ್ಲ!
ಬೆಂಗಳೂರು, ಸೆಪ್ಟಂಬರ್ 17: ಗಣಿಗಾರಿಕೆ ಮೇಲೆ ವಿಧಿಸಿರುವ ನಿರ್ಬಂಧದಿಂದಾಗಿ ಸಂಕಷ್ಟಕ್ಕೀಡಾಗಿರುವ ಲಕ್ಷಾಂತರ ಕಾರ್ಮಿಕರ ಕುಟುಂಬಗಳಿಗೆ ಕೂಡಲೇ ಜಿಲ್ಲಾ ಮಟ್ಟದಲ್ಲಿರುವ ಬಳಕೆಯಾಗದ ಗಣಿ ತುರ್ತು ನಿಧಿಯ ಹಣದಲ್ಲಿ ಕೆಲಭಾಗವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಂಡು ಅವರ ನೆರವಿಗೆ ಬರಬೇಕೆಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ವೇದಿಕೆ, ಕೂಡಲೇ ಮಧ್ಯಪ್ರವೇಶಿಸಿ ರಾಜ್ಯದಲ್ಲಿನ ಗಣಿಗಾರಿಕೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಮಾಡಿದೆ.
ಕರ್ನಾಟಕ, ಗೋವಾ ಗಣಿ ಸ್ಥಗಿತದಿಂದ ಕೆಲಸ ಕಳೆದುಕೊಂಡಿದ್ದು 12.8 ಲಕ್ಷ ಮಂದಿ
ಈ ವಿಷಯ ತಿಳಿಸಿದ ವೇದಿಕೆಯ ವಕ್ತಾರ ಎಸ್.ರಾಜಕುಮಾರ್ ಅವರು, "ಕರ್ನಾಟಕದ ಗಣಿಗಾರಿಕೆ ಕ್ಷೇತ್ರ ಗಂಭೀರ ರೂಪದ ಸವಾಲುಗಳನ್ನು ಎದುರಿಸುತ್ತಿದೆ. ದುರಾದೃಷ್ಠವೆಂದರೆ ಈ ಗಣಿಗಾರಿಕೆ ನಿರ್ಬಂಧ ಮತ್ತು ನಿಬಂಧನೆಗಳಿಗೆ ಬಲಿಯಾಗುತ್ತಿರುವುದು ಗಣಿಗಾರಿಕೆಯ ಮೇಲೆಯೇ ಅವಲಂಬಿತವಾಗಿರುವ ಕುಟುಂಬಗಳು. ಗಣಿಗಾರಿಕೆಯ ಮೇಲೆ ನಿರ್ಬಂಧ ವಿಧಿಸಿರುವುದು ಮತ್ತು ಸೀಮಿತಗೊಳಿಸಿರುವುದರಿಂದ ರಾಜ್ಯದ 10 ಲಕ್ಷಕ್ಕೂ ಅಧಿಕ ಗಣಿ ಅವಲಂಬಿತರ ಜನಜೀವನದ ಮೇಲೆ ನೇರ ಪರಿಣಾಮ ಬೀರಿದೆ" ಎಂದು ತಿಳಿಸಿದರು.
ಗಣಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ
"ಈ ಹಿನ್ನೆಲೆಯಲ್ಲಿ ರಾಜ್ಯದ ಗಣಿ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವುದು ಮತ್ತು ಅದನ್ನು ಈ ಸಂಕಷ್ಟದಿಂದ ಪಾರು ಮಾಡಿ ಗಣಿ ಅವಲಂಬಿತ ಕುಟುಂಬಗಳ ಜೀವನವನ್ನು ಹಸನುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.
ಗಣಿ ಉದ್ಯಮವಿರುವ ಪ್ರದೇಶ ಬರಗಾಲ ಪೀಡಿತವಾಗಿದ್ದು, ಶೇ 25ರಷ್ಟು ಮಂದಿ ಬೇಸಾಯ ನಂಬಿಕೊಂಡಿದ್ದರೆ, ಶೇ 75ರಷ್ಟು ಮಂದಿ ಗಣಿ ಉದ್ಯಮ ಅವಲಂಬಿಸಿದ್ದಾರೆ. ಸುಮಾರು 2 ಲಕ್ಷ ಜನರಿಗೆ ಪುನರ್ ಉದ್ಯೋಗ ಕಲ್ಪಿಸಬೇಕಿದೆ.
ಮನವಿ ಪತ್ರದ ಪ್ರಮುಖ ಅಂಶಗಳು
ಕರ್ನಾಟಕ ಗಣಿ ಅವಲಂಬಿತರ ವೇದಿಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದ ಮೂರು ಪ್ರಮುಖ ಅಂಶಗಳು:-
• ಬಳಕೆಯಾಗದೇ ಉಳಿದಿರುವ ಎಸ್ಪಿವಿ ಮತ್ತು ಡಿಎಂಎಫ್ ನಿಧಿಯ ಹಣವನ್ನು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಇಲ್ಲಿ ವಾಸವಾಗಿರುವ ಗಣಿ ಅವಲಂಬಿತ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬೇಕು.
• ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಗಣಿಗಾರಿಕೆ, ಕಬ್ಬಿಣ ಅದಿರು ಮುಕ್ತ ಮಾರಾಟಕ್ಕೆ ಆದ್ಯತೆ ಮೇರೆಗೆ ಅವಕಾಶ ನೀಡಬೇಕು.
• ಕಳೆದ ಹಲವು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಗಣಿ ಅವಲಂಬಿತರ ಲಕ್ಷಾಂತರ ಕುಟುಂಬಗಳಿಗೆ ಜೀವನದ ಭದ್ರತೆ ಒದಗಿಸಬೇಕು.
ರಾಜ್ಯದಲ್ಲಿ ಎಸ್ಪಿವಿಯನ್ನು ರಚನೆ ಮಾಡಲಾಗಿದೆ
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾಜ್ಯದಲ್ಲಿ ಎಸ್ಪಿವಿಯನ್ನು ರಚನೆ ಮಾಡಲಾಗಿದೆ. ಗಣಿಗಾರಿಕೆ ನಡೆಯುವ ಜಿಲ್ಲೆಗಳಲ್ಲಿನ ಸ್ಥಳೀಯ ಪ್ರದೇಶ ಮತ್ತು ಜನರ ಸಾಮಾಜಿಕ-ಆರ್ಥಿಕ ಬೆಳವಣಿಗೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲೆಂದೇ ಈ ಎಸ್ಪಿವಿಯನ್ನು ಆರಂಭಿಸಲಾಗಿದೆ.
12,000 ಕೋಟಿ ರೂಪಾಯಿ ಬಳಕೆ ಮಾಡಿ
ಈ ಎಸ್ಪಿವಿಗೆ ಗಣಿ ಕಂಪನಿಗಳು ತಾವು ಮಾರಾಟ ಮಾಡುವ ಕಬ್ಬಿಣದ ಅದಿರಿನಿಂದ ಬರುವ ಆದಾಯದಲ್ಲಿ ಶೇ.10 ರಷ್ಟನ್ನು ಪಾವತಿ ಮಾಡಿವೆ. ಹೀಗೆ ಸಂಗ್ರಹಿಸಲಾದ ಹಣವೇ 12,000 ಕೋಟಿ ರೂಪಾಯಿಗಳಷ್ಟಿದ್ದು, ಇದನ್ನು ಬಳಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈ ತುರ್ತು ನಿಧಿಯ ಹಣವನ್ನು ಗಣಿ ಅವಲಂಬಿತರ ಶ್ರೇಯೋಭಿವೃದ್ಧಿಗೆ ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ವೇದಿಕೆ ಆಗ್ರಹಿಸಿದೆ.
ರಾಜ್ಯಕ್ಕೆ 10 ಸಾವಿರ ಕೋಟಿ ಆದಾಯ ನಷ್ಟ
ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ 5,830 ಕೋಟಿ ಆದಾಯ ನಷ್ಟವಾಗಿದೆ. ಕರ್ನಾಟಕ ಸರ್ಕಾರವೂ ಕಳೆದ ಏಳೆಂಟು ವರ್ಷಗಳಲ್ಲಿ ಪರವಾನಗಿ ಶುಲ್ಕ, ರಾಯಧನ, ತೆರಿಗೆಗಳು ಮತ್ತು ಸುಂಕಗಳ ರೂಪದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಆದಾಯ ನಷ್ಟ ಅನುಭವಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೂಡ 50 ಸಾವಿರ ಕೋಟಿ ರೂವರೆಗೆ ಆಸ್ತಿ ನಷ್ಟ ಅನುಭವಿಸಿವೆ.