ಗಣಿ ವ್ಯವಹಾರದ ವ್ಯಾಜ್ಯ; ಅನಿಲ್ ಲಾಡ್ಗೆ ಹೈಕೋರ್ಟ್ನಲ್ಲಿ ಮುಖಭಂಗ
ಬೆಂಗಳೂರು, ಜೂ.8. ವಂಚನೆ ಹಾಗೂ ಜೀವ ಬೆದರಿಕೆ ಆರೋಪಿಸಿ ಮಾಜಿ ಶಾಸಕ ಅನಿಲ್ ಲಾಡ್ ಸಲ್ಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಉದ್ಯಮಿ ಆರ್.ಶಿವಕುಮಾರ್ ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ಕೋಟಿ ಹಣ ಪಡೆದು ವಂಚಿಸಿದ್ದಾರೆ ಹಾಗೂ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಾಜಿ ಶಾಸಕ ಅನಿಲ್ ಲಾಡ್ ಸಲ್ಲಿಸಿದ್ದರು. ಇದರಿಂದಾಗಿ ಅನಿಲ್ ಲಾಡ್ಗೆ ನ್ಯಾಯಾಲಯದಲ್ಲಿ ತೀವ್ರ ಮುಖಭಂಗವಾಗಿದದೆ.
ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಶಿವಕುಮಾರ್ ವಿರುದ್ಧ ಲಾಡ್ ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ. ಅನಿಲ್ ಲಾಡ್ ದೂರು ಮತ್ತು ಅದನ್ನು ಆಧರಿಸಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಉದ್ಯಮಿ ಆರ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ಪರ ಹಿರಿಯ ವಕೀಲರು, ಅರ್ಜಿದಾರರು ಅನಿಲ್ ಲಾಡ್ಗೆ ಜೀವ ಬೆದರಿಕೆ ಹಾಕಿಲ್ಲ. ಅವರು ಸುಳ್ಳು ದೂರು ದಾಖಲಿಸಿದ್ದಾರೆ. ಪ್ರಕರಣವು ಸಂಪೂರ್ಣ ಸಿವಿಲ್ ಸ್ವರೂಪವಾಗಿದೆ. ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಅಧಿಕಾರವಿಲ್ಲ. ಜತೆಗೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣದಲ್ಲಿ ಈ ಕಾಯ್ದೆ ಅನ್ವಯ ಆಗುವುದಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ದೂರು ರದ್ದುಪಡಿಸುವಂತೆ ಕೋರಿದ್ದರು. ಈ ವಾದ ಪುರಸ್ಕರಿಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧದ ದೂರು ರದ್ದುಪಡಿಸಿದೆ.
ಏನಿದು ಪ್ರಕರಣ: ಅನಿಲ್ ಲಾಡ್ ಅವರು ಗಣಿ ಉದ್ಯಮಿ ಆರ್.ಶಿವಕುಮಾರ್ ವಿರುದ್ಧ 2018ರ ಡಿ.9ರಂದು ಹೈಗ್ರೌಂಡ್ಸ್ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ತಮ್ಮಿಂದ 35 ಕೋಟಿ ಹಣ ಪಡೆದು ಮರು ಪಾವತಿಸದೆ ವಂಚಿಸಿದ್ದಾರೆ. ಹಣ ಹಿಂದಿರುಗಿಸಲು ಸೂಚಿಸಿದಾಗ ನನ್ನ ಕೊಲೆಗೆ ಸುಪಾರಿ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅನಿಲ್ ಲಾಡ್ ದೂರಿನಲ್ಲಿ ಆರೋಪಿಸಿದ್ದರು.
ಅಲ್ಲದೆ, 2018ರ ಡಿ.5ರಂದು ರಾತ್ರಿ 8.45ಕ್ಕೆ ನನ್ನ ಮೊಬೈಲ್ಗೆ ಭೂಗತ ಪಾತಕಿ ರವಿಪೂಜಾರಿ ಹೆಸರಿನಲ್ಲಿ ಮೆಸೇಜ್ ಬಂದಿದೆ. 'ಶಿವಕುಮಾರ್ಗೆ ನೀಡಿರುವ ಹಣ ಮರೆತುಬಿಡು. ಇಲ್ಲವಾದರೆ ಗುಂಡುಕ್ಕಿ ಸಾಯಿಸಲಾಗುವುದು. 'ಇದು ನಿನಗೆ ಎಚ್ಚರಿಕೆ; ಭೂಗತದೊರೆ ರವಿ ಪೂಜಾರಿ' ಎಂಬುದಾಗಿ ಮೆಸೇಜ್ನಲ್ಲಿ ತಿಳಿಸಲಾಗಿತ್ತು ಎಂದು ದೂರಿನಲ್ಲಿ ಅನಿಲ್ ಲಾಡ್ ಆರೋಪಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಶಿವಕುಮಾರ್ ವಿರುದ್ಧ ಜೀವ ಬೆದರಿಕೆ ಆರೋಪ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು. ಇದರಿಂದ ದೂರು ರದ್ದುಪಡಿಸಲು ಕೋರಿ ಶಿವಕುಮಾರ್ ಹೈಕೋರ್ಟ್ಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು.