ಕಾಂಗ್ರೆಸ್ಸಿಗೆ ಜಮೀರ್ ಎಂಟ್ರಿ ಕೊಡುವುದಕ್ಕೂ ಮುನ್ನವೇ ತಗುಲಿತು ಶಾಕ್!
ಜೆಡಿಎಸ್ ನಿಂದ ಅಮಾನತುಗೊಂಡು ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ಸಿಗೆ ಎಂಟ್ರಿಕೊಡುವುದಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಶಾಕ್ ನೀಡಿದ್ದಾರೆ.
ವಿಜಯಪುರ/ಬೆಂಗಳೂರು, ಮೇ 08 : ಜೆಡಿಎಸ್ ನಿಂದ ಅಮಾನತುಗೊಂಡು ಕಾಂಗ್ರೆಸ್ ಬಾಗಿಲು ತಟ್ಟುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ಸಿಗೆ ಎಂಟ್ರಿಕೊಡುವುದಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಶಾಕ್ ನೀಡಿದ್ದಾರೆ.
ಕಾಂಗ್ರೆಸ್ಸಿಗೆ ಬೇರೆ ಪಕ್ಷಗಳಿಂದ ವಲಸೆ ಬರುವುದನ್ನು ಸ್ವಾಗತಿಸಿರುವ ಸಿಎಂ, ವಲಸೆ ಬಂದವರಿಗೆಲ್ಲ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದಿಲ್ಲ ಎಂದು ಘೋಷಿಸಿದ್ದಾರೆ.[ಕಾಂಗ್ರೆಸ್ ಜತೆ ದೋಸ್ತಿ ಇಲ್ಲ, 120 ಮಂದಿ ಪಟ್ಟಿ ಸಿದ್ಧವಿದೆ: ಎಚ್ ಡಿಕೆ]
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಜೆಡಿಎಸ್ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಭಾನುವಾರ ಘೋಷಿಸಿದ್ದರು. ಇದೇ ಸಮಯಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಜಯಪುರದಲ್ಲಿ ಟಿಕೆಟ್ ಹಂಚಿಕೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ.[ಪರಂ ನಿರ್ಗಮನ ಖಾತ್ರಿ, ಮೇ10ರ ನಂತರ ಕೆಪಿಸಿಸಿಗೆ ಹೊಸ ಸಾರಥಿ?]
ಎಚ್ಡಿಕೆ ವಿರುದ್ಧ ಜಮೀರ್: ಕುಮಾರಸ್ವಾಮಿಯವರು ಹತ್ತು ಜನರ ಬಳಿ ಹೋದರೂ ನನ್ನಂತಹ ಒಬ್ಬ ಜಮೀರ್ ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಕುಮಾರಸ್ವಾಮಿ ಅವರ ಪರಿಸ್ಥಿತಿ ಅಯ್ಯೋ ಪಾಪ ಎನ್ನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ ಎಂದು ಜಮೀರ್ ಗೇಲಿ ಮಾಡಿದರು.
ಜಮೀರ್ ಗೆ ಎಚ್ಚರಿಕೆ
ಜೆಡಿಎಸ್ ನಿಂದ ಅಮಾನತುಗೊಂಡಿರುವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಯಾರೇ ಆಗಲಿ ಕಾಂಗ್ರೆಸ್ಸಿಗೆ ಸೇರುವುದನ್ನು ಸ್ವಾಗತಿಸುತ್ತೇನೆ. ಆದರೆ, ವಲಸಿಗರಿಗೆ ಟಿಕೆಟ್ ಭರವಸೆ ನೀಡಲಾಗುವುದಿಲ್ಲ. ಟಿಕೆಟ್ ಹಂಚಿಕೆ ಬಗ್ಗೆ ನಿರ್ಧಾರ ನಂತರ ಕೈಗೊಳ್ಳಲಾಗುವುದು ಎಂದು ವಿಜಯಪುರಕ್ಕೆ ಬಂದಿದ್ದ ಸಿದ್ದರಾಮಯ್ಯ ಹೇಳಿದರು.
ಈ ನಡುವೆ ಕೆಪಿಸಿಸಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಆಗಮಿಸಲಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಹಳೆ ಕಥೆ ಬಿಚ್ಚಿಟ್ಟ ಜಮೀರ್
ಚಾಮರಾಜಪೇಟೆಯ ಹಳೆ ಕೋಟೆ ಹೈಸ್ಕೂಲ್ ನಲ್ಲಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜಮೀರ್, ರಾಜ್ಯ ಸಭೆ ಚುನಾವಣೆ ನಂತರ ನನ್ನನ್ನು ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಲಾಯಿತು. ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನನ್ನನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆದರೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಭಾವನೆ ಇತ್ತು. ಯಾರೂ ಇಲ್ಲಿ ತನಕ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತನಾಡಿಲ್ಲ ಎಂದರು.
ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ?
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡುತ್ತೇನೆ. ನನ್ನ ಸ್ಪರ್ಧೆ ಖಚಿತ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಜೆಡಿಎಸ್ ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಠೇವಣೀ ಕಳೆದುಕೊಂಡಿತ್ತು. ನಾನು ಗೆಲ್ಲುವ ಅಭ್ಯರ್ಥಿ ಎಂದು ಜಮೀರ್ ಘೋಷಿಸಿದರು.
ಜೆಡಿಎಸ್ ನಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲ
ಜೆಡಿಎಸ್ ನಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕುಮಾರಸ್ವಾಮಿ ತೋರಿಸಲಿ, ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮಗನಾಗಿದ್ದೇನೆ. ಈ ಕ್ಷೇತ್ರದ ಜನ ನನ್ನನ್ನು ಕೈಬಿಡುವುದಿಲ್ಲ. ಮುಂದಿನ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದು ಜಮೀರ್ ಅಹ್ಮದ್ ಹೇಳಿದರು.