ಮೇಲುಕೋಟೆ ನರಸರಾಜ ಭಟ್ಟರು ಇನ್ನೂ ನಾಪತ್ತೆ!
ಬುಧವಾರ ಎಸಿ ವಾಣಿ ಅವರು ನೋಟಿಸ್ ಜಾರಿಗೊಳಿಸಿದ್ದು ವಿಚಾರಣೆಗೆ ಹಾಜರಾಗುವಂತೆ ಎಲ್ಲಾ ಒಂಭತ್ತು ಜನರಿಗೆ ಸೂಚನೆ ನೀಡಿದ್ದಾರೆ. ದೇವಾಲಯದ ಪ್ರಧಾನ ಅರ್ಚಕ ನರಸರಾಜ ಭಟ್, ಅವರ ಸಹೋದರ ವರದರಾಜ್ ಭಟ್ ಮತ್ತು ಮುಜರಾಯಿ ಇಲಾಖೆಯ ಇತರ ಏಳು ಮಂದಿ ನೌಕರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಎಸಿ ವಾಣಿ ಹೇಳಿದ್ದಾರೆ.
2009 ರಿಂದ ಮುಜರಾಯಿ ಇಲಾಖೆ ನೌಕರರಾಗಿ ದೇವಾಲಯದಲ್ಲಿ ಕಾರ್ಯನಿರ್ವಹಿಸಿದ ಏಳು ಜನರು ವಿಚಾರಣೆಗೆ ಹಾಜರಾಗಬೇಕಾಗಿದೆ. ಅರ್ಚಕ ನರಸರಾಜ್ ಭಟ್ ಮತ್ತು ವರದರಾಜ್ ಭಟ್ ಇನ್ನೂ ತಮ್ಮ ನೋಟಿಸ್ ಅನ್ನು ಪಡೆಯಬೇಕಾಗಿದೆ. ಈ ಇಬ್ಬರು ಜುಲೈನಿಂದ ನಾಪತ್ತೆಯಾಗಿದ್ದು, ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. (ಮೇಲುಕೋಟೆ : ಪೊಲೀಸರಿಗೆ ಹೆದರಿದ ಅರ್ಚಕರು ಪರಾರಿ)
ಮುಜರಾಯಿ ಇಲಾಖೆಯ ನೌಕರರು ವಿಚಾರಣೆ ವೇಳೆ ದೇವಸ್ಥಾನದಲ್ಲಿನ ರತ್ನಾಂಗಿ ಆಭರಣ ಅದನ್ನು ನೀಡಿದವರು ಮುಂತಾದ ವಿವರಗಳನ್ನು ನೀಡಬೇಕಾಗಿದೆ. ಆದರೆ, ದೇವಾಲಯದ ಪ್ರಧಾನ ಅರ್ಚಕರು ಪತ್ತೆಯಾಗದ ಹೊರತು ಪ್ರಕರಣ ಕುರಿತು ತನಿಖೆ ಪೂರ್ಣಗೊಳ್ಳಲು ಸಾಧ್ಯವಿಲ್ಲ, ಅವರ ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ತಿರಸ್ಕಾರವಾಗಿದ್ದೂ ಅವರು ಪತ್ತೆಯಾಗಿಲ್ಲ. (ಮೇಲುಕೋಟೆ ದೇವಾಲಯಕ್ಕೆ ಆಡಳಿತಾಧಿಕಾರಿ ನೇಮಕ)
ನರಸರಾಜ ಭಟ್ ಎಲ್ಲಿ : ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿನ ರತ್ನಾಂಗಿ ಆಭರಣದ ಅವ್ಯವಹಾರ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದು, ಅರ್ಚಕ ನರಸರಾಜ ಭಟ್ಟರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದ ತಕ್ಷಣ ಅವರು, ತಲೆಮರೆಸಿಕೊಂಡಿದ್ದಾರೆ.
ಮುಜರಾಯಿ ಸಚಿವರ ಆದೇಶದಂತೆ ಮಂಡ್ಯ ಜಿಲ್ಲಾಧಿಕಾರಿ ಬಿ.ಎಸ್.ಕೃಷ್ಣಯ್ಯ, ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಮೇಲುಕೋಟೆ ಠಾಣೆಯಲ್ಲಿ ನರಸರಾಜ ಭಟ್ಟ ವಿರುದ್ಧ ದೂರು ದಾಖಲಿಸುವಂತೆ ದೂರು ಸೂಚಿಸಿದ್ದರು. ಜು.18 ರಂದು ಅವರ ವಿರುದ್ಧ ದೂರು ದಾಖಲಾಗಿದ್ದು, ಅಂದಿನಿಂದಲೂ ಭಟ್ಟರು ಮತ್ತು ಅವರ ಸಹೋದರ ನಾಪತ್ತೆಯಾಗಿದ್ದಾರೆ.
ಯಾವ ಪ್ರಕರಣ : ನರಸರಾಜ ಭಟ್ಟರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 406 (ನಂಬಿಕೆ ದ್ರೋಹ), 408 (ಕರ್ತವ್ಯದಲ್ಲಿ ವಂಚನೆ), 420 (ಮೋಸ)ರ ಅಡಿ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನು ನೀಡುವಂತೆ ಭಟ್ಟರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಆದರೂ ಭಟ್ಟರು ಇನ್ನೂ ಪತ್ತೆಯಾಗಿಲ್ಲ.