ಮೇಕೆದಾಟುಯಿಂದ ಮುತ್ತತ್ತಿಗೆ ಕಂಟಕ: ರಾಜಕುಮಾರ್ ಕುಟುಂಬ ಕಳವಳ
ಬೆಂಗಳೂರು, ಜನವರಿ 1: ಮೇಕೆದಾಟು ಯೋಜನೆಯಿಂದ ರಾಜ್ಯದ ಕುಡಿಯುವ ನೀರು ಮತ್ತು ಕೃಷಿ ನೀರಿನ ಕೊರತೆಯನ್ನು ನೀಗಿಸಲು ಸಾಧ್ಯ ಎಂಬ ಭರವಸೆಯೊಂದಿಗೆ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಶತಪ್ರಯತ್ನ ನಡೆಸುತ್ತಿದೆ. ಆದರೆ, ಅದಕ್ಕಾಗಿ ರಾಜ್ಯದ ಕೆಲವು ಪ್ರಮುಖ ಸ್ಥಳಗಳು 'ಬಲಿದಾನ' ಮಾಡಬೇಕಿವೆ.
ರಾಜ್ಯದ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಾದ ಶಿಂಷಾ, ಮುತ್ತತ್ತಿ ಮತ್ತು ಸಂಗಮಗಳು ಮೇಕೆದಾಟು ಯೋಜನೆಯಿಂದಾಗಿ ಮುಳುಗಡೆಯ ಭೀತಿಯಲ್ಲಿವೆ.
ಅದರಲ್ಲಿಯೂ ಮಳವಳ್ಳಿ ತಾಲ್ಲೂಕಿನ ಪವಿತ್ರ ಪುಣ್ಯಕ್ಷೇತ್ರ ಮುತ್ತತ್ತಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಹೀಗಾಗಿ ಅಲ್ಲಿನ ಜನರಲ್ಲಿ ನೆಲೆಕಳೆದುಕೊಳ್ಳುವ ಆತಂಕ ಮನೆಮಾಡಿದೆ.
ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ: ಪ್ರಧಾನಿ ಮಧ್ಯ ಪ್ರವೇಶಕ್ಕೆ ಮನವಿ
ಕಾವೇರಿ ನದಿ ದಡದಲ್ಲಿರುವ ಮುತ್ತತ್ತಿ, ಕಾವೇರಿ ವನ್ಯಜೀವಿಧಾಮದಲ್ಲಿರುವ ದಟ್ಟ ಅರಣ್ಯದ ನಡುವಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣ. ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಕಾಡು, ಕಂದಾಯ ಭೂಮಿ ಮತ್ತು ಖಾಸಗಿ ಜಮೀನುಗಳನ್ನು ಇದು ಒಳಗೊಂಡಿದೆ.
ತ್ರೇತಾಯುಗದಲ್ಲಿ ಸೀತಾದೇವಿ ಕಾವೇರಿ ನದಿಯಲ್ಲಿ ಸ್ನಾನ ಮಾಡುವಾಗ ಆಕೆಯ ಮುತ್ತಿನ ಮೂಗುತಿ ನೀರಿನಲ್ಲಿ ಬಿದ್ದುಹೋಗುತ್ತದೆ. ಆಗ ಆಂಜನೇಯ ಮೂಗುತಿಯನ್ನು ಎತ್ತಿಕೊಡುತ್ತಾನೆ. ನೀನು ಮುತ್ತತ್ತಿರಾಯನಾಗಿ ಇಲ್ಲಿಯೇ ನೆಲೆಸಿ ಭಕ್ತರ ಕಷ್ಟಗಳನ್ನು ಬಗೆಹರಿಸು ಎಂದು ಸೀತಾದೇವಿ ಹರಸಿದಳು ಎನ್ನುವುದು ಪ್ರತೀತಿ.
400 ನಿವಾಸಿಗಳಿಗೆ ಆದಾಯದ ಮೂಲ
76 ಕುಟುಂಬಗಳ ಅಂದಾಜು 400 ನಿವಾಸಿಗಳು ಇಲ್ಲಿದ್ದಾರೆ. ಸೋಲಿಗ ಸಮುದಾಯದವರೂ ಇದ್ದಾರೆ. ಅವರಿಗೆ ಹೊರಜಗತ್ತಿನ ನಂಟು ಅಷ್ಟಾಗಿ ಇಲ್ಲ. ಅಲ್ಲಿ ವಿದ್ಯುತ್ ಆಗಲಿ, ಮೊಬೈಲ್ ಸಂಪರ್ಕವಾಗಲಿ ಇಂದಿಗೂ ಸಿಕ್ಕಿಲ್ಲ. ತಮ್ಮ ನೆಲೆ ಕಳೆದುಕೊಳ್ಳುವ ಜೊತೆಗೆ ಪೌರಾಣಿಕ ಹಿನ್ನೆಲೆಯ ಮುತ್ತಯ್ಯನ ಗುಡಿಯೂ ಮುಳುಗಡೆಯಾಗಲಿದೆ ಎಂಬ ಆತಂಕ ಅವರಲ್ಲಿ ತಲೆದೋರಿದೆ. ಏಕೆಂದರೆ ಅವರೆಲ್ಲರ ಜೀವಾನೋಪಾಯಕ್ಕೆ ಬರುವ ಆದಾಯದ ಮೂಲವೇ ಈ ಮುತ್ತತ್ತಿರಾಯ. ಅದರ ಹೊರತಾಗಿ ಅವರಿಗೆ ಬೇರೆ ಆದಾಯದ ಮಾರ್ಗವಿಲ್ಲ.
ಮೇಕೆದಾಟು ಯೋಜನೆ: ಕೇಂದ್ರದಿಂದ ಕರ್ನಾಟಕಕ್ಕೆ ಗ್ರೀನ್ ಸಿಗ್ನಲ್
ಅಣ್ಣಾವ್ರ ನೆಚ್ಚಿನ ದೇವರು
ಇಲ್ಲಿನ ಕೆಲವು ಜನರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಅರಿತು ಗ್ರಾಮ ತೊರೆಯಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಆದರೆ, ತಮಗೆ ಜೀವನೋಪಾಯದ ಮೂಲವಾಗಿರುವ ದೇವಸ್ಥಾನವನ್ನು ಕಳೆದುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ಈ ದೇವಸ್ಥಾನ, ಕನ್ನಡಿಗರ ಪಾಲಿನ ಅಣ್ಣಾವ್ರು ರಾಜಕುಮಾರ್ ಅವರ ಅತಿ ನೆಚ್ಚಿನ ತಾಣವಿದು. ಈ ಪ್ರಭಾವಶಾಲಿ ತಾಣವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎನ್ನುವುದು ಜನರ ಉದ್ದೇಶ.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಿಲ್ಲ: ಸಿದ್ದರಾಮಯ್ಯ
ಮುತ್ತುರಾಜನಿಗೆ ಮುತ್ತುರಾಯನ ಆಶೀರ್ವಾದ
ವರನಟ ರಾಜಕುಮಾರ್ ಅವರ ಮೂಲ ಹೆಸರು ಮುತ್ತುರಾಜ್. ಅವರ ತಂದೆ ಪುಟ್ಟಸ್ವಾಮಯ್ಯ ಮತ್ತು ತಾಯಿ ಲಕ್ಷ್ಮಮ್ಮ. ಈ ದಂಪತಿಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಮುತ್ತುರಾಯ ಸ್ವಾಮಿಯ ಆಶೀರ್ವಾದದಿಂದ ಮಗುವನ್ನು ಪಡೆದ ಕಾರಣಕ್ಕೆ ಪುಟ್ಟಸ್ವಾಮಯ್ಯ-ಲಕ್ಷ್ಮಮ್ಮ ದಂಪತಿ ಮಗುವಿಗೆ ಮುತ್ತುರಾಜ್ ಎಂಬ ಹೆಸರಿಟ್ಟರು.
ರಾಜಕುಮಾರ್ ಮುತ್ತತ್ತಿಯ ದೇವಸ್ಥಾನಕ್ಕೆ ಯಾವಾಗಲೂ ಭೇಟಿ ನೀಡುತ್ತಿದ್ದವರು. ಅಂತಹ ಮುತ್ತತ್ತಿ ಮುಳುಗುತ್ತದೆ ಎಂಬ ಸುದ್ದಿ ಈಗ ರಾಜಕುಮಾರ್ ಅವರ ಕುಟುಂಬಕ್ಕೂ ಆಘಾತ ಉಂಟುಮಾಡಿದೆ. ಅದನ್ನು ಉಳಿಸಿಕೊಳ್ಳಲು ಸರ್ವಪ್ರಯತ್ನ ನಡೆಸುವುದಾಗಿ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ.
ರಾಮಾಯಣದ ನಂಟು
'ರಾಮಾಯಣದ ನಂಟನ್ನು ಈ ಮುತ್ತತ್ತಿ ದೇವಸ್ಥಾನ ಹೊಂದಿದೆ. ಸ್ನಾನ ಮಾಡುವಾಗ ಮುತ್ತಿನ ಮೂಗುತಿ ಕಳೆದುಕೊಂಡ ಸೀತಾದೇವಿಗೆ ಆಂಜನೇಯ ಅದನ್ನು ಹುಡುಕಿಕೊಟ್ಟ. ಈ ಕಾರಣಕ್ಕಾಗಿ ಸೀತಾದೇವಿ, ಆಂಜನೇಯನಿಗೆ ಆ ದೇವಸ್ಥಾನದ ಕೊಡುಗೆ ನೀಡಿದಳು. 90 ವರ್ಷಗಳ ಹಿಂದಿನ ಕಥೆ. ನನ್ನ ಅಜ್ಜ-ಅಜ್ಜಿಗೆ ಮಕ್ಕಳಾಗಿರಲಿಲ್ಲ. ಕಾಡಿನ ನಡುವೆ ಸಾಗಿ ಈ ದೇವಸ್ಥಾನಕ್ಕೆ ತೆರಳಿದರು. ಮುತ್ತುರಾಯನಿಗೆ ಬೇಡಿಕೊಂಡರೆ ಮಕ್ಕಳಾಗುತ್ತದೆ ಎನ್ನುವುದು ಅವರ ನಂಬಿಕೆ.
ಮುಂದೆ ರಾಜಕುಮಾರ್ ಜನಿಸಿದರು. ಮುತ್ತುರಾಯನನ್ನು ನೆನೆಸಿಕೊಳ್ಳಲು ಮುತ್ತುರಾಜ್ ಎಂಬ ಹೆಸರು ನೀಡಿದರು. ಆದರೆ, ಅಜ್ಜ-ಅಜ್ಜಿಗೆ ಮತ್ತೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜಕುಮಾರ್ ಆ ದೇವರಿಗೆ ಗುಡಿಯೊಂದನ್ನು ಕಟ್ಟಿಸಿದರು. ಎರಡು ತಿಂಗಳಿಗೆ ಒಮ್ಮೆಯಾದರೂ ಅಲ್ಲಿಗೆ ಹೋಗಿ ಬರುತ್ತಿದ್ದರು' ಎಂದು ನೆನೆಸಿಕೊಂಡಿದ್ದಾರೆ ರಾಘವೇಂದ್ರ ರಾಜಕುಮಾರ್.
ಶಿವರಾಜಕುಮಾರ್ ನಟನೆಯ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರ ಎರಡು ತಿಂಗಳು ಮುತ್ತತ್ತಿಯಲ್ಲಿಯೇ ಚಿತ್ರೀಕರಣವಾಗಿತ್ತು. ಪುನೀತ್ ರಾಜಕುಮಾರ್ ಸಹ ಇದರಲ್ಲಿ ನಟಿಸಿದ್ದರು. ರಾಜಕುಮಾರ್ ಆಂಜನೇಯನ ಕುರಿತಾಗಿಯೇ ಸುಮಾರು 60-70 ಭಕ್ತಿಗೀತೆಗಳನ್ನು ಹಾಡಿದ್ದರು ಎಂದು ಅವರು ಹೇಳುತ್ತಾರೆ.
ಸರ್ಕಾರಕ್ಕೆ ಮನವಿ ಸಲ್ಲಿಕೆ
'ಆಂಜನೇಯನ ಆಶೀರ್ವಾದದಿಂದಲೇ ಸಿನಿಮಾ ರಂಗದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಎನ್ನುವುದು ರಾಜಕುಮಾರ್ ಅವರ ಅಭಿಪ್ರಾಯವಾಗಿತ್ತು. ನಾವೂ ಅವರ ಸಂಪ್ರದಾಯವನ್ನು ಮುಂದುವರಿಸುತ್ತಿದ್ದೇವೆ. ದೇವಸ್ಥಾನ ಮುಳುಗಡೆ ಆಗುತ್ತದೆ ಎನ್ನುವುದು ದುಃಖ ಉಂಟುಮಾಡಿದೆ. ಗಾಜನೂರು, ಮುತ್ತತ್ತಿಯಂತಹ ಹಳ್ಳಿಗಳು ನಮ್ಮ ತಂದೆಗೆ ಬಹು ಆಪ್ತವಾಗಿದ್ದವು. ಅವುಗಳನ್ನು ರಕ್ಷಿಸಬೇಕು. ಬರಗೂರು ರಾಮಚಂದ್ರಪ್ಪ, ಭಗವಾನ್ ಮತ್ತು ತಿಪಟೂರು ರಾಮಸ್ವಾಮಿ ಅವರಂತಹ ವ್ಯಕ್ತಿಗಳ ಮಾರ್ಗದರ್ಶನ ಪಡೆದು ನಾನು ಮತ್ತು ನನ್ನ ಸಹೋದರರು ದೇವಸ್ಥಾನ ಉಳಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ' ಎಂದು ಹೇಳಿದ್ದಾರೆ.