2ನೇ ಹಂತದ ಮೇಕೆದಾಟು ಪಾದಯಾತ್ರೆಯಲ್ಲಿ ಡಿಕೆಶಿ ಬ್ರದರ್ಸ್ ವಿನೂತನ ಗಂಡಸ್ತನ?
ಬೆಂಗಳೂರು, ಜ 17: ಕನಕಪುರದ ಸಂಗಮದಿಂದ ಭಾರೀ ಸದ್ದು ಮಾಡಿಕೊಂಡು ಬರುತ್ತಿದ್ದ ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಯನ್ನು ಕೊರೊನಾ ಸಂಬಂಧ ಮಧ್ಯದಲ್ಲೇ ಮೊಟಕುಗೊಳಿಸುವ ಅನಿವಾರ್ಯತೆ ಕಾಂಗ್ರೆಸ್ ನಾಯಕರಿಗೆ ಎದುರಾಗಿತ್ತು.
ಕೋವಿಡ್ ಮಾರ್ಗಸೂಚಿಗೆ ತಲೆ ಕೆಡಿಸಿಕೊಳ್ಳದೇ ಸಾವಿರಾರು ಸಂಖ್ಯೆಯಲ್ಲಿ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರಕ್ಕೆ ತಿಲಾಂಜಲಿಯಿಟ್ಟು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಇದು, ರಾಜ್ಯ ಹೈಕೋರ್ಟಿನ ಕೆಂಗಣ್ಣಿಗೂ ಕಾರಣವಾಗಿತ್ತು.
ಮೇಕೆದಾಟು ಪಾದಯಾತ್ರೆ ಸ್ಥಗಿತಕ್ಕೆ ಆ ಒಂದು ದೂರವಾಣಿ ಕರೆಯೇ ಕಾರಣ?
ಕೊರೊನಾ ಹಾವಳಿ ಕಮ್ಮಿಯಾದ ನಂತರ, ಎಲ್ಲಿಂದ ಪಾದಯಾತ್ರೆಯನ್ನು ಮೊಟಕುಗೊಳಿಸಲಾಗಿತ್ತೋ, ಅಲ್ಲಿಂದಲೇ ಮತ್ತೆ ಆರಂಭಿಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಧ್ವನಿಗೂಡಿಸಿದ್ದಾರೆ.
ಈಗಿರುವ ಕೊರೊನಾ ಸಮಯಾವಕಾಶವನ್ನು ಬಳಸಿಕೊಂಡು ಡಿಕೆಶಿ ಬ್ರದರ್ಸ್, ಎರಡನೇ ಹಂತದ ಪಾದಯಾತ್ರೆಯಲ್ಲಿ ರೂಟ್ ಮ್ಯಾಪ್ ಬದಲಿಸುವ ಚಿಂತನೆ ನಡೆಸಿದ್ದಾರೆ. ಈ ಸಂಬಂಧ, ಬೆಂಗಳೂರಿನ ಕಾಂಗ್ರೆಸ್ ಮುಖಂಡರಿಗೆ ಯೋಜನೆ ರೂಪಿಸುವಂತೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
'ಮೇಕೆದಾಟು ಓಮಿಕ್ರಾನ್ ಸೋಂಕಿನ ಸಮಾರಾಧನೆ, ತಕ್ಷಣ ನಿಲ್ಲಿಸಿ'
ಮುಖ್ಯಮಂತ್ರಿಗಳು ಇದ್ದಾರೆ ಎನ್ನುವ ಕನಿಷ್ಠ ಶಿಷ್ಟಾಚಾರ
ರಾಮನಗರ ಜಿಲ್ಲೆಯ ಸರಕಾರೀ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ವೇದಿಕೆಯಲ್ಲಿ ನಡೆದ ವಿದ್ಯಮಾನ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭೆಯಲ್ಲಿ ಇದ್ದಾರೆ ಎನ್ನುವ ಕನಿಷ್ಠ ಶಿಷ್ಟಾಚಾರವನ್ನು ಪಾಲಿಸದೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೆಳ ಮಟ್ಟದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಸಚಿವ ಡಾ.ಅಶ್ವಥ್ ನಾರಾಯಣ್ ಆಡಿದ ಗಂಡಸ್ತನದ ಮಾತು ಸಂಸದ ಡಿ.ಕೆ.ಸುರೇಶ್ ಅವರನ್ನು ಕೆರಳಿಸಿತ್ತು.
ಗಂಡಸ್ತನದ ಮಾತಿಗೆ ವೇದಿಕೆಯಲ್ಲೇ ಡಿಕೆಸು ಧರಣಿ
ಗಂಡಸ್ತನದ ಮಾತಿಗೆ ವೇದಿಕೆಯಲ್ಲೇ ಡಿಕೆಸು ಧರಣಿ ಕೂತರೆ, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರವಿ ಮೈಕ್ ಕಿತ್ತುಕೊಳ್ಳಲು ಮುಂದಾಗಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಘೋಷಣೆಯೂ ತಾರಕಕ್ಕೇರಿತ್ತು. ಅಂದಿನ ಅಶ್ವಥ್ ನಾರಾಯಣ್ ಅವರ ಗಂಡಸ್ತನದ ಸವಾಲಿಗೆ ಈಗ ಡಿಕೆಶಿ ಬ್ರದರ್ಸ್ ತಾರ್ಕಿಕ ಅಂತ್ಯ ಕಾಣಿಸಲು ಮೇಕೆದಾಟು ಪಾದಯಾತ್ರೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ. ಅದಕ್ಕೆ ರೂಟ್ ಮ್ಯಾಪ್ ಚೇಂಜ್ ಮಾಡುವ ನಿರ್ಧಾರವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಮನಗರದಲ್ಲಿ ನಡೆದ ಘಟನೆಯು ಕಾಂಗ್ರೆಸ್ಸಿನ ಪಾದಯಾತ್ರೆಯ ವೇಳೆಯೂ ಮಾರ್ದನೆಸಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಪಕ್ಷದ ಮುಖಂಡರ ನಿಲುವೇ ಸರಿ ಎಂದು ಜಿದ್ದಿಗೆ ಬಿದ್ದಂತೆ ಆರೋಪ/ಪ್ರತ್ಯಾರೋಪ ನಡೆಸಿದ್ದರು. ಆದರೆ, ಸಾರ್ವಜನಿಕ ವಲಯದಲ್ಲಿ ಈ ವಿದ್ಯಮಾನ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ
ರಾಮನಗರದಿಂದ ಮುಂದುವರಿಯ ಬೇಕಾಗಿದ್ದ ಅಸಲಿ ರೂಟ್ ಮ್ಯಾಪ್, ಮಂಚನಾಯಕನಹಳ್ಳಿ, ಕೆಂಗೇರಿ ಮೂಲಕ ಬೆಂಗಳೂರು ಪ್ರವೇಶಿಸಿ, ಬನಶಂಕರಿ, ಸಾರಕ್ಕಿ ಸಿಗ್ನಲ್, ಕೋರಮಂಗಲ, ಲಕ್ಷ್ಮಿಪುರಂ, ಬಾಣಸವಾಡಿ, ನಾಗವಾರ, ಪ್ಯಾಲೇಸ್ ಗ್ರೌಂಡ್, ರೇಸ್ ಕೋರ್ಸ್, ಕೆಪಿಸಿಸಿ ಕಚೇರಿಯಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯ ನಂತರ ಸಂಪನ್ನಗೊಳಿಸಬೇಕಾಗಿತ್ತು. ಈಗ, ಇದರಲ್ಲಿ ಕೊಂಚ ಬದಲಾವಣೆಯನ್ನು ಮಾಡಿ, ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ ಹೋಗುವಂತೆ ಯೋಜನೆ ರೂಪಿಸಲು ಸೂಚಿಸಲಾಗಿದೆ ಎನ್ನುವ ಮಾಹಿತಿಯಿದೆ.
ಸಚಿವ ಡಾ.ಅಶ್ವಥ್ ನಾರಾಯಣ್ ಅವರಿಗೆ ಅವರೇ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸವಾಲು
ಮಲ್ಲೇಶ್ವರಂನಲ್ಲಿ ಪಾದಯಾತ್ರೆ ನಡೆಸಿ ಸಚಿವ ಡಾ.ಅಶ್ವಥ್ ನಾರಾಯಣ್ ಅವರಿಗೆ ಅವರೇ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸವಾಲು ಹಾಕಲು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ, ತಮ್ಮ ಕರ್ಮಭೂಮಿ ರಾಮನಗರ ಜಿಲ್ಲೆಯಲ್ಲಿ ಗಂಡಸ್ತನದ ಸವಾಲು ಹಾಕಿದ್ದರೋ, ಅದೇ ರೀತಿಯಲ್ಲಿ ಅಶ್ವಥ್ ನಾರಾಯಣ್ ಅವರ ಕ್ಷೇತ್ರದಲ್ಲಿ ಕೌಂಟರ್ ಕೊಡಲು ಡಿಕೆಶಿ ಬ್ರದರ್ಸ್ ಪ್ಲ್ಯಾನ್ ಹಾಕುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Recommended Video