ರಾಮನಗರ, ಚಾಮರಾಜನಗರದಲ್ಲಿ ಶೀಘ್ರವೇ ಮೆಗಾ ಗಾರ್ಮೆಂಟ್ಸ್ ಆರಂಭ
ಬೆಂಗಳೂರು, ಆಗಸ್ಟ್ 19: ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೆಗಾ ಗಾರ್ಮೆಂಟ್ ಘಟಕಗಳು ಆರಂಭವಾಗಲಿವೆ ಎಂದು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದ್ದಾರೆ.
ರಾಜ್ಯಕ್ಕೆ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನ ನಡೆಸಿರುವ ಸಚಿವ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜವಳಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.
ಗಾರ್ಮೆಂಟ್ಸ್ ಕಾರ್ಮಿಕರ ಬಲವಂತವಾಗಿ ರಾಜೀನಾಮೆ, ಅಧ್ಯಯನ ವರದಿ
ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಮೆಗಾ ಗಾರ್ಮೆಂಟ್ಸ್ ಘಟಕಗಳು ಪ್ರಾರಂಭವಾಗಿವೆ. ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಇದೇ ರೀತಿಯ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. 2020-21ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾದ ಶಿಗ್ಗಾವಿ (ಹಾವೇರಿ ಜಿಲ್ಲೆ) ಯಲ್ಲಿ ನೂತನ ಜವಳಿ ಪಾರ್ಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ ಎಂದು ಮುನೇನಕೊಪ್ಪ ಹೇಳಿದರು.
ಸಂವಾದದ ವೇಳೆ ಮುನೇನಕೊಪ್ಪ ಅವರು, ಗಾರ್ಮೆಂಟ್ ನೀತಿ 2019- 24ರಲ್ಲಿ ಐದು ಲಕ್ಷ ಜನರಿಗೆ ಉದ್ಯೋಗದೊಂದಿಗೆ 10,000 ಕೋಟಿ ರೂಪಾಯಿಗಳವರೆಗೆ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ. ಹೊಸ ಗಾರ್ಮೆಂಟ್ ನೀತಿಯನ್ನು ಜಾರಿಗೆ ತಂದ ನಂತರ ಕರ್ನಾಟಕದಲ್ಲಿ 544 ಎಂಎಸ್ಎಂಇ ಘಟಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ವಿವಿಧ ಜಿಲ್ಲೆಗಳಲ್ಲಿ 745 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಮತ್ತು 64,000 ಜನರಿಗೆ ತರಬೇತಿ ನೀಡಲಾಗಿದೆ ಎಂದು ಅವರು ಹೇಳಿದರು.
ಇದೇ ಕ್ಷೇತ್ರದಲ್ಲಿ 21,000 ಜನರಿಗೆ ಉದ್ಯೋಗ ನೀಡಲಾಗಿದ್ದು, 1,060 ಕೋಟಿ ರೂ.ಗಳನ್ನು ಬೃಹತ್ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗಿದೆ. ಈ ಘಟಕಗಳು 17,300 ಉದ್ಯೋಗಗಳನ್ನು ಸೃಷ್ಟಿಸಿವೆ. ರಾಣೆಬೆನ್ನೂರು ಮತ್ತು ನವಲಗುಂದದಲ್ಲಿ ಹೊಸ ಜವಳಿ ಪಾರ್ಕ್ಗಳಿಗೆ ಹೂಡಿಕೆ ಮಾಡಲು ಇಬ್ಬರು ಹೂಡಿಕೆದಾರರು ಮುಂದೆ ಬಂದಿದ್ದಾರೆ ಎಂದು ಸಚಿವ ಮುನೇನಕೊಪ್ಪ ತಿಳಿಸಿದ್ದಾರೆ.