ದಂಡಿಸುವ ಲಾಠಿಯಲ್ಲಿ ಸಪ್ತಸ್ವರ, ಕೊಳಲು ವಾದನಕ್ಕೆ ತಲೆದೂಗಿದ ಖಾಕಿ ಪಡೆ!
ಬೆಂಗಳೂರು, ಮೇ 28 : ಅದು ಸಮಾಜಘಾತುಕರನ್ನು ದಂಡಿಸುವ ಲಾಠಿ. ಪೊಲೀಸರು ಕೈಯಲ್ಲಿರುವ ಲಾಠಿ ಏಟಿನ ರುಚಿ ತಿಂದವರಿಗೆ ಗೊತ್ತು. ಇಂತಹ ಲಾಠಿಯಿಂದ ಕಾನೂನು ರಕ್ಷಣೆಗೆ ಮಾತ್ರವಲ್ಲ ಮನೋರಂಜನೆಯೂ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಒಬ್ಬರು ಪೊಲೀಸ್ ಅಧಿಕಾರಿ.
ಕಾನೂನು ಕಾಪಾಡುವ ಲಾಠಿಯಲ್ಲಿ ಸಪ್ತಸ್ವರ ಬರುತ್ತದೆ. ಲಾಠಿಯಲ್ಲಿನ ಕೊಳಲು ವಾದನ ಕೇಳಿ ಖಾಕಿ ಪಡೆಯೇ ಬೆರಗಾಗಿದೆ. ಲಾಠಿಯನ್ನು ಕೊಳಲು ಮಾಡಿಕೊಂಡು ಇಂಪಾಗಿ ಸಂಗೀತ ನುಡಿಸುವ ಖಾಕಿಧಾರಿಯ ಪ್ರತಿಭೆಗೆ ಇಲಾಖೆಯೇ ಸೆಲ್ಯೂಟ್ ಹೊಡೆದಿದೆ.
ಆಗ ಪೊಲೀಸ್ ಅಧಿಕಾರಿ ಈಗ ಸಂಸದ, ಹಿರಿಯ ಅಧಿಕಾರಿಗಳಿಂದ ಸೆಲ್ಯೂಟ್
ಚಂದ್ರಕಾಂತ ಹುಟಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಮುಖ್ಯಪೇದೆ. ಗರಿಗರಿ ಖಾಕಿ ತೊಟ್ಟು ಲಾಠಿ ಹಿಡಿದು ನಿಂತರೆ ಆರಕ್ಷಕ. ಅದೇ ಲಾಠಿಯನ್ನು ಹಿಡಿದು ಕೊಳಲು ಬಾರಿಸಿದರೆ ಕಲಾವಿದ. ಚಂದ್ರಕಾಂತ ಅವರು ಕೊಳಲು ನುಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇವರು ಸಿವಿ ರಾಮನ್ ನಗರದ 'ಸಿಂಗಂ ಭಾಸ್ಕರ್'
ಬಿಡುವಿನ ವೇಳೆಯಲ್ಲಿ ಲಾಠಿಯನ್ನೇ ಕೊಳಲು ಮಾಡಿಕೊಂಡು ಸಂಗೀತ ನುಡಿಸುವ ಚಂದ್ರಕಾಂತ ಅವರ ಪ್ರತಿಭೆಗೆ ಖಾಕಿ ಪಡೆಯೇ ಬೆರಗಾಗಿದೆ. ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ ರಾವ್ ಅವರು ಚಂದ್ರಕಾಂತ ಅವರು ಕೊಳಲು ನುಡಿಸುವುದನ್ನು ನೋಡಿ ಭೇಷ್ ಎಂದಿದ್ದಾರೆ.
ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು
ಲಾಠಿ ಕೊಳಲಾಗಿದ್ದು ಹೇಗೆ? : ಇತ್ತೀಚೆಗೆ ಚಂದ್ರಕಾಂತ ಅವರನ್ನು ಚುನಾವಣಾ ಕರ್ತವ್ಯಕ್ಕಾಗಿ ಚಿಕ್ಕಮಗಳೂರಿಗೆ ನಿಯೋಜನೆ ಮಾಡಲಾಗಿತ್ತು. ನಾಲ್ಕೈದು ತಾಸು ಬಿಡುವಿನಲ್ಲಿದ್ದ ಅವರು ಲಾಠಿಯನ್ನು ಏಕೆ ಕೊಳಲು ಮಾಡಬಾರದು ಎಂದು ಆಲೋಚಿಸಿದರು.
ಡ್ರಿಲ್ಲಿಂಗ್ ಮೆಷಿನ್ ಮೂಲಕ ಫೈಬರ್ ಲಾಠಿಯನ್ನು ಕೊಳಲಾಗಿ ಮಾಡಿದರು. ಈಗ ಫೈಬರ್ ಲಾಠಿ ಮೂಲಕವೇ ಅವರು ಸೊಗಸಾದ ಸಂಗೀತ ಬಾರಿಸುತ್ತಾರೆ. ಚಂದ್ರಕಾಂತ ಅವರು ಕೊಳಲು ನುಡಿಸುವ ವಿಡಿಯೋಗಳು ಈಗ ವೈರಲ್ ಆಗಿವೆ.
ಸಂಗೀತ ಕಲಿತಿದ್ದಾರೆ : ನಾಟಕ ಮತ್ತು ಸಂಗೀತದಲ್ಲಿ ಚಂದ್ರಕಾಂತ ಅವರಿಗೆ ಅಪಾರವಾದ ಆಸಕ್ತಿ ಇದೆ. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಗದಗದಲ್ಲಿ ಪಂಡಿತ್ ವೆಂಕಟೇಶ ಗೋಡ್ಬಿಂಡಿ ಅವರ ಬಳಿ ಕೊಳಲು ವಾದನ ಕಲಿತಿದ್ದಾರೆ.
ಕೀರ್ವಾಣಿ ರಾಗ, ಯಮನ್ ರಾಗ, ಜೋಗ್, ಭಾಗ್ಯಶ್ರೀ ರಾಗ, ಭೈರವರಾಗದಲ್ಲಿ ಚೆನ್ನಾಗಿ ಕೊಳಲು ನುಡಿಸುತ್ತಾರೆ. 1993ರಲ್ಲಿ ಗದಗದ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಆರಂಭಿಸಿದ ಚಂದ್ರಕಾಂತ ಅವರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.