ನಾನು-ಯಡಿಯೂರಪ್ಪ ಒಂದೇ ಜೀವ, ಎರಡು ದೇಹ ಅಂದರಪ್ಪೋ ಈಶ್ವರಪ್ಪ
ಕೊಪ್ಪಳದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ರಾಗ ಬದಲಿಸಿದ್ದಾರೆ. ನಾನು ಹಾಗೂ ಬಿಎಸ್ ವೈ ಒಂದೇ ಜೀವ ಎರಡು ದೇಹ ಇದ್ದಂತೆ ಎಂದಿದ್ದಾರೆ.
ಕೊಪ್ಪಳ, ಮೇ 17: ಈ ಸುದ್ದಿಯನ್ನು ಅರ್ಥೈಸಿಕೊಳ್ಳುವುದು ಹೇಗೆ ಅಂತ ಫುಲ್ ಕನ್ ಫ್ಯೂಸ್ ಆಗುತ್ತಿದೆ. ಏಕೆಂದರೆ ಇದು ವಿಧಾನಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಅವರಿಗೆ ಸಂಬಂಧಿಸಿದ್ದು. ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಎಂಥ ಮಾತು ಹೇಳಿದ್ದಾರೆ ಗೊತ್ತಾ? ಯಡಿಯೂರಪ್ಪ ಹಾಗೂ ನಾನು ಒಂದೇ ಜೀವ-ಎರಡು ದೇಹ ಇದ್ದ ಹಾಗೆ. ಹಿಂದೆಯೂ ಹಾಗೇ ಇದ್ದೆವು. ಈಗಲೂ ಹಾಗೇ ಇದ್ದೀವಿ. ಮುಂದೇಯೂ ಹೀಗೇ ಇರ್ತೀವಿ ಎಂದಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ನಲ್ಲಿ ನಾನು ಪದಾಧಿಕಾರಿ ಏನಲ್ಲ. ಹಿಂದುಳಿದವರು-ದಲಿತರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನ್ಯಾಯ ಒದಗಿಸಲಿಲ್ಲ ಎಂಬ ಸಿಟ್ಟಿದೆ. ಅದನ್ನು ಹೊರಹಾಕಲು ಹುಟ್ಟಿಕೊಂಡ ಸಂಘಟನೆಯೇ ರಾಯಣ್ಣ ಬ್ರಿಗೇಡ್ ಎಂದು ಅವರು ಹೇಳಿದ್ದಾರೆ.[ಕಾಂಗ್ರೆಸ್ ಹುಳುಕು ತೋರಿಸಲು ಹೋದ ಬಿಜೆಪಿ ಬಣ್ಣ ಬಯಲು]
ಆದರೆ, ಬ್ರಿಗೇಡ್ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ. ಸಂಘಟನೆಯಿಂದ ಕರೆದಾಗ ಖಂಡಿತಾ ಹೋಗ್ತೀನಿ. ಇನ್ನು ಸಂಘಟನೆ ಬಗ್ಗೆ ಯಡಿಯೂರಪ್ಪ ಅವರಿಗೆ ಇರುವ ಅಸಮಾಧಾನದ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದ ಈಶ್ವರಪ್ಪ, ರಾಜ್ಯ ಬಿಜೆಪಿಯಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂದು ಕೂಡ ಹೇಳಿದರು. ಆದರೆ ಅದನ್ನು ಸರಿ ಮಾಡಿಕೊಳ್ತೀವಿ. ಮುಂದಿನ ವಿಧಾನಸಭೆ ಚುನಾವಣೆಗೆ ಬಿಎಸ್ ವೈ ನೇತೃತ್ವ ವಹಿಸುತ್ತಾರೆ ಎಂದರು.