ಮಾ. 25ರಂದು ಕಾಂಗ್ರೆಸ್ ಸೇರಲಿದ್ದಾರೆ ಎಂ.ಸಿ.ನಾಣಯ್ಯ
ಬೆಂಗಳೂರು, ಮಾರ್ಚ್ 21 : ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಂ.ಸಿ.ನಾಣಯ್ಯ ಮಾರ್ಚ್ 25ರಂದು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಈಗಾಗಲೇ ನಾಣಯ್ಯ ಅವರು ಕಾಂಗ್ರೆಸ್ ತೊರೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.25ರಂದು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಅಂದು ಎಂ.ಸಿ.ನಾಣಯ್ಯ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಎಂ.ಸಿ. ನಾಣಯ್ಯರಿಂದ ಪ್ರಮುಖ ರಾಜಕೀಯ ತೀರ್ಮಾನ
ಎಂ.ಸಿ.ನಾಣಯ್ಯ ಅವರ ಜೊತೆ ಮಾಜಿ ವಿಧಾನಪರಿಷತ್ ಸದಸ್ಯರಾದ ಸರೋವರ ಶ್ರೀನಿವಾಸ್ ಮತ್ತು ಬಿ.ರಾಮಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ಜನವರಿ ತಿಂಗಳಿನಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಮಡಿಕೇರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂ.ಸಿ.ನಾಣಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆಗ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು ಎಂದು ತಿಳಿದುಬಂದಿದೆ.
ಎಂ.ಸಿ.ನಾಣಯ್ಯ ಕಾಂಗ್ರೆಸ್ ಸೇರ್ತಾರಾ?
ಹಲವು ದಿನಗಳಿಂದ ಎಂ.ಸಿ.ನಾಣಯ್ಯ ಅವರು ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವುಳಿದಿದ್ದಾರೆ. ಈಗ ಅವರು ಕಾಂಗ್ರೆಸ್ ಸೇರುತ್ತಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು ಎಂ.ಸಿ.ನಾಣಯ್ಯ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ್ದ ನಾಣಯ್ಯ ಅವರು, 'ನಾನು ಕಾಂಗ್ರೆಸ್ ಸೇರುವುದಿಲ್ಲ. ಸಿದ್ದರಾಮಯ್ಯ ನನ್ನ ಹಳೆಯ ಸ್ನೇಹಿತರು. ಆದ್ದರಿಂದ, ಭೇಟಿ ನೀಡಿದ್ದರು' ಎಂದು ಹೇಳಿದ್ದರು.