ಕಾಂಗ್ರೆಸ್ಸಿನಲ್ಲಿ ನಿಲ್ಲದ ಮುಂದಿನ ಸಿಎಂ ಒಳ ಸಮರ: ಸಂಚಲನ ಮೂಡಿಸಿದ ಎಂ.ಬಿ.ಪಾಟೀಲ್
ಮೈಸೂರು, ಜೂನ್ 28: ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಎಂದು ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅವರು ಭಾವೀ ಮುಖ್ಯಮಂತ್ರಿ ಎಂದು ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ, ಕಾಂಗ್ರೆಸ್ಸಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಕೆಪಿಸಿಸಿ ಅಧ್ಯಕ್ಷರು ಮತ್ತು ಪಕ್ಷದ ಶಿಸ್ತುಸಮಿತಿ ನೀಡಿದ ಎಚ್ಚರಿಕೆಯ ಹೊರತಾಗಿಯೂ, ಒಳ ಸಮರ ಕಮ್ಮಿಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ನಾಯಕರಿಂದ ಹೇಳಿಕೆಗಳು ಹೊರ ಬೀಳುತ್ತಲೇ ಇದೆ.
ರೈತರನ್ನು ಕಡೆಗಣಿಸುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರಿಸಬೇಕು
ಇವೆಲ್ಲದರ ನಡುವೆ, ಹೈಕಮಾಂಡ್ ನಲ್ಲಿ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಮತ್ತು ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪನವರು ದೆಹಲಿಗೆ ತೆರಳಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದರ ಜೊತೆಗೆ, ಸುತ್ತೂರು ಶ್ರೀಗಳನ್ನು ಭೇಟಿಯಾಗಿರುವ ಉತ್ತರ ಕರ್ನಾಟಕದ ಭಾಗದ ಪ್ರಭಾವೀ ಮುಖಂಡ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಪಕ್ಷದ ಪಡಶಾಲೆಯಲ್ಲಿ ಸಂಚಲನ ಮೂಡಿಸಿದೆ.
ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಎಚ್ಚರಿಕೆ
"ಇನ್ನು ಮುಂದೆ ಪಕ್ಷದೇ ಮುಖಂಡರು, ಶಾಸಕರು ಮುಂದಿನ ಮುಖ್ಯಮಂತ್ರಿಯ ವಿಚಾರದಲ್ಲಿ ಹೇಳಿಕೆಯನ್ನು ನೀಡಬಾರದು. ಈ ಎಚ್ಚರಿಕೆಯ ಹೊರತಾಗಿಯೂ ನಾಯಕರು ಸೊಲ್ಲೆತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು"ಎಂದು ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಹೇಳಿದ್ದರು.
ಸುತ್ತೂರು ಶ್ರೀಗಳನ್ನು ಭೇಟಿಯಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್
ಸುತ್ತೂರು ಶ್ರೀಗಳನ್ನು ಭೇಟಿಯಾಗಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಾ ಮುಂದಿನ ಮುಖ್ಯಮಂತ್ರಿಗಳ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. "ಕಾಂಗ್ರೆಸ್ಸಿನಲ್ಲೂ ಲಿಂಗಾಯತ ಸಮುದಾಯದ ನಾಯಕರೂ ಇದ್ದಾರೆ ಎನ್ನುವುದನ್ನು ಮರೆಯಬಾರದು"ಎಂದು ಎಂಬಿಪಿ ಹೇಳಿದ್ದಾರೆ. ಕಾಂಗ್ರೆಸ್ಸಿನಲ್ಲಿ ಆ ಸಮುದಾಯದ ಅತ್ಯಂತ ಪ್ರಭಾವೀ ನಾಯಕರಲ್ಲಿ ಎಂ.ಬಿ.ಪಾಟೀಲ್ ಮಂಚೂಣಿಯಲ್ಲಿ ಬರುತ್ತಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಮುನ್ನ
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಮುನ್ನ ಆ ಹುದ್ದೆಗೆ ಎಂ.ಬಿ.ಪಾಟೀಲ್ ಅವರ ಹೆಸರು ಬಲವಾಗಿ ಕೇಳಿಬರುತಿತ್ತು. ಆದರೆ, ಆ ವೇಳೆ ಲಿಂಗಾಯತ ಸಮುದಾಯದ ಯಡಿಯೂರಪ್ಪನವರು ಸಾಕಷ್ಟು ಪ್ರಭಾವೀ ಆಗಿರುವುದರಿಂದ, ಸದ್ಯಕ್ಕೆ ಆ ಹುದ್ದೆಯನ್ನು ಎಂಬಿಪಿಯವರಿಗೆ ನೀಡುವುದು ಬೇಡ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿತ್ತು ಎನ್ನುವ ಮಾತಿದೆ.
Recommended Video
ಸಿದ್ದರಾಮಯ್ಯನವರ ಆಪ್ತ ಬಣದ ನಾಯಕ ಎಂ.ಬಿ.ಪಾಟೀಲ್
ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡಿತ್ತು. ಈ ವಿಚಾರ ಪಕ್ಷದೊಳಗೂ ಕಂದಕವನ್ನು ಮಾಡಿತ್ತು, ಎಂ.ಬಿ.ಪಾಟೀಲ್ ಅವರನ್ನು ಸಿದ್ದರಾಮಯ್ಯನವರ ಆಪ್ತ ಬಣದ ನಾಯಕ ಎಂದು ಗುರುತಿಸಲಾಗುತ್ತಿದೆ. ಹಾಗಾಗಿ, ಸುತ್ತೂರಿನಲ್ಲಿ ಎಂಬಿಪಿ ನೀಡಿದ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.